ಬೆಂಗಳೂರು ಕೆರೆಗಳನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಪಡೆಯಲು ಚಿಂತನೆ
ಬೆಂಗಳೂರು, ಜೂನ್ 27: ನಗರದ ಬೆಳ್ಳಂದೂರು ಸೇರಿದಂತೆ ಎಲ್ಲ ಕೆರೆಗಳನ್ನು ವಿವಿಧ ಇಲಾಖೆಗಳ ವ್ಯಾಪ್ತಿಯಿಂದ ಅರಣ್ಯ ಮತ್ತು ಪರಿಸರ ಇಲಾಖೆಗೆ ಹಸ್ತಾಂತರಿಸುವ ಚಿಂತನೆ ಇದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಆರ್. ಶಂಕರ್ ತಿಳಿಸಿದರು.
ವಿಕಾಸಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ, ರಾಜ್ಯದ ಎಲ್ಲಾ ಕೆರೆಗಳನ್ನು ಅರಣ್ಯ ಇಲಾಖೆಗೆ ಒಳಪಡಿಸುವ ಚಿಂತನೆ ಇದೆ ಎಂದು ಹೇಳಿದರು.
ಬೆಂಗಳೂರಿನ ಕೆರೆ ಒತ್ತುವರಿ ಪರಿಶೀಲಿಸಿದ ಡಿಸಿಎಂ ಜಿ.ಪರಮೇಶ್ವರ್
ಬೆಂಗಳೂರಿನಲ್ಲಿರುವ ಸಾಕಷ್ಟು ಕೆರೆಗಳು ಮಲಿನವಾಗಿವೆ, ಅದಕ್ಕೆ ಚರಂಡಿ ನೀರುಗಳು, ಕಾರ್ಖಾನೆಗಳ ಯುಷಯುಕ್ತ ವಸ್ತುಗಳು ಬಂದು ಸಂಪೂರ್ಣ ಕಲುಷಿತಗೊಂಡಿದೆ, ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಲಕ್ಷಾಂತರ ಕೆರೆಗಳು, ಸಣ್ಣ ನೀರಾವರಿ ಇಲಾಖೆ ಹಾಗು ವಿವಿಧ ಪ್ರಾಧಿಕಗಳ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಅವುಗಳ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದರು.
ಪರಿಸರ ಮಾಲಿನ್ಯ ಕಾರಣದಿಂದಾಗ ಕೆರೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಚರಂಡಿ ಹಾಗೂ ತ್ಯಾಜ್ಯ ನೀರನ್ನು ಕೆರೆಗಳಿಗೆ ನೇರವಾಗಿ ಹರಿಬಿಡಲಾಗುತ್ತಿದೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗಾಗಿ ಪರಿಸರ ಮತ್ತು ಅರಣ್ಯ ಇಲಾಖೆಗೆ ಎಲ್ಲ ಕೆರೆಗಳನ್ನು ಹಸ್ತಾಂತರಿಸುವ ಚಿಂತನೆ ಇದೆ ಎಂದು ಹೇಳಿದರು.