ಬೆಂಗಳೂರಲ್ಲಿ ತಡರಾತ್ರಿ ಧಾರಾಕಾರ ಮಳೆ
ಬೆಂಗಳೂರು, ಸೆಪ್ಟೆಂಬರ್ 01 : ಬೆಂಗಳೂರು ನಗರದಲ್ಲಿ ಉಷ್ಣತೆ ಹೆಚ್ಚಾದ ಕಾರಣ ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಒಟ್ಟು 72 ಮಿ.ಮೀ ಮಳೆಯಾಗಿದ್ದು, ಉಷ್ಣತೆ ಹೆಚ್ಚಾದರೆ ಇಂದು ಮಳೆಯಾಗುವ ಸಾಧ್ಯತೆ ಇದೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ 11ಗಂಟೆ ಸಮಾರಿಗೆ ಸಣ್ಣಗೆ ಮಳೆ ಆರಂಭವಾಗಿತ್ತು. ನಂತರ ಗುಡುಗು, ಸಿಡಿಲು ಸಹಿತ ತಡರಾತ್ರಿ ತನಕ ಮಳೆ ಅಬ್ಬರಿಸಿದೆ. ರಸ್ತೆಗಳಲ್ಲಿ ತುಂಬಿದ್ದ ನೀರು ಮುಂಜಾನೆಯ ತನಕ ಹರಿದು ಹೋಗುತ್ತಿತ್ತು.

ಶಿವಾನಂದ ಸರ್ಕಲ್ ಬಳಿಕ ಅಂಡರ್ ಪಾಸ್ನಲ್ಲಿ ಆಡಿ ಕಾರು ನೀರಿನಲ್ಲಿ ಮುಳುಗಡೆಯಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರುನ್ನು ತೆರವುಗೊಳಿಸಿದರು. ಶಾಂತಿ ನಗರ, ಜಯನಗರ, ಬಸವನಗುಡಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಭಾರೀ ಮಳೆ ಸುರಿದಿದೆ.

ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿ 40 ಮನೆಗಳನ್ನು ಹೊಂದಿದ್ದ ಅಪಾರ್ಟ್ಮೆಂಟ್ನ ಕೆಳಮಹಡಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ಹೊರಹೋಗಲು ಅನುಕೂಲ ಮಾಡಿಕೊಟ್ಟು ಜನರ ಸಂಕಷ್ಟ ದೂರ ಮಾಡಿದರು.
'ವಾತಾವರಣದಲ್ಲಿ ಉಷ್ಣತೆ ಹೆಚ್ಚಾದ ಪರಿಣಾಮ ನಗರದಲ್ಲಿ ಮಳೆಯಾಗಿದೆ. ನಗರದಲ್ಲಿ 72 ಮಿ.ಮೀ.ಮಳೆಯಾಗಿದೆ. ಉಷ್ಣಾಂಶ ಹೆಚ್ಚಾದರೆ ಮತ್ತೆ ಮಳೆಯಾಗಲಿದೆ' ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.












Click it and Unblock the Notifications