ಕೇರಳ - ಬೆಂಗಳೂರು ಬಸ್ ದರ ಏರಿಕೆ; ಪ್ರಯಾಣಿಸುವ ಮುನ್ನ ಇರಲಿ ಗಮನ
ಬೆಂಗಳೂರು, ನ.14: ಖಾಸಗಿ ಬಸ್ ನಿರ್ವಾಹಕರು ತಮ್ಮ ಟಿಕೆಟ್ ದರಗಳನ್ನು ಹೆಚ್ಚಿಸಿರುವ ಕಾರಣ ಬೆಂಗಳೂರಿನಿಂದ ಕೇರಳ ಕಡೆಗೆ ಹೋಗುವ ಪ್ರಯಾಣಿಕರು ಒಮ್ಮೆ ದರಗಳಿ ಕಡೆಗೆ ಗಮನ ಹರಿಸುವುದು ಅಗತ್ಯವಾಗಿದೆ.
ಬೆಂಗಳೂರು- ಕೇರಳ ಅಂತಾರಾಜ್ಯ ಪ್ರಯಾಣ ಮಾಡುವವರು ತಮ್ಮ ಟಿಕೆಟ್ಗಳಿಗೆ 150 ರಿಂದ 250 ರೂಪಾಯಿಗಳ ವರೆಗೆ ಹೆಚ್ಚುವರಿ ಹಣ ವ್ಯಯಿಸಬೇಕಾಗಿದೆ. ಅಂತಾರಾಜ್ಯ ಮಾರ್ಗಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಎಸಿ ಸ್ಲೀಪರ್ ಟಿಕೆಟ್ ಅನ್ನು 1,350 ರೂ.ನಿಂದ 1,500, 1,600 ರೂಪಾಯಿವರೆಗೆ ಹೆಚ್ಚಿಸಲಾಗಿದೆ.
ಪ್ರವಾಸಿಗರೇ ಎಚ್ಚರ; ಗೋವಾ ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆಗಳು
ನವೆಂಬರ್ 1 ರಿಂದ ರಾಜ್ಯದ ಹೊರಗೆ ನೋಂದಾಯಿಸಲಾದ ಎಲ್ಲಾ ಅಂತಾರಾಜ್ಯ ಬಸ್ಗಳಿಗೆ ಕೇರಳ ವಾಹನ ತೆರಿಗೆಯನ್ನು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಅಂತರರಾಜ್ಯ ಬಸ್ ನಿರ್ವಾಹಕರ ಸಂಘವು (IBOAK) ಟಿಕೆಟ್ ದರವನ್ನು ಹೆಚ್ಚು ಮಾಡಿದೆ. ಈ ಮಾರ್ಗದ ಬಹುಪಾಲು ಅಂತಾರಾಜ್ಯ ಬಸ್ಸುಗಳು ಕೇರಳಕ್ಕಿಂತ ಕಡಿಮೆ ತೆರಿಗೆ ದರಗಳನ್ನು ಹೊಂದಿರುವ ರಾಜ್ಯಗಳಲ್ಲಿ ನೋಂದಾಯಿಸಲ್ಪಟ್ಟಿವೆ.
ಪ್ರತಿ ಸೀಟಿಗೆ 4 ಸಾವಿರ ರೂ.ನಂತೆ ತ್ರೈಮಾಸಿಕ ತೆರಿಗೆ!
ಕೇರಳದಲ್ಲಿ ಹೊಸ ನಿಯಮ ಜಾರಿಗೆ ಬಂದ ನಂತರ ಬಸ್ ನಿರ್ವಾಹಕರು ಪ್ರತಿ ಸೀಟಿಗೆ 4 ಸಾವಿರ ರೂ.ನಂತೆ ತ್ರೈಮಾಸಿಕ ತೆರಿಗೆ ಪಾವತಿಸಬೇಕಿತ್ತು. 36 ಆಸನಗಳ ಬಸ್ಗೆ ಸುಮಾರು 1.44 ಲಕ್ಷ ರೂಪಾಯಿ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಗ್ರೀನ್ಲೈನ್ ಟ್ರಾವೆಲ್ಸ್ ಮಾಲೀಕ ಮತ್ತು ಐಬಿಒಎಕೆ ಅಧ್ಯಕ್ಷ ಕೆ ಆರ್ ಸಚ್ಚಿದಾನಂದ ಹೇಳಿದ್ದಾರೆ.
"ನಾವು ಕನಿಷ್ಠ ದರವನ್ನು ನಿಗದಿಪಡಿಸಿದ್ದೇವೆ. ಪ್ರಯಾಣಿಕರು ಬಸ್ಗಳ ವಿಭಿನ್ನ ದರಗಳಿಂದ ಗೊಂದಲಕ್ಕೊಳಗಾಗುತ್ತಾರೆ. ದರ ನಿಗದಿ ಮಾಡುವಾಗ ನಾವು ಹೆಚ್ಚುವರಿ ಹೊರೆಯನ್ನೂ ಹೊರಬೇಕಾಗುತ್ತದೆ. ಡಿಸೆಂಬರ್ ರಜೆಯ ಮೊದಲು ದರಗಳನ್ನು ನಿಗದಿಪಡಿಸಲು ಸಂಘವು ಯೋಚಿಸುತ್ತಿದೆ" ಎಂದು ಹೇಳಿದ್ದಾರೆ.
ಸಾರಿಗೆ ಇಲಾಖೆ ಆದೇಶಕ್ಕೆ ತಡೆ ನೀಡದ ಕೇರಳ ಹೈಕೋಟ್
ಅಂತಾರಾಜ್ಯ ಬಸ್ಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುವ ನಿಯಮವನ್ನು ಕೇರಳವು ತಮಿಳುನಾಡಿನಿಂದ ಅಳವಡಿಸಿಕೊಂಡಿದೆ. ಈ ನಿಯಮಗಳಿಂದ ಎರಡು ಕಡೆಗಳಲ್ಲಿ ತೆರಿಗೆ ಆವತಿ ಮಾಡುವಂತೆ ಮಾಡಲಾಗುತ್ತಿದೆ ಎಂದು ಬಸ್ ನಿರ್ವಾಹಕರು ದೂರಿದ್ದಾರೆ.
ಬಹು ತೆರಿಗೆಯನ್ನು ತಪ್ಪಿಸಲು ಮತ್ತು ಅಂತಾರಾಜ್ಯ ಸರಕು ಸೇವೆಗಳಂತೆಯೇ ಅಂತರ-ರಾಜ್ಯ ಪ್ರಯಾಣಿಕರ ಸೇವೆಗಳ ಸುಗಮ ಚಲನೆಗೆ ಅವಕಾಶ ನೀಡಲು ಸಂಸತ್ತು ಅಖಿಲ ಭಾರತ ಪ್ರವಾಸಿ ವಾಹನಗಳ (ಅಧಿಕಾರ ಅಥವಾ ಅನುಮತಿ) ನಿಯಮ 2021 ಅನ್ನು ಅಂಗೀಕರಿಸಿದೆ ಎಂದು ಬಸ್ ನಿರ್ವಾಹಕರು ಬೊಟ್ಟು ಮಾಡಿದ್ದಾರೆ.
ಬಸ್ ಮತ್ತು ಕಾರ್ ಆಪರೇಟರ್ಸ್ ಕಾನ್ಫೆಡರೇಶನ್ ಆಫ್ ಇಂಡಿಯಾವು ಎರಡೂ ಸರ್ಕಾರಗಳ ನಿರ್ಧಾರಗಳನ್ನು ಆಯಾ ಹೈಕೋರ್ಟ್ಗಳ ಮುಂದೆ ಪ್ರಶ್ನಿಸಿತ್ತು. ತೆರಿಗೆ ವಿಧಿಸುವ ಸಾರಿಗೆ ಇಲಾಖೆಯ ಆದೇಶಕ್ಕೆ ತಡೆ ನೀಡಲು ಕೇರಳ ಹೈಕೋರ್ಟ್ ಏಕ ಪೀಠ ನಿರಾಕರಿಸಿದ್ದು, ತಮಿಳುನಾಡು ಹೈಕೋರ್ಟ್ ಈ ತಿಂಗಳ ಮೂರನೇ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಸಲಿದೆ.
ಅಂತಾರಾಜ್ಯ ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳುವ ಎಂವಿಡಿ
ಮೋಟಾರು ವಾಹನ ಇಲಾಖೆ (MVD) ರಾಜ್ಯದ ತೆರಿಗೆ ಪಾವತಿಯನ್ನು ತಪ್ಪಿಸುವ ಅಂತಾರಾಜ್ಯ ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಬುಧವಾರ ಕಳಿಯಿಕಾವಿಲಾ ಗಡಿಯಲ್ಲಿ ಬಸ್ ಅನ್ನು ವಶಪಡಿಸಿಕೊಂಡಿದೆ. ಬಸ್ನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬಸ್ಗೆ ಸ್ಥಳಾಂತರಿಸಿದ ನಂತರ ಬೆಂಗಳೂರು-ತಿರುವನಂತಪುರಂ ಬಸ್ ಅನ್ನು ಇಲಾಖೆಯು ವಶಪಡಿಸಿಕೊಂಡಿದೆ.
"ಪ್ರಯಾಣಿಕರನ್ನು ಮತ್ತೊಂದು ವಾಹನಕ್ಕೆ ಸ್ಥಳಾಂತರಿಸುವ ಮೂಲಕ ಬಸ್ ನಿರ್ವಾಹಕರು ತೆರಿಗೆ ಪಾವತಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ಇಂತಹ ಕ್ರಮದಿಂದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುವುದರ ಜೊತೆಗೆ ತಿರುವನಂತಪುರಂ ತನಕ ಟಿಕೆಟ್ಗಾಗಿ ಹಣ ಪಾವತಿಸಿದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ" ಎಂದು ಸಹಾಯಕ ಮೋಟಾರು ವಾಹನ ನಿರೀಕ್ಷಕ ಬಿಬಿಶ್ ಬಾಬು ಹೇಳಿದ್ದಾರೆ.
ಬಸ್ಗಳ ತೆರಿಗೆ ಪಾವತಿ ಗಲಾಟೆ, ಪ್ರಯಾಣಿಕರ ಜೇಬಿಗೆ ಕತ್ತರಿ
ಪ್ರವಾಸಿಗರನ್ನು ಕರೆದೊಯ್ಯುವ ಬಸ್ಗಳಿಗೆ ಎಂವಿಡಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಬಸ್ ನಿರ್ವಾಹಕರು ದೂರಿದ್ದಾರೆ. ಇತ್ತಿಚೆಗೆ ಗುಜರಾತ್ನಿಂದ 34 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ತಿರುವನಂತಪುರದ ಅಮರವಿಲಾ ಚೆಕ್ಪೋಸ್ಟ್ನಲ್ಲಿ ನಿರ್ವಾಹಕರು 15,200 ರೂಪಾಯಿ ಪಾವತಿಸಿದ್ದರೂ, ಇಡುಕ್ಕಿಯಲ್ಲಿ 91,500 ರೂಪಾಯಿ ತೆರಿಗೆ ಪಾವತಿಸಬೇಕಾಯಿತು ಎಂದು ದೂರಿದ್ದಾರೆ.
'ಈ ಘಟನೆಯು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒಳ್ಳೆಯದಲ್ಲ. ನಾವು ಕೆಲ ಸಮಯದಿಂದ ಅಖಿಲ ಭಾರತ ಪ್ರವಾಸಗಳನ್ನು ನಡೆಸುತ್ತಿದ್ದೇವೆ. ಚೆಕ್ಪಾಯಿಂಟ್ನಲ್ಲಿ ತ್ರೈಮಾಸಿಕ ತೆರಿಗೆ ಪಾವತಿಸಬೇಕು ಎಂದು ನಮಗೆ ತಿಳಿದಿದ್ದರೆ ನಾವು ಕೇರಳಕ್ಕೆ ಪ್ರವೇಶಿಸುತ್ತಿರಲಿಲ್ಲ" ಎಂದು ನಿರ್ವಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.