ಬೆಂಗಳೂರು ಚರ್ಚೆ: ಇದು ನಾಚಿಕೆಗೇಡಿನ ಸಂಗತಿ ಎಂದ ತೇಜಸ್ವಿ ಸೂರ್ಯ!
ಬೆಂಗಳೂರು ಮೂಲಸೌಕರ್ಯ ಹಾಗೂ ಅಭಿವೃದ್ಧಿ ಲೋಪದ ವಿಚಾರವಾಗಿ ಉದ್ಯಮಿಗಳು ತಿರುಗಿ ಬಿದ್ದಿರುವ ಸಂದರ್ಭದಲ್ಲಿಯೇ ಸಂಸದ ತೇಜಸ್ವಿ ಸೂರ್ಯ ಅವರು ಸಹ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಬೆಂಗಳೂರಿನ ಸಮಸ್ಯೆಗಳನ್ನು ಪರಿಹರಿಸುವ ಬದಲಾಗಿ, ಉದ್ಯಮಿಗಳ ವಿರುದ್ಧವೇ ಮುಗಿಬಿದ್ದಿರುವ ಸಚಿವರಿಗೆ ಏನು ಹೇಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ ಸರ್ಕಾರದ ಹಲವು ಸಚಿವರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡುವ ಬದಲು, ಕಾಳಜಿಯಿಂದ ಬೆಂಗಳೂರಿನ ವಿಷಯ ಪ್ರಸ್ತಾಪಿಸುತ್ತಿರುವ ಹಾಗೂ ಕಾಳಜಿಯುಳ್ಳ ಬೆಂಗಳೂರಿನವರ ಮೇಲೆ ವಾಗ್ದಾಳಿ ಮಾಡುವುದರಲ್ಲಿ ನಿರತರಾಗಿರುವುದು ಎಂತಹ ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ. ಮುಂದುವರಿದು 1,100 ಕೋಟಿ ರೂಪಾಯಿ ಅನುದಾನ ಮತ್ತು ಕಾಲ್ಪನಿಕ ರಸ್ತೆ ಗುಂಡಿಗಳ ಅಂಕಿ - ಅಂಶಗಳನ್ನು ಉಲ್ಲೇಖಿಸುವುದರಿಂದ ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಒಂದು ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಪ್ರತಿದಿನ ರಸ್ತೆಗುಂಡಿಗಳಿಂದ ಹೈರಾಣಾಗಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಹೇಳಿರುವಂತೆ, ನಗರದಲ್ಲಿ ಕಸ ಮಾಫಿಯಾ ಅನಿಯಂತ್ರಿತವಾಗಿ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ಬೇರೂರಿರುವ ಸಮಸ್ಯೆಗಳನ್ನು ಸರಿಪಡಿಸುವ ಬದಲು, ಉದ್ಯಮಿ ಕಿರಣ್ ಮಜುಂದಾರ್-ಶಾ ಅವರಂತಹ ಸಾಧಕರ ಮೇಲೆ ವಾಗ್ದಾಳಿ / ತಿರುಗೇಟು ನೀಡುವ ಆಯ್ಕೆ ಮಾಡಿಕೊಂಡ ಸರ್ಕಾರವು ಇನ್ನೂ ಯಾವ ವಿಷಯದ ಮೇಲೆ ಗಮನ ಹರಿಸಬೇಕು ಎಂದು ತಿಳಿಯದಂತೆ ವರ್ತಿಸುತ್ತಿದೆ. ಬೆಂಗಳೂರಿನ ಅವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡುವವರನ್ನು ಗುರಿಯಾಗಿಸಿಕೊಳ್ಳುವ ಬದಲು, ಬೆಂಗಳೂರಿನ ಸಮಸ್ಯೆಯನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಈ ಸರ್ಕಾರ ಬೆಂಗಳೂರನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ.ಆದರೆ ಅದಕ್ಕೆ ಬದ್ಧತೆ ಹಾಗೂ ಹೆಚ್ಚಿನ ಮೂಲಭೂತ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ಉದ್ಯಮಿ ಕಿರಣ್ ಮಜುಂದಾರ್ ಶಾ ಟ್ವೀಟ್ ಹಂಚಿಕೆ: ಇನ್ನು ಸಂಸದ ತೇಜಸ್ವಿ ಸೂರ್ಯ ಅವರು ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಜುಂದಾರ್ ಶಾ ಅವರು, ನಾನು ಬಯಸುತ್ತಿರುವುದು ಬೆಂಗಳೂರಿನಲ್ಲಿ ಕಸ ಸಮಸ್ಯೆ ತೆರವು ಹಾಗೂ ಉತ್ತಮವಾದ ರಸ್ತೆ ಮರುನಿರ್ಮಾಣ ಮಾತ್ರ. ಇದನ್ನು ಗ್ರೇಟರ್ ಬೆಂಗಳೂರು ಆಡಳಿತ ಮಾಡಬೇಕಾಗಿದೆ. ಕಳಪೆ ಮತ್ತು ನಿಧಾನಗತಿಯ ಕೆಲಸಕ್ಕೆ ಸಚಿವರು ಅವರನ್ನು / ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಇಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಒಂದೇ ಪುಟದಲ್ಲಿರಬೇಕು. ಕಸ ಮಾಫಿಯಾ ತಮ್ಮ ಕೆಲಸವನ್ನು ಮಾಡದಿದ್ದರೆ ನಾವು ಮಾಡಲಿದ್ದೇವೆ ಎಂಬರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಸಚಿವ ಸಂತೋಷ್ ಲಾಡ್ ಅವರ ಹೇಳಿಕೆಗೆ ಕಿರಣ್ ಅವರು ತಿರುಗೇಟು ನೀಡಿದ್ದಾರೆ. ಸಂತೋಷ್ ಲಾಡ್ ಅವರು ಉದ್ಯಮಿಗಳೇ ಯಾಕೆ ಸಮಸ್ಯೆ ಪರಿಹರಿಸಬಾರದು ಎಂಬರ್ಥದಲ್ಲಿ ಮಾತನಾಡಿದ್ದರು.












Click it and Unblock the Notifications