ಬೆಂಗಳೂರು ಬ್ರಿಗೇಡ್ ರಸ್ತೆ ಬಳಿಕ ಮಹಾಲಕ್ಷ್ಮಿ ಲೇಔಟ್ ರಸ್ತೆಯಲ್ಲಿ ಬೃಹತ್ ಗುಂಡಿ ಸೃಷ್ಟಿ, ಕಳಪೆ ಕಾಮಗಾರಿ ಆರೋಪ
ಬೆಂಗಳೂರು, ಜನವರಿ 18: ನಗರದಲ್ಲಿ ಇತ್ತೀಚೆಗಷ್ಟೇ ಬೃಹತ್ ರಸ್ತೆಗುಂಡಿ ಕಾಣಿಸಿಕೊಂಡ ಬೆನ್ನಲ್ಲೆ ಮಹಾಲಕ್ಷ್ಮಿ ಮೆಟ್ರೊ ನಿಲ್ದಾಣದಿಂದ ಸುಮಾರು 50 ಮೀಟರ್ ದೂರದಲ್ಲಿರುವ ಮುಖ್ಯರಸ್ತೆಯಲ್ಲೇ ಮತ್ತೊಂದು ರಸ್ತೆಗುಂಡಿ ಕಾಣಿಸಿಕೊಂಡು ಸಂಚಾರಕ್ಕೆ ತೊಂದರೆ ಮಾಡಿದ ಘಟನೆ ಎರಡು ದಿನದ ಹಿಂದಷ್ಟೇ ನಡೆದಿದೆ.
ಕಳೆದ ವಾರದ ಬ್ರಿಗೇಡ್ ರಸ್ತೆಯ ಜಾನ್ಸನ್ ಮಾರುಕಟ್ಟೆ ಬಳಿ ರಸ್ತೆಯಲ್ಲಿ ಬೃಹತ್ ರಸ್ತೆಗುಂಡಿ ನಿರ್ಮಾಣವಾಗಿತ್ತು. ಇದರಿಂದ ಬೈಕ್ ಸವಾರರೊಬ್ಬರು ಬಿದ್ದಿದ್ದರಿಂದ ಅವರಿ ಗಾಯವಾಗಿತ್ತು. ಇದಾದ ಐದು ದಿನಗಳ ಅಂತರದಲ್ಲಿ ಮಂಗಳವಾರ ಮಂಗಳವಾರ ಬೆಳಗ್ಗೆ ಮಹಾಲಕ್ಷ್ಮಿ ಮೆಟ್ರೊ ನಿಲ್ದಾಣದಿಂದ ಸುಮಾರು 50 ಮೀಟರ್ ದೂರದಲ್ಲಿರುವ ಮುಖ್ಯರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡಿದೆ. ಮುಖ್ಯರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಪಕ್ಕದ ಸರ್ವಿಸ್ ರಸ್ತೆಯ ಜಂಕ್ಷನ್ನಲ್ಲಿ ಲಾರಿ (ಸಿಮೆಂಟ್ ಮಿಕ್ಸರ್ ರೋಲ್) ಹಾದು ಹೋಗುವಾಗ ದಿಢೀರನೇ ರಸ್ತೆ ಒಳಕ್ಕೆ ಕುಸಿದಿದೆ.
ಒಂಟಿಮನೆ ನಿರ್ಮಾಣ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಬಿಬಿಎಂಪಿ
ಈ ರಸ್ತೆಗುಂಡಿ ಸುಮಾರು 4 ಅಡಿ ಅಗಲ ಹಾಗೂ 5 ಅಡಿ ಆಳಕ್ಕೆ ಸಿಂಕ್ಹೋಲ್ ರೀತಿಯಲ್ಲಿ ಕಾಣಸಿಕೊಂಡಿದೆ. ಪದೇ ಪದೆ ಈ ರೀತಿಯ ರಸ್ತೆಗುಂಡಿ ಸೃಷ್ಟಿಯಿಂದ ಬಿಬಿಎಂಪಿಯ ರಸ್ತೆ ಕಾಮಗಾರಿಗಳ ಗುಣಮಟ್ಟದ ಮೇಲೆ ಅನುಮಾನ ಮೂಡುವಂತಾಗಿದೆ.
ರಸ್ತೆಗುಂಡಿಯಲ್ಲಿ ಸಿಲುಕಿದ್ದ ಲಾರಿಯನ್ನು ಕೂಡಲೇ ಸ್ಥಳಯರ ಸಹಾಯದಿಂದ ಮೇಲೆತ್ತಲಾಯಿತು. ಬಳಿಕ ಬಿಬಿಎಂಪಿ ಹಾಗೂ ಪೊಲೀಸರಿಗೆ ಮಾಹಿತಿ ನಿಡಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಸಂಚಾರಿ ವಿಭಾಗದ ಪೊಲೀಸರು ಗುಂಡಿ ಸುತ್ತಲೂ ಬ್ಯಾರಿಕೇಡ್ಗಳನ್ನು ಹಾಕಿ ವಾಹನ ಸವಾರರಲ್ಲಿ ಎಚ್ಚರಿಕೆ ಮೂಡಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಮಹಾಲಕ್ಷ್ಮಿ ಬಡಾವಣೆ ನಿವಾಸಿ ಸುಬ್ರಹ್ಮಣ್ಯ ಕೂಡ್ಲು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚಿತ್ರ, ವಿಡಿಯೋ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ನಿರ್ಲಕ್ಷಿಸಿದ ಬಿಬಿಎಂಪಿ ನಂತರ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮಸ್ಯೆಯನ್ನು ಪರಿಹರಿಸಲು ಮುಂದಾದರು. ಈ ರಸ್ತೆಯಲ್ಲಿ ಬೆಂಳೂರು ನೀರು ಸರಬರಾಜು ಮತ್ತು ಒಳಚಂಡಿ ಮಂಡಳಿ (BWSSB)ಯು ಈ ರಸ್ತೆಯಲ್ಲಿ ಕಾಮಗಾರಿ ನಡೆಸಿತ್ತು. ಇದರಿಂದ ನೀರು ಸೋರಿ ಗುಂಡಿ ಬಿದ್ದಿದೆ ಎನ್ನಲಾಗುತ್ತಿದೆ. ಗುಣಮಟ್ಟದ ರಸ್ತೆ ನೀಡುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.
ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದರಿಂದಲೇ ರಸ್ತೆಗಳು ಈ ಗತಿ ಕಾಣುತ್ತಿವೆ. ಗುತ್ತಿಗೆದಾರರು ಸರ್ಕಾರಕ್ಕೆ ಕಮಿಷನ್ ಕೊಡಬೇಕು. ಹೀಗಾದರೆ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಅಸಾಧ್ಯ. ನಗರಾದ್ಯಂತ ಇನ್ನೂ ಅನೇಕ ಗುಂಡಿಗಳು ಬಾಯ್ತೆರೆದು ಕೂತಿವೆ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಮಂಜುನಾಥ ನಾಯ್ಡು ಬಿಬಿಎಂಪಿ ವಿರುದ್ಧ ವಾಗ್ದಾಳಿ ನಡೆಸಿದರು.