ಮೂವರು ಶಂಕಿತ ಉಗ್ರರಲ್ಲಿ ಒಬ್ಬ ಎಂಬಿಎ ವಿದ್ಯಾರ್ಥಿ
ಬೆಂಗಳೂರು, ಜ. 9 : ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಮೂವರು ಶಂಕಿತ ಉಗ್ರರನ್ನು ಬೆಂಗಳೂರು ಸಿಸಿಬಿ ಹಾಗೂ ರಾಜ್ಯ ಆಂತರಿಕ ಭದ್ರತೆ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಎಂಬಿಎ ವಿದ್ಯಾರ್ಥಿಯಾಗಿದ್ದಾನೆ.
ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ರಾಜ್ಯ ಆಂತರಿಕ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ ಅವರು ಗುರುವಾರ ಸಂಜೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಶಂಕಿತ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು. [ಸ್ಫೋಟಕದೊಂದಿಗೆ ಭಟ್ಕಳ, ಬೆಂಗಳೂರಲ್ಲಿ ಮೂವರ ಬಂಧನ]

ಬಂಧಿತರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಿವಾಸಿಗಳಾದ ಸೈಯದ್ ಇಸ್ಮಾಯಿಲ್ ಅಫಕ್ (34), ಸದ್ದಾಂ ಹುಸೇನ್ (35) ಹಾಗೂ ಅಬ್ದೂಸ್ ಸುಬೂರ್ (24) ಎಂದು ಎಂ.ಎನ್.ರೆಡ್ಡಿ ಹೇಳಿದ್ದಾರೆ. ಇವರಿಂದ ಮೂರು ಕೆಜಿ ಅಮ್ಯೂನಿಯಂ ನೈಟ್ರೇಟ್, ಎಲೆಕ್ಟ್ರಾನಿಕ್ ಟೈಮರ್, ಡಿಜಿಟಲ್ ಸೆಕ್ಯೂರ್ಟ್ಸ್, ಡಿಟೋನೇಟರ್ ಸೇರಿದಂತೆ ಬಾಂಬ್ ತಯಾರಿಕೆಗೆ ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. [ಬೆಂಗಳೂರು ಸ್ಫೋಟದ ತನಿಖೆಗೆ ವಿಶೇಷ ತಂಡ]
ಬೆಂಗಳೂರಿನ ಪುಲಿಕೇಶಿ ನಗರದ ಸಮೀಪದ ಕಾಕ್ಸ್ಟೌನ್ ಹಾಗೂ ಭಟ್ಕಳದಲ್ಲಿನ ಶಂಕಿತ ಉಗ್ರರ ಮನೆಗಳ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದ್ದು, ಇವರಿಗೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ನಂಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಇವರ ಪಾತ್ರವಿರುವ ಕುರಿತು ತನಿಖೆ ನಡೆಯುತ್ತಿದೆ ಎಂದರು.
ಒಬ್ಬ ಎಂಬಿಎ ವಿದ್ಯಾರ್ಥಿ : ಬಂಧಿತರ ಪೈಕಿ ಅಬ್ದೂಲ್ ಸುಬೂರು ಎಂಬಿಎ ಓದುತ್ತಿದ್ದಾನೆ. ಇತರ ಇಬ್ಬರು ಬೆಂಗಳೂರಿನ ಕಾಕ್ಸ್ ಟೌನ್ನಲ್ಲಿ ವಾಸಿಸುತ್ತಿದ್ದರು, ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರು ನಗರದಲ್ಲಿರುವ ಇತರರೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ತನಿಖೆ ನಡೆಯುತ್ತಿದೆ.
ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣಕ್ಕೆ ನಿಷೇಧಿತ ಐಎಂ ಸಂಘಟನೆಯ ಶಂಕಿತ ಮೂವರು ಉಗ್ರರಿಗೂ ಸಂಪರ್ಕವಿರುವ ಕುರಿತು ಸದ್ಯ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದ ಎಂ.ಎನ್.ರೆಡ್ಡಿ ಹೇಳಿದ್ದಾರೆ. ಇತರ ಭಯೋತ್ಪಾದಕ ಸಂಘಟನೆಯೊಂದಿಗೆ ಇವರು ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಆಯುಕ್ತರು ಹೇಳಿದ್ದಾರೆ.












Click it and Unblock the Notifications