Get Updates
Get notified of breaking news, exclusive insights, and must-see stories!

ಇಂದೋರ್ ಮಾದರಿ ಬೆಂಗಳೂರಿನಲ್ಲೂ ಕಲುಷಿತ ನೀರಿನ ಸಮಸ್ಯೆ: ಜಲಮಂಡಳಿ ಹೇಳಿದ್ದೇನು

ಬೆಂಗಳೂರು: ಇಡೀ ದೇಶವೇ ಬೆಚ್ಚಿ ಬೀಳುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ದೇಶದ ಅತೀ ಸ್ವಚ್ಛತಾ ನಗರ ಎಂದೇ ಖ್ಯಾತಿ ಗಳಿಸಿರುವ ಇಂದೋರ್‌ನಲ್ಲಿ ನೀರಿನಲ್ಲಿ ಚರಂಡಿಯ ಕಲುಷಿತ ನೀರು ಸೇರಿ 9 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ 150ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ಸೇರಿದ್ದಾರೆ. ಕಲುಷಿತ ನೀರು ಕುಡಿದ ಜನರಿಗೆ ಬೇಧಿ ಶುರುವಾಗಿ, ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿ ಜನ ಮೃತಪಟ್ಟಿದ್ದಾರೆ. ಇದೀಗ ಬೆಂಗಳೂರಿನಲ್ಲೂ ಕಲುಷಿತ ನೀರು ಸೇವಿಸಿ ಜನ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

ಬೆಂಗಳೂರಿನ ಸುಂಕದಕಟ್ಟೆ, ಹೇರೋಹಳ್ಳಿ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದಲೂ ನೀರಿನ ಸಮಸ್ಯೆ ಇದೆ. ಈ ಸಂಬಂಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಸ್ಥಳೀಯ ನಿವಾಸಿ ಕೃಷ್ಣಭಟ್ ಅವರು ದೂರಿದ್ದಾರೆ. ಈ ಸಂಬಂಧ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪೋಸ್ಟ್‌ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Bengaluru Faces Polluted Water Issue BWSSB Responds

ಮಧ್ಯಪ್ರದೇಶದ ಇಂದೋರ್ ಸನ್ನಿವೇಶವನ್ನು ಕಳೆದ ದೀಪಾವಳಿಯಿಂದಲೂ ಬೆಂಗಳೂರಿನ ಸುಂಕದಕಟ್ಟೆ, ಹೇರೋಹಳ್ಳಿ ಪ್ರದೇಶದಲ್ಲಿ ಏರಿಯಾದ ಜನರು ಸಹ ಎದುರಿಸುತ್ತಿದ್ದೇವೆ. ಬೇಧಿಯಿಂದ ಆಸ್ಪತ್ರೆಗೆ ಸೇರುವುದರಿಂದ ಜಸ್ಟ್ ಮಿಸ್. ನೀರಿನ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಪ್ರತಿ ದಿನವೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಾಟರ್‌ಮ್ಯಾನ್‌ನಿಂದ ಹಿಡಿದು ಎಂಜಿನಿಯರ್‌ಗಳ ವರೆಗೆ ಎಲ್ಲರನ್ನೂ ಫಾಲೋ ಅಪ್ ಮಾಡುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಅಷ್ಟೇ ಅಲ್ಲ ಜಲಮಂಡಳಿ ಅಧ್ಯಕ್ಷ ಡಾ, ರಾಮ್ ಪ್ರಸಾತ್‌ ಮನೋಹರ್ ಅವರ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದರೆ ನಮ್ಮ ರಾಜ್ಯದ ಆಡಳಿತ ಯಾವ ಮಟ್ಟಕ್ಕೆ ಇದೆ ಎಂಬುದನ್ನು ನಾವು ಊಹಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ದೀಪಾವಳಿ ಸಮಯದಲ್ಲಿ ನಮ್ಮ ಬೀದಿಯ 8-10 ಮನೆಗಳಿಗೆ ಬರುತ್ತಿದ್ದ ಕಾವೇರಿ ನೀರು ಚರಂಡಿಯ ವಾಸನೆ ಬರುವುದಕ್ಕೆ ಶುರುವಾಯಿತು. ಸಾಮಾನ್ಯವಾಗಿ ಸಂಪ್ ಟ್ಯಾಂಕ್‌ಗಳಿಗೆ ನೀರು ಬರುವುದರಿಂದ, ಓವರ್‌ಹೆಡ್ ಟ್ಯಾಂಕ್‌ಗೆ ನೀರು ಪಂಪ್ ಆಗುವವರೆಗೆ ಎಲ್ಲವೂ ಆಟೋಮ್ಯಾಟಿಕ್ ಸಿಸ್ಟಮ್ ಇರುತ್ತೆ. ನಮ್ಮ ಮನೆಯಲ್ಲೂ ಹಾಗೆಯೇ ಇತ್ತು. ಕಾವೇರಿ ನೀರು ವಾರಕ್ಕೆರಡು ಬಾರಿ ಬಂದಾಗ, ಸಂಪ್ ಟ್ಯಾಂಕ್ ಖಾಲಿ ಇತ್ತು ಎಂದಾದರೆ, ನೀರು ಆಟೋಮ್ಯಾಟಿಕ್ ಆಗಿ ಆನ್ ಆಗಿ, ಓವರ್‌ಹೆಡ್ ಟ್ಯಾಂಕ್ ಖಾಲಿಯಾದಾಗ ಆಟೋಮ್ಯಾಟಿಕ್ ಆಗಿ ಆನ್ ಆಗುವ ವ್ಯವಸ್ಥೆಗೆ ನಾವೆಲ್ಲ ಒಗ್ಗಿಕೊಂಡಿದ್ದೇವೆ.

ಆಟೋ ವ್ಯವಸ್ಥೆ ಇದ್ದಾಗ, ದೀಪಾವಳಿಗೂ ಎರಡು ದಿನ ಮೊದಲು ಕಾವೇರಿ ನೀರು ಬರುವಾಗ ಅದರಲ್ಲಿ ಕಾವೇರಿ ನೀರಿನ ಬದಲಿಗೆ ನೇರವಾಗಿ ಚರಂಡಿ ನೀರು ಹರಿದಿದೆ. ಪಕ್ಕದ ಒಂದು ಮನೆಯವರು ಕಾವೇರಿ ನೀರಿನ ಪೈಪ್‌ಗೇ ಒಂದು ನಲ್ಲಿ ಹಾಕಿಕೊಂಡಿದ್ದಾರೆ. ಹಾಗೆ ನೀರು ಬಂದಾಗ ಅವರು ನಲ್ಲಿಯಲ್ಲಿ ನೀರು ಹಿಡಿದುಕೊಂಡಾಗ ನೀರು ವಾಸನೆ ಹೊಡೆದಿದೆ. ಹಾಗೆಯೇ, ಅವರು ಸೀದಾ ವಾಟರ್‌ಮ್ಯಾನ್‌ಗೆ ಹೇಳಿದ್ದಾರೆ. ಆದರೆ ವಾಟರ್ ಮ್ಯಾನ್ "ಹೌದಾ...? ಸರಿ ಬಿಡಿ ನೋಡ್ತೀನಿ" ಅಂತ ಹೇಳಿ ಹೋದವ, ಮತ್ತೆ ಪತ್ತೆ ಇಲ್ಲ. ಅಷ್ಟೊತ್ತಿಗಾಗಲೇ ಎಲ್ಲರ ಮನೆ ಸಂಪ್ ಟ್ಯಾಂಕ್‌ನಲ್ಲಿ ಈ ಚರಂಡಿ ನೀರು ತುಂಬಿತ್ತು. ಅದಾಗಲೇ ಸಂಪ್ ಟ್ಯಾಂಕ್‌ನಲ್ಲಿ ನೀರು ಇದ್ದುದರಿಂದ ಈ ಚರಂಡಿ ನೀರಿನ ವಾಸನೆಯ ತೀವ್ರತೆ ಕಡಿಮೆಯಾಗಿತ್ತು.

ಮೊದ ಮೊದಲು ಗೊತ್ತಾಗಲಿಲ್ಲ. ಒಂದೆರಡು ದಿನ ಕಳೆದ ಮೇಲೆ ನಮ್ಮ ಮನೆಯಲ್ಲಿ ಬಾತ್‌ರೂಮ್‌ನಲ್ಲಿ ನೀರು ಬಿಟ್ಟಾಗ ಇದೇನೋ ವಾಸನೆ ಬರ್ತಾ ಇದೆಯಲ್ಲ ಅಂತ ನೋಡಿ, ಸಂಪ್ ಟ್ಯಾಂಪ್‌ ಮುಚ್ಚಳ ತೆಗೆದು ನೋಡಿದರೆ ವಿಪರೀತ ವಾಸನೆ. ಅದೇ ದಿನ ಬೆಳಗ್ಗಿನಿಂದ ಮನೆಯಲ್ಲಿ ಎಲ್ಲರಿಗೂ ನಿಧಾನವಾಗಿ ಬೇಧಿ ಶುರುವಾಗಿತ್ತು. ಆಗಲೇ ಮಕ್ಕಳು ಮಾರು - ನಾಲ್ಕು ಬಾರಿ ಬಾತ್‌ರೂಮ್‌ಗೆ ಹೋಗಿ ಬಂದಿದ್ದರು. ಇದೆಲ್ಲೋ ಆಹಾರದಲ್ಲಿ ವ್ಯತ್ಯಾಸವಾಗಿರಬಹುದು ಎಂದು ಮೊದಲು ಸುಮ್ಮನಾಗಿದ್ದೆವು.

ತಕ್ಷಣ ಸಂಪ್ ಟ್ಯಾಂಕ್ ಕ್ಲೀನ್ ಮಾಡುವವರನ್ನು ಕರೆಸಿ ಇಡೀ ಸಂಪ್ ಟ್ಯಾಂಕ್‌, ಓವರ್‌ಹೆಡ್ ಟ್ಯಾಂಕ್‌ ನೀರು ಖಾಲಿ ಮಾಡಿ, ತೊಳೆಸಿ, ಟ್ಯಾಂಕರ್‌ನಿಂದ ನೀರು ತಂದು ಹಾಕಿಸಿದ್ದಾಯಿತು. ಆದರೂ ಆ ವಾಸನೆ ಹೋಗಿರಲಿಲ್ಲ. ಕೊನೆಗೆ ಕ್ಲೋರಿನ್ ಎಲ್ಲಿ ಸಿಗುತ್ತೆ ಅಂತ ಹುಡುಕಿಕೊಂಡು ಹೋಗಿ, ವಾಸನೆ ತೆಗೆಯುವುದಕ್ಕೆ ಅಂತ ಕ್ಲೋರಿನ್ ಅನ್ನೂ ಸಂಪ್ ಟ್ಯಾಂಕ್‌ಗೆ ಹಾಕಿದ್ದಾಯ್ತು. ಇಷ್ಟಾಗುತ್ತಿರುವ ಹೊತ್ತಲ್ಲೇ ಬಿಡ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದೆ. ವಾಟರ್‌ಮ್ಯಾನ್ ಬಂದು ಚೆಕ್ ಮಾಡಿ ನೋಡಿದರೆ, ಈ ಬೀದಿಯ ಹತ್ತಾರು ಮನೆಗಳಿಗೆ ಇದೇ ನೀರು ಬರುತ್ತಿದೆ. ಅವನು ನೀರು ಬಿಡದೇ ಇದ್ದರೂ ಕಾವೇರಿ ಪೈಪ್‌ನಲ್ಲಿ ಚರಂಡಿ ನೀರು ಹರಿಯುತ್ತಿದೆ.

ಕೊನೆಗೆ ಪೈಪ್‌ನ ಕೊನೆಯಲ್ಲಿ ಹಾಕಿದ್ದ ಮುಚ್ಚಳ ತೆಗೆದು ಪೈಪ್‌ನಲ್ಲಿ ಸೇರಿಕೊಂಡಿದ್ದ ಅಷ್ಟೂ ಗಲೀಜು ನೀರನ್ನೂ ಹೊರಬಿಟ್ಟು, ಶುದ್ಧ ನೀರನ್ನು ಬಿಟ್ಟು, ಐದು ನಿಮಿಷ ಆ ನೀರು ಹರಿದು ಹೋಗಿ ಪೈಪ್ ಸ್ವಚ್ಛವಾದ ಮೇಲೆ ಸರಿಯಾಯಿತು ಎಂದ. ಮೇಲೆ ಎಲ್ಲೋ ಒಂದು ಕಡೆ ಚರಂಡಿ ನೀರಿನ ಚೇಂಬರ್ ಪಕ್ಕದಲ್ಲೇ ಕಾವೇರಿ ನೀರಿನ ಪೈಪ್ ಹೋಗಿದೆ, ಅಲ್ಲಿ ಸರಿ ಮಾಡಿದ್ದೇನೆ ಇನ್ನು ಸರಿಯಾಯಿತು ಎಂದಿದ್ದರು. ಆದರೆ, ಮುಂದಿನ ವಾರ ಮತ್ತದೇ ಸಮಸ್ಯೆ.

ಇವತ್ತಿನವರೆಗೂ ಸಮಸ್ಯೆ ಹೀಗೆಯೇ ಇದೆ. ಕಾವೇರಿ ಪೈಪು ಮತ್ತು ಚರಂಡಿ ನೀರು ಹರಿಯುವ ಪೈಪು ಎರಡೂ ಫ್ರೆಂಡಾಗಿವೆ. ನಾವು ಈಗ ಕಾವೇರಿ ನೀರಿನ ಸಹವಾಸ ಬಿಟ್ಟಿದ್ದೇವೆ.... ಆದರೆ, ಎಂಜಿನಿಯರ್‌ಗಳಿಗೆ ಮಾಡುತ್ತಿದ್ದ ಫಾಲೋ ಅಪ್ ಮಾತ್ರ ಹಾಗೆಯೇ ಮಾಡುತ್ತಲೇ ಇದ್ದೇನೆ. ಅದರ ಮಧ್ಯೆಯೂ ಮೊನ್ನೆ ಬೇರೆ ಎಲ್ಲೋ ಪೈಪ್ ಒಡೆದಿತ್ತು ಸರಿ ಮಾಡಿದ್ದೇನೆ, ಸಮಸ್ಯೆ ಬಗೆಹರಿದುಬಿಟ್ಟಿದೆ ಅಂತ ಎಂಜಿನಿಯರ್‌ಗಳಿಗೆ ವಾಟರ್‌ಮ್ಯಾನ್ ಹೇಳಿ ಬಿಟ್ಟಿದ್ದ. ಫೊನ್ ಮಾಡಿದರೆ, ಎಲ್ಲ ಸರಿಯಾಗಿದೆಯಲ್ವಾ ಅಂತ ಉತ್ತರ. ಅಲ್ಲೆಲ್ಲೋ ಸರಿ ಮಾಡಿದರೆ, ಇಲ್ಲಿ ಸಮಸ್ಯೆ ಹೇಗೆ ಬಗೆಹರಿಯುತ್ತೆ ಅಂತ ಕೇಳಿ ಬೈದೆ. ಮೊನ್ನೆ ಸೋಮವಾರದಿಂದ ಮತ್ತೆ ಪೈಪ್‌ನಲ್ಲಿ ಚರಂಡಿ ನೀರು ತುಂಬಿಕೊಂಡಿದೆ.

ಎರಡು ತಿಂಗಳಿನಿಂದ ಫಾಲೋ ಅಪ್ ಮಾಡುತ್ತಿದ್ದರು ಯಾರೂ ಸೀನಿಯರ್ ಹಿರಿಯ ಎಂಜಿನಿಯರ್‌ಗಳು ಬಂದಿರಲಿಲ್ಲ. ಎರಡು ವಾರದ ಹಿಂದೆ ಒಬ್ಬರು ಎಂಜಿನಿಯರ್ ಬಂದು, ವಾಟರ್‌ಮ್ಯಾನ್‌ಗೆ ಬೈದು, ಎಲ್ಲ ಚೇಂಬರ್‌ಗಳನ್ನೂ ಚೆಕ್ ಮಾಡಿ ಅಂತ ಹೋದರು ಮತ್ತೆ ಬರಲೇ ಇಲ್ಲ ಎಂದು ಕೃಷ್ಣಭಟ್ ಅವರು ತಿಳಿಸಿದ್ದಾರೆ.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದ ಜಲಮಂಡಳಿ

ಇನ್ನು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಜಲಮಂಡಳಿ ಸುಂಕದಕಟ್ಟೆ, ಹೇರೋಹಳ್ಳಿ ಪ್ರದೇಶ ವ್ಯಾಪ್ತಿಯ ಸಹಾಯಕ ಎಂಜಿನಿಯರ್ ವಿಶ್ವನಾಥ್ ಅವರು ತಿಳಿಸಿದ್ದಾರೆ. Oneindia Kannadaದೊಂದಿಗೆ ಮಾತನಾಡಿದ ಅವರು ಈ ಭಾಗದಲ್ಲಿ ಎಲ್ಲಿಂದ ಕಲುಷಿತ ನೀರು ಬರುತ್ತಿದೆ ಎನ್ನುವುದು ನಿಖರವಾಗಿ ತಿಳಿದಿರಲಿಲ್ಲ. ಮನೆಯೊಂದರಿಂದ ಕಾವೇರಿ ನೀರಿಗೆ ಒಳಚಂಡಿ ನೀರು ಸೇರುತ್ತಿತ್ತು. ಇದನ್ನು ರೋಬೋಟಿಕ್ ಕ್ಯಾಮೆರಾ ಬಳಸಿ ಪತ್ತೆ ಮಾಡಲಾಗಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+