ಬೆಂಗಳೂರು: ಅಕ್ರಮ ಕಟ್ಟಡ: ತೆರವು ಮಾಡದೇ ಬಿಬಿಎಂಪಿ ನಿರ್ಲಕ್ಷ್ಯ, ಮಾಹಿತಿ ಕೇಳಿದ ಲೋಕಾಯುಕ್ತ
ಬೆಂಗಳೂರು, ಅಕ್ಟೋಬರ್ 05: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ನಿಯಮ ಮೀರಿ ನಿರ್ಮಿಸಲಾದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಹಿಂದೇಟು ಹಾಕುತ್ತಿದೆ. ಈ ನಡೆಯನ್ನು ಪ್ರಶ್ನಿಸಿ ಲೋಕಾಯುಕ್ತರು ವಿವರ ಕೇಳಿದೆ.
ಲೋಕಾಯುಕ್ತ ವಿವರ ಕೇಳಿ ಬಳಿಕ ಎಚ್ಚೆತ್ತುಕೊಂಡು ಅಂದಾಜು ವೆಚ್ಚ ಸಿದ್ಧಪಡಿಸಿರುವ ಬಿಬಿಎಂಪಿ ಅಧಿಕಾರಿಗಳು, ಟೆಂಡರ್ ಕರೆಯುವುದಾಗಿ ಹೇಳಿ ಮೂರು ತಿಂಗಳಿಂದ ದಿನ ದೂಡುತ್ತಿದ್ದಾರೆ ಎಂದು ಪಾಲಿಕೆ ವಿರುದ್ಧ ಆರೋಪಿಸಲಾಗಿದೆ. ಜಯನಗರ 6ನೇ ಬ್ಲಾಕ್ನ 23 ಮತ್ತು 24ನೇ ಅಡ್ಡರಸ್ತೆ ಶಾಸ್ತ್ರಿನಗರ 4ನೇ ಮುಖ್ಯರಸ್ತೆ, ಎಸ್.ಕರಿಯಪ್ಪ ರಸ್ತೆ, ಟಾಟಾ ಸಿಲ್ಕ್ ಫಾರ್ಮ್ನ 5ನೇ ಬಿ ಮುಖ್ಯರಸ್ತೆಗಳಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡಗಳನ್ನು ಕಟ್ಟಲಾಗಿದೆ ಎಂದು ಶಶಿಕುಮಾರ್ ಎಂಬುವರು ಬಿಬಿಎಂಪಿಗೆ ಕಳೆದ ಎರಡು ವರ್ಷದಿಂದ ದೂರು ನೀಡುತ್ತಲೇ ಇದ್ದಾರೆ.
ಬೆಂಗಳೂರು ಕೋವಿಡ್ ಕಂಟೈನ್ಮೆಂಟ್ ಝೋನ್ ಮುಕ್ತ: ಬಿಬಿಎಂಪಿ
ಒಟ್ಟು ಐದು ಕಟ್ಟಡಗಳ ಪೈಕಿ ಎರಡು ಕಟ್ಟಡಗಳಲ್ಲಿ ಬಿಬಿಎಂಪಿಯಿಂದ ಮಂಜೂರಾತಿ ಪಡೆದಿರುವ ನಕ್ಷೆ ಉಲ್ಲಂಘನೆ ಮಾಡಲಾಗಿದೆ. ಉಳಿದ ಮೂರು ಕಟ್ಟಡಗಳು ನಕ್ಷೆ ಮಂಜೂರಾತಿಯನ್ನೇ ಪಡೆದಿಲ್ಲ. ಸಹಾಯಕ ಎಂಜಿನಿಯರ್ ಆಗಿದ್ದ ಯತೀಶ್ ಅವರು ಈಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿದ್ದಾರೆ. ಅವರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಟ್ಟಡ ತಲೆ ಎತ್ತಿದ್ದರೂ ಸಹ ಅವರು ಕ್ರಮ ಕೈಗೊಳ್ಳದೇ ಮೀನ ಮೇಷ ಎಣಿಸುತ್ತಿದ್ದಾರೆ. ಈ ಕುರಿತು ಶಶಿಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೂ ದೂರು ನೀಡಿದ್ದಾರೆ. ಯಾವುದೇ ಪ್ರಯೋಜನವಾಗದಿದ್ದಾಗ ದೂರು ದಾರರು ಲೋಕಾಯುಕ್ತರ ಮೊರೆ ಹೋಗಿದ್ದಾರೆ.
ವಿವರಣೆ ಕೇಳಿದ ಲೋಕಾಯುಕ್ತ
ದೂರು ಪಡೆದ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಕಟ್ಟಡಗಳ ಬಗ್ಗೆ ವಿವರಣೆ ಕೇಳಿದ್ದಾರೆ. ನಂತರ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು, ಅಕ್ರಮ ಕಟ್ಟಡಗಳ ತೆರವಿಗೆ ಬಿಬಿಎಂಪಿ ಕಾಯ್ದೆ 356ರ ಅಡಿಯಲ್ಲಿ ಕ್ರಮಕ್ಕೆ ಮುಂದಾಗಿದ್ದರು. ಈ ಕಟ್ಟಡಗಳ ತೆರವಿಗೆ ಆಗಲಿರುವ ವೆಚ್ಚ ಎಷ್ಟು ಎಂದು ಅಂದಾಜು ಸಿದ್ಧಪಡಿಸಿದ್ದಾರೆ. ಆದರೆ ಟೆಂಡರ್ ಕರೆದು ಕಟ್ಟಡಗಳ ತೆರವು ಮಾಡಬೇಕಿದೆ. ಈ ಕೆಲಸಕ್ಕೆ ಮೂರು ತಿಂಗಳಿಂದ ಬಿಬಿಎಂಪಿ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನಲಾಗಿದೆ.
ರಾಜಕಾಲುವೆ ಒತ್ತುವರಿ ತೆರವು ವಿಳಂಬ: ಬಿಬಿಎಂಪಿ ಕಮೀಷನರ್ಗೆ ಹೈಕೋರ್ಟ್ ತರಾಟೆ
ಕೋರ್ಟ್ನಿಂದ ತಡೆಯಾಜ್ಞೆ
ಬಿಬಿಎಂಪಿ ವಿಳಂಬ ನೀತಿಯು ಅಕ್ರಮ ಕಟ್ಟಡಗಳ ಮಾಲೀಕರಿಗೆ ವರದಾನವಾಗಿ ಪರಿಣಮಿಸಿದೆ. ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತರುತ್ತಿದ್ದಾರೆ. ಐದು ಕಟ್ಟಡಗಳಲ್ಲಿ ಈಗಾಗಲೇ ಮೂರು ಕಟ್ಟಡಗಳ ಮಾಲೀಕರು ತಡೆಯಾಜ್ಞೆ ಕೋರ್ಟ್ನಿಂದ ತಡೆ ತಂದಿದ್ದಾರೆ ಎಂದು ದೂರಿನಲ್ಲಿ ಎಂದು ಶಶಿಕುಮಾರ್ ಉಲ್ಲೇಖಿಸಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಗದಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳೇ ಪರೋಕ್ಷವಾಗಿ ಅಕ್ರಮ ಕಟ್ಟಡಗಳ ಮಾಲೀಕರಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶಶಿಕುಮಾರ್ ದೂರಿದ್ದಾರೆ.
ತಡೆಯಾಜ್ಞೆ ತೆರವುಗೊಳಿಸಬೇಕು
ಬಿಬಿಎಂಪಿ ಕೂಡಲೇ ತಡೆಯಾಜ್ಞೆ ತೆರವುಗೊಳಿಸಲು ವ್ಯವಸ್ಥೆ ಮಾಡಬೇಕು. ತಡೆಯಾಜ್ಞೆ ತೆರವಿಗೆ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೆ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ. ಅಕ್ರಮ ಕಟ್ಟಡಗಳು ಕಂಡು ಬಂದರೆ ಅವುಗಳ ವಿರುದ್ಧ ಬಿಬಿಎಂಪಿ ಕಾಯ್ದೆ 356ರ ಅಡಿಯಲ್ಲಿ ತೆರವಿಗೆ ಅನುಮತಿ ಇದೆ. ಅಂದಾಜು ಸಿದ್ಧವಾಗಿದ್ದು ತೆರವಿಗೆ ಟೆಂಡರ್ ಕರೆಯಬೇಕಿದೆ. ಶೀಘ್ರವೇ ಈ ಕೆಲಸ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದೂರುದಾರನಿಗೆ ಬಿಜೆಪಿ ಮುಖಂಡನಿಂದ ಬೆದರಿಕೆ
ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದವರ ವಿರುದ್ಧ ದೂರು ನೀಡಿರುವ ನನಗೆ ಯಡಿಯೂರು ವಾರ್ಡ್ನಲ್ಲಿನ ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರು ಬೆದರಿಕೆ ಒಡ್ಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಸಂಗ್ರಹಿಸಿ ಅಕ್ರಮ ಬಯಲಿಗೆಳೆಯುವ ವ್ಯಕ್ತಿಯಂತೆ ಮುಖಂಡರು ಮುಖವಾಡ ಧರಿಸಿದ್ದಾರೆ. ಈ ನಾಯಕರು ಅಕ್ರಮ ಕಟ್ಟಡಗಳ ಮಾಲೀಕರ ಪರವಾಗಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ಜೀವ ಬೆದರಿಕೆ ಹಾಕಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರುದಾರ ಶಶಿಕುಮಾರ್ ವ್ಯವಸ್ಥೆ ಕುರಿತು ಕಿಡಿ ಕಾರಿದರು.