ಗೃಹಪ್ರವೇಶ ನಿಲ್ಲಿಸಿ ಕೊಡಗು ಸಂತ್ರಸ್ತರಿಗೆ ಒಂದು ಲಕ್ಷ ನೀಡಿದ ಕುಟುಂಬ
ಬೆಂಗಳೂರು, ಆಗಸ್ಟ್ 20 : ಮಾನವೀಯತೆಗೆ ಮತ್ತೊಂದು ಮಾದರಿ ಆಗಬಲ್ಲಂಥ ಹೃದಯಸ್ಪರ್ಶಿ ವರದಿ ಇದು. ಈಗ ಎಲ್ಲೆಲ್ಲೂ ಇಂಥದೇ ಉದಾಹರಣೆ ಸಿಗುತ್ತಿದೆ. ಕೇರಳ ಹಾಗೂ ಕೊಡಗಿನ ಪ್ರವಾಹ ಹಾಗೂ ಅಲ್ಲಿನ ಜನರ ಸಂಕಷ್ಟ ನೋಡುವಾಗ ತಮ್ಮ ಮನೆಯಲ್ಲಿನ ಕಾರ್ಯಕ್ರಮವನ್ನು ನಿಲ್ಲಿಸಿ, ಅದರ ಹಣವನ್ನು ಪ್ರವಾಹ ನಿರ್ವಹಣಾ ನಿಧಿಗೆ ನೀಡುತ್ತಿರುವ ಉದಾಹರಣೆಗಳು ಸಾಕಷ್ಟಿವೆ.
ಕೊಡಗಿನ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಭರವಸೆಯ ಹೊಂಗಿರಣ
ಅಂಥದ್ದೇ ಒಂದು ಉದಾಹರಣೆಯಾಗಿ ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿರುವ ಕುಟುಂಬವೊಂದು ನಮ್ಮ ಮುಂದಿದೆ. ಅಲ್ಲಿನ ಆನಂದ್ ಮತ್ತು ಅವರ ಕುಟುಂಬದವರು ಸದ್ಯದಲ್ಲೇ ಗೃಹಪ್ರವೇಶ ಮಾಡಬೇಕಿತ್ತು. ಅದಕ್ಕಾಗಿಯೇ ಒಂದು ಲಕ್ಷ ರುಪಾಯಿ ಮೊತ್ತವನ್ನು ಮೀಸಲಾಗಿಟ್ಟಿತ್ತು ಈ ಕುಟುಂಬ. ಆದರೆ ಯಾವಾಗ ಕೊಡಗಿನಲ್ಲಿ ದುರಂತ ಸಂಭವಿಸಿತೋ ಗೃಹಪ್ರವೇಶ ಕಾರ್ಯಕ್ರಮವನ್ನೇ ರದ್ದುಪಡಿಸಿದ್ದಾರೆ.
ಆನಂದ್ ಅವರ ಕುಟುಂಬವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಮೂಲಕ ಒಂದು ಲಕ್ಷ ರುಪಾಯಿ ನೀಡಿದೆ. ಕಳೆದ ವಾರವಷ್ಟೇ ಕೇರಳದ ಪತ್ರಕರ್ತರೊಬ್ಬರು ತಮ್ಮ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವನ್ನೇ ರದ್ದುಪಡಿಸಿ, ಆ ಮೊತ್ತವನ್ನು ಕೇರಳದ ನೆರೆ ಪರಿಹಾರ ನಿಧಿಗೆ ನೀಡಿದ್ದರು. ಇನ್ನು ಬಾಲಕಿಯೊಬ್ಬಳು ನಾಲ್ಕೈದು ವರ್ಷಗಳಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪರಿಹಾರ ನಿಧಿಗೆ ನೀಡಿ ಗಮನ ಸೆಳೆದಿದ್ದಳು.