Vande Bharat Express: ಬೆಂಗಳೂರಿನ ಈ ವಂದೇ ಭಾರತ್ ರೈಲು ರದ್ದು, ಸಚಿವರ ಮಾಹಿತಿ
ಬೆಂಗಳೂರು, ನವೆಂಬರ್ 30: ವಂದೇ ಭಾರತ್ ರೈಲಿಗೆ ದೇಶದ ವಿವಿಧ ರಾಜ್ಯಗಳಲ್ಲಿ ಬೇಡಿಕೆ ಇದೆ. ಇಂತಹ ಸಮಯದಲ್ಲಿಯೇ ಸದ್ಯ ಓಡುತ್ತಿರುವ ರೈಲನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆಯೇ?. ಅದರಲ್ಲೂ ಬೆಂಗಳೂರಿಗೆ ಬರುತ್ತಿದ್ದ, ಸದಾ ಪ್ರಯಾಣಿಕರು ತುಂಬಿರುತ್ತಿದ್ದ ರೈಲನ್ನು ರದ್ದು ಮಾಡಲಾಗಿದೆಯೇ? ಎಂಬ ಚರ್ಚೆಗಳು ನಡೆದಿವೆ. ಈ ಕುರಿತು ಲೋಕಸಭೆ ಕಲಾಪದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿಯನ್ನು ನೀಡಿದ್ದಾರೆ.
ಭಾರತೀಯ ರೈಲ್ವೆ ಬೆಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿತ್ತು. ರೈಲು ಸಂಚಾರ ಆರಂಭವಾದಷ್ಟೇ ವೇಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದ ರೈಲನ್ನು ರದ್ದು ಮಾಡಿದ್ದು ಏಕೆ?, ನಿಜವಾಗಿ ಆಗಿರುವುದೇನು? ಎಂದು ರೈಲ್ವೆ ಸಚಿವರು ವಿವರಣೆ ನೀಡಿದ್ದಾರೆ.

ರೈಲು ರದ್ದುಗೊಳಿಸಿಲ್ಲ: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿಯ ಪ್ರಕಾರ ಬೆಂಗಳೂರು-ಎರ್ನಾಕುಲಂ ನಡುವಿನ ವಂದೇ ಭಾರತ್ ರೈಲನ್ನು ರದ್ದುಗೊಳಿಸಿಲ್ಲ. ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಮಾತ್ರ ಈ ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಓಡಿಸಲಾಗುತ್ತಿತ್ತು.
"ವಿಶೇಷ ರೈಲಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ಪರಿಚಯಿಸಲಾಗಿತ್ತು. ಜುಲೈ 31 ರಿಂದ ಆಗಸ್ಟ್ 26, 2024ರ ತನಕ ಎರ್ನಾಕುಲಂ-ಬೆಂಗಳೂರು ಕಂಟೋನ್ಮೆಂಟ್ ನಡುವೆ (ರೈಲು ಸಂಖ್ಯೆ 06001/ 06002) ರೈಲನ್ನು ಓಡಿಸಲಾಗಿದೆ. ಹೆಚ್ಚುವರಿ ಬೋಗಿಯನ್ನು ಬಳಕೆ ಮಾಡಿಕೊಂಡು ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಈ ಮಾರ್ಗದಲ್ಲಿ ಇರುವ ರೈಲಿನ ಜೊತೆಗೆ 9 ಟ್ರಿಪ್ ಸಂಚಾರವನ್ನು ನಡೆಸಲಾಗಿದೆ" ಎಂದು ಸಚಿವರು ಹೇಳಿದ್ದಾರೆ.
"ತಾತ್ಕಾಲಿಕ ರೈಲನ್ನು ಮುಂದುವರೆಸುವ ಅಥವ ರದ್ದುಗೊಳಿಸುವ ರೀತಿಯಲ್ಲಿ ನೋಡಲು ಬರುವುದಿಲ್ಲ. ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ಕಾರ್ಯ ಮುಂದುವರೆದಿದೆ. ಸಂಚಾರ ದಟ್ಟಣೆ, ಪ್ರಯಾಣಿಕರ ಬೇಡಿಕೆ, ಸಂಪನ್ಮೂಲ ಸಂಗ್ರಹಣೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಕುರಿತು ತೀರ್ಮಾನ ಮಾಡಲಾಗುತ್ತದೆ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
"ಈ ಮಾದರಿಯಲ್ಲಿಯೇ ಎರ್ನಾಕುಲಂ-ಬೆಂಗಳೂರು ಕಂಟೋನ್ಮೆಂಟ್ ನಡುವೆ ಶಾಶ್ವತವಾದ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಿರಲಿಲ್ಲ. ತಾತ್ಕಾಲಿಕವಾಗಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ರೈಲು ಓಡಿಸಲಾಗುತ್ತಿತ್ತು" ಎಂದು ಸಚಿವರು ತಿಳಿಸಿದ್ದಾರೆ.
ಭಾರತೀಯ ರೈಲ್ವೆ ಓಣಂ ಹಬ್ಬದ ಸಂದರ್ಭದಲ್ಲಿ ವಿಶೇಷ ರೈಲಿನ ಮಾನದಂಡದಲ್ಲಿ ಎರ್ನಾಕುಲಂ ಮತ್ತು ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಓಡಿಸುತ್ತಿತ್ತು. ಕೇರಳದಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಇದು ಸಹಕಾರಿಯಾಗಿತ್ತು. ರೈಲು ಸಹ ಸಂಪೂರ್ಣ ಭರ್ತಿಯಾಗಿ ಸಂಚಾರ ನಡೆಸುತ್ತಿತ್ತು.
ಆದರೆ ಓಣಂ ಹಬ್ಬದ ಋತುವಿನ ಬಳಿಕವೂ ಈ ರೈಲನ್ನು ಮುಂದುವರೆಸಬೇಕು ಎಂದು ಪ್ರಯಾಣಿಕರು, ಜನಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದರು. ಆದರೆ ಆಗಸ್ಟ್ ಅಂತ್ಯದಲ್ಲಿ ವಿಶೇಷ ವಂದೇ ಭಾರತ್ ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅಶ್ವಿನಿ ವೈಷ್ಣವ್ ಕೇರಳಕ್ಕೆ ಭೇಟಿ ನೀಡಿದಾಗಲೂ ಈ ರೈಲುನ್ನು ಪುನಃ ಆರಂಭಿಸಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿತ್ತು.
ಬೆಂಗಳೂರಿನಲ್ಲಿ ಕೇರಳದ ಅನೇಕರು ವ್ಯಾಸಂಗ, ಉದ್ಯೋಗದಲ್ಲಿದ್ದಾರೆ. ಅವರಿಗೆ ಕೇರಳದಿಂದ ಬೆಂಗಳೂರಿಗೆ ಸಂಚಾರ ನಡೆಸಲು ಈ ರೈಲು ಸಹಕಾರಿಯಾಗಿದೆ. ಆದ್ದರಿಂದ ರೈಲು ಸೇವೆಯನ್ನು ಮುಂದುವರೆಸಬೇಕು ಎಂದು ಇಟ್ಟಿದ್ದ ಬೇಡಿಕೆ ಹುಸಿಯಾಗಿತ್ತು. ರೈಲು ಸಂಚಾರ ಸ್ಥಗಿತವಾಗಿತ್ತು.












Click it and Unblock the Notifications