ಪ್ರಧಾನಿ ಮೋದಿ ಮೆಚ್ಚುಗೆ ಗಳಿಸಿದ ಬೆಂಗಳೂರು ಹುಡುಗಿಯ ಪ್ರಶ್ನೆ
ಬೆಂಗಳೂರು, ಜನವರಿ 30: "ಹೆಚ್ಚಿನ ಅಂಕ ಗಳಿಸುವಂತೆ ಪಾಲಕರು ಮತ್ತು ಶಿಕ್ಷಕರು ಹೇರುವ ಒತ್ತಡವನ್ನು ನಿರ್ವಹಿಸುವುದು ಹೇಗೆ?" ಎಂದು ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಶ್ಲಾಘನೆಗೆ ಪಾತ್ರವಾಗಿದೆ.
ಮಂಗಳವಾರ ನವದೆಹಲಿಯಲ್ಲಿ ನಡೆದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಸಂತ ಮೇರಿ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ಲಾವಣ್ಯ ಆರ್. ಎಂಬುವವರು ಪ್ರಧಾನಿಯವರಲ್ಲಿ ಪ್ರಶ್ನೆಯೊಂದನ್ನು ಕೇಳಿದರು.
ಮಕ್ಕಳ ಅಂಕಪಟ್ಟಿ ಪೋಷಕರ ಗುರುತಿನ ಚೀಟಿ ಆಗಬಾರದು: ಮೋದಿ
"ಹೆಚ್ಚಿನ ಅಂಕ ಗಳಿಸುವಂತೆ ಪಾಲಕರು ಮತ್ತು ಶಿಕ್ಷಕರು ಹೇರುವ ಒತ್ತಡವನ್ನು ನಿರ್ವಹಿಸುವುದು ಹೇಗೆ?" ಎಂಬ ಅವರ ಪ್ರಶ್ನೆಗೆ ಉತ್ತರಿಸಿದ ಮೋದಿ, "ಒತ್ತಡ ಸೃಷ್ಟಿಯಾದಾಗ ಪರಿಸ್ಥಿತಿ ಕೈ ಮೀರುತ್ತದೆ. ಪಾಲಕರು ಮಕ್ಕಳ ಮೇಲೆ ಒತ್ತಡ ಹೇರದೆ, ಶಾಂತವಾಗಿ ಪ್ರತಿಕ್ರಿಯೆ ನೀಡಬೇಕು. ಕೆಲವು ಪಾಲಕರು ತಮ್ಮ ಮಕ್ಕಳ ಅಂಕಪಟ್ಟಿಯನ್ನು ತಮ್ಮ ಗುರುತಿನ ಚೀಟಿ ಎಂದುಕೊಂಡಿದ್ದಾರೆ. ಪಾಲಕರು ಬೇರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ತಮ್ಮ ಅಪೂರ್ಣ ಕನಸುಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳಲು ಯತ್ನಿಸುವುದೂ ಸರಿಯಲ್ಲ. ನಿಮ್ಮ ಕನಸನ್ನು ಅವರ ಹೆಗಲ ಮೇಲೆ ಹೇರಬೇಡಿ" ಎಂದು ಕಿವಿಮಾತು ಹೇಳಿದರು.
"ಮಕ್ಕಳು ಏಳೆಂಟು ವರ್ಷ ವಯಸ್ಸಿನಲ್ಲಿರುವಾಗ ಪಾಲಕರು ನಿಗಾ ವಹಿಸುವುದು ಅಗತ್ಯ. ನಂತರ ಅವರ ಮೇಲೆ ಒತ್ತಡ ಹಾಕುವುದಕ್ಕೆ ಆರಂಭಿಸನೇಡಿ. ಅವರ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಿ." ಎಂದು ಅವರು ಹೇಳಿದರು.
ದೆಹಲಿಯ ತಾಲ್ಕೊಟೋರಾ ಸ್ಟೇಡಿಯಂ ನಲ್ಲಿ ನಡೆದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ 2000 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಪಿಎಂ ಮೋದಿಗೆ ಸೇರಿದ 270 ಗಿಫ್ಟ್ ಹರಾಜು, 5 ಲಕ್ಷ ರು ಗರಿಷ್ಠ ಬಿಡ್ಡಿಂಗ್!
ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರದಿಂದ ಸಮಾಧಾನಗೊಂಡ ಲಾವಣ್ಯ ಪ್ರತಿಕ್ರಿಯಿಸಿ, 'ಪ್ರಧಾನಿಯವರು ನೀಡಿದ ಉತ್ತರವನ್ನು ನಾನು ಒಪ್ಪುತ್ತೇನೆ. ಎಲ್ಲ ಪಾಲಕರೂ ಅವರ ಮಾತನ್ನು ಅನುಸರಿಸಬೇಕು. ನನ್ನ ಪಾಲಕರೂ ಹೀಗೆಯೇ ಒತ್ತಡ ಹೇರುತ್ತಿದ್ದರು. ಆದರೆ ನಂತರ ಅವರಿಗೆ ಅರಿವಾಯಿತು. ನನ್ನನ್ನು ಯೋಗಕ್ಕೆ ಕಳಿಸಿದರು. ನಾನು ನಿಯಮಿತವಾಗಿ ಯೋಗ ಮಾಡಿ, ನನ್ನ ಒತ್ತಡವನ್ನು ನಿಯಂತ್ರಿಸುವುದನ್ನು ಕಲಿತಿದ್ದೇನೆ' ಎಂದಿದ್ದೆ.