Bengaluru Cold Weather : 4 ವರ್ಷದಲ್ಲೇ ನಗರದಲ್ಲಿ ಅತ್ಯಧಿಕ ಚಳಿ, ಉತ್ತರ ಕರ್ನಾಟಕದಲ್ಲೂ ಚಳಿ ಏರಿಕ, ಕಾರಣವೇನು?
ಬೆಂಗಳೂರು, ಜನವರಿ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಭಾರೀ ಚಳಿ ಆವರಿಸಿದ್ದು, ಬುಧವಾರ ಹಾಗೂ ಗುರುವಾರ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ನಾಲ್ಕು ವರ್ಷದಲ್ಲೇ ಅತ್ಯಂದ ಕನಿಷ್ಠ ಚಳಿ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ನಾಲ್ಕು ವರ್ಷದ ಹಿಂದೆ 2019 ರ ಜನವರಿ 2ರಂದು ಅತ್ಯಂತ ಕಡಿಮೆ ತಾಪಮಾನ (ಚಳಿ) 12.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದಾದ ನಂತರ ಈವರೆಗಿನ ನಾಲ್ಕು ವರ್ಷಗಳಲ್ಲಿ ದಾಖಲೆಯ ಮಟ್ಟಿದಲ್ಲಿ ಅತೀ ಕಡಿಮೆ ಚಳಿ ದಾಖಲಾಗಿರಲಿಲ್ಲ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮೈಕೊರೆಯುವ ಚಳಿ: ಶೀತ ಅಲೆ ಎಚ್ಚರಿಕೆ- ಐಎಂಡಿ
ಭಾರತೀಯ ಹವಾಮಾನ ಇಲಾಖೆ ದಾಖಲೆ ಪ್ರಕಾರ ಬೆಂಗಳೂರಿನಲ್ಲಿ ತೀವ್ರ ಚಳಿ 1984 ರ ಜನವರಿ 13ರಂದು ದಾಖಲಾಗಿತ್ತು. ಅಂದು ಕನಿಷ್ಠ ತಾಪಮಾನ 7.8ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾರ್ವಕಾಲಿಕ ದಾಖಲೆ ಆಗಿದೆ. ಇದಾದ ಬಳಿಕ ನಗರದಲ್ಲಿ ಹೆಚ್ಚು ಚಳಿ ದಾಖಲಾತಿ ನೋಡುವುದಾದರೆ 1992ರ ಜನವರಿ 9ಕ್ಕೆ ಕನಿಷ್ಠ ಉಷ್ಣಾಂಶ 11.2 ಡಿಗ್ರಿ ಸೆಲ್ಸಿಯಸ್, 1992ರಂದು ಜನವರಿ 6ಕ್ಕೆ 11.3 ಡಿಗ್ರಿ ಸೆಲ್ಸಿಯಸ್, 1977ರ ಜನವರಿ 5ರಲ್ಲಿ 11.4 ಡಿಗ್ರಿ ಸೆಲ್ಸಿಯಸ್), 1990ರಲ್ಲಿ ಜನವರಿ 15ರಂದು 11.5 ಡಿಗ್ರಿ ಸೆಲ್ಸಿಯಸ್ ಮತ್ತು 1993 ಜನವರಿ 19ರಂದು 11.6 ಡಿಗ್ರಿ ಸೆಲ್ಸಿಯಸ್ ಹಾಗೂ 1993ರ ಜನವರಿ 3ಕ್ಕೆ 11.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ಮೂಲಕ ಈ ದಿನಗಳಲ್ಲಿ ಮೈ ಕೊರೆವ ಚಳಿ ಕಂಡು ಬಂದಿತ್ತು.
4 ವರ್ಷದ ಚಳಿ ದಾಖಲಾತಿ ವಿವರ
ಇನ್ನೂ ಇತ್ತೀಚಿನ ವರ್ಷಗಳನ್ನು ನೋಡುವುದಾದರೆ 2015ರಲ್ಲಿ ಜನವರಿ 1ರಂದು 12.7 ಡಿಗ್ರಿ ಸೆಲ್ಸಿಯಸ್, 2016 ರಲ್ಲಿ ಜವನರಿ 29ರಂದು 12.9 ಡಿಗ್ರಿ ಸೆಲ್ಸಿಯಸ್, 2017ರ ಜನವರಿ 31ರಲ್ಲಿ 14.4 ಡಿಗ್ರಿ ಸೆಲ್ಸಿಯಸ್, 2018 ವರ್ಷ ಜನವರಿ 14 ಸಕ್ರಾಂತಿಯಂದು 14.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಬುಧವಾರ- ಗುರುವಾರ 13ಡಿ.ಸೆ. ಉಷ್ಣಾಂಶ
2022 ಬುಧವಾರ ಜನವರಿ 11 ಹಾಗೂ ಗುರುವಾರು ಜನವರಿ 12ರಂದು ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ವರದಿ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ತೀವ್ರ ಮೈ ಕೊರವ ಚಳಿ ಕಂಡು ಬರುತ್ತಿದ್ದು, ಬೆಳಗ್ಗೆ ಮಂಜು ಕವಿದಿರುವುದು ಕಂಡು ಬಂದಿದೆ. ನಗರದಲ್ಲಿ ಚಳಿ ವಾತಾವರಣ ಮುಂದಿನ ಇನ್ನೂ ಕೆಲವು ದಿನಗಳವರೆಗೆ ಹೀಗೆ ಮುಂದುವರಿಯುವ ನಿರೀಕ್ಷೆ ಇದೆ.
ತೀವ್ರ ಚಳಿ ದಾಖಲು: ವಿಜ್ಞಾನಿಗಳು ಉತ್ತರವೇನು?
ಚಳಿಗಾಲದ ನಾಲ್ಕು ತಿಂಗಳ ಪೈಕಿ ಜನವರಿಯಲ್ಲಿ ಸಾಮಾನ್ಯವಾಗಿ ಚಳಿ ಹೆಚ್ಚಿರುತ್ತದೆ. ಮೋಡಗಳು ಕಂಡು ಬಾರದೇ ಆಕಾಶ ಸಂಪೂರ್ಣವಾಗಿ ನೀರ್ಮಲವಾಗಿರುತ್ತದೆ. ಭೂಮಿ ತಾಪಮಾನ ರಾತ್ರಿ ಸಂದರ್ಭದಲ್ಲಿ ಸಂಪೂರ್ಣ ಕಡಿಮೆಯಾಗುತ್ತದೆ. ಹೀಗಾಗಿ ತಂಪಿನ ವಾತಾವರಣ ಕಂಡು ಬರುತ್ತದೆ. ಜೊತೆಗೆ ಕಳೆದ ಕೆಲವು ದಿನಗಳಿಂದ ರಾಜ್ಯದ ಉತ್ತರ ದಿಕ್ಕಿನಿಂದ ತೇವ ಭರಿತ ಗಾಳಿ ಬೀಸುವಿಕೆ ಅದರಲ್ಲೂ ರಾತ್ರಿ ಹೊತ್ತು ಹೆಚ್ಚಿರುತ್ತದೆ. ಈ ಎಲ್ಲ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಚಳಿ ತೀವ್ರಗೊಂಡಿದೆ. ಮುಂದಿನ ಎರಡು ದಿನ ಬಳಿಕ ವಾತಾವರಣ ಸಹಜ ಸ್ಥಿತಿಗೆ ಬರಲಿದೆ ಎಂದು ವಿಜ್ಞಾನಿ/ ಹವಾಮಾನ ತಜ್ಞ ಡಾ.ಪ್ರಸಾದ್ ತಿಳಿಸಿದರು.
2 ದಿನ ಉತ್ತರ ಕರ್ನಾಟಕದಲ್ಲಿ ಶೀತ ಅಲೆಗಳು
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ಉಷ್ಣಾಂಶ ದಾಖಲಾಗಿದೆ. ಬಾಗಲಕೋಟೆಯಲ್ಲಿ 6 ಡಿಗ್ರಿ ಸೆಲ್ಸಿಯಸ್, ಚಿಂತಾಮಣಿ 8.1ಡಿಗ್ರಿ ಸೆಲ್ಸಿಯಸ್, ಬೀದರ್, ವಿಜಯಪುರ ಜಿಲ್ಲೆಗಳು ತೀವ್ರ ಚಳಿಗೆ ಸಾಕ್ಷಿಯಾಗಿದ್ದು, ಅಲ್ಲಿ 7.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಮುಂದಿನ ಎರದು ದಿನಗಳ ಕಾಲದ ಮತ್ತದೇ ಜಿಲ್ಲೆಗಳು ಸೇರಿದಂತೆ ದಾವಣಗೆರೆ, ಹಾವೇರಿ, ಬೆಳಗಾವಿ, ಗದಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೀತ ಮಾರುಗಳು ಸಕ್ರಿಯವಾಗಿರಲಿವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.