ವೋಟು ಮಾಡುವ ಮೊದಲು ಬೆಂಗಳೂರಿಗರು ಹೇಳಿದ್ದೇನು?
ಬೆಂಗಳೂರು, ಏ. 15 : ಲೋಕಸಭೆ ಚುನಾವಣೆಯ ಮತದಾನಕ್ಕೆ ಎರಡು ದಿನಗಳು ಬಾಕಿ ಉಳಿದಿದೆ. ಯಾವ ಅಭ್ಯರ್ಥಿಗೆ ಮತ ಹಾಕಬೇಕು, ಯಾವ ಪಕ್ಷ ಬೆಂಬಲಿಸಬೇಕು ಎಂದು ಮತದಾರರು ಈಗಾಗಲೇ ನಿರ್ಧರಿಸಿದ್ದಾರೆ. ಕೆಲವರು ಯಾರಿಗೆ ಮತ ಹಾಕಿದರೆ ನಮಗೇನು ದೊರೆಯುತ್ತದೆ ಎಂಬ ಆಲೋಚನೆಯಲ್ಲೂ ತೊಡಗಿದ್ದಾರೆ. ಕೆಲವರು ಮತದಾನ ಮಾಡಲು ಉತ್ಸಾಹದಿಂದ ಕಾದು ಕುಳಿತಿದ್ದಾರೆ.
ನಗರದ ಪ್ರದೇಶದಲ್ಲಿ ಕಡಿಮೆ ಮತದಾನವಾಗುತ್ತದೆ ಎಂಬ ಆರೋಪ ಪ್ರತಿ ಚುನಾವಣೆ ಮುಗಿದ ಬಳಿಕವೂ ಕೇಳಿಬರುತ್ತದೆ. ಬೆಂಗಳೂರಿಗರು ಮತ ಹಾಕಲು ಬರುವುದಿಲ್ಲ ಎಂಬ ಆರೋಪಗಳು ಇವೆ. 2009ರ ಚುನಾವಣೆಯಲ್ಲಿ ಶೇ 54.60 ರಷ್ಟು, 2004ರಲ್ಲಿ ಶೇ 64ರಷ್ಟು ಮತದಾನ ಬೆಂಗಳೂರಿನಲ್ಲಿ ಆಗಿದೆ. ಈ ದಾಖಲೆಗಳನ್ನು 2014ರ ಮತದಾನದಲ್ಲಿ ಬೆಂಗಳೂರಿಗರು ಮುರಿಯುತ್ತಾರಾ? ಕಾದು ನೋಡಬೇಕು.[ಬೆಂಗಳೂರು ಮತದಾರರಿಗಾಗಿ ಬೀದಿನಾಟಕ]
ಒನ್ ಇಂಡಿಯಾ ಬೆಂಗಳೂರಿನ ಕೆಲವು ಜನರನ್ನು ಮಾತನಾಡಿಸಿ ಮತದಾನದ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸಿದೆ. ನಮ್ಮ ಜೊತೆ ಅಭಿಪ್ರಾಯ ಹಂಚಿಕೊಂಡ ಕೆಲವರು ತಾವು ಯಾರಿಗೆ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದರೆ, ಇನ್ನೂ ಕೆಲವರು, ಯಾರು ಗೆದ್ದರೆ ನಮಗೇನು ಬಿಡಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

ಈ ಬಾರಿ ಮೋದಿಗೆ ನನ್ನ ಬೆಂಬಲ
ಈ ಚುನಾವಣೆಯಲ್ಲಿ ಮತದಾನ ಮಾಡುವ ಕುರಿತು ವಿದ್ಯಾರ್ಥಿ ನಿರ್ವಿದ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. " ನಾನು ಮೊದಲು ಕಾಂಗ್ರೆಸ್ ಬೆಂಬಲಿಸುತ್ತಿದ್ದೆ. ಆದರೆ, ಈ ಬಾರಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುತ್ತೇನೆ" ಎಂದು ಅವರು ಹೇಳಿದ್ದಾರೆ.

ಆಮ್ ಆದ್ಮಿ ಕಾಂಗ್ರೆಸ್ ಇನ್ನೊಂದು ಮುಖ
ತರಕಾರಿ ವ್ಯಾಪಾರಿ ಸಲೀಂ(32) " ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ನ ಮತ್ತೊಂದು ಮುಖ, ಈ ಬಾರಿ ನರೇಂದ್ರ ಮೋದಿ ಅವರು ಜಯಗಳಿಸಬೇಕು, ಆದ್ದರಿಂದ ನನ್ನ ಬೆಂಬಲ ಅವರಿಗೆ" ಎಂದು ಹೇಳಿದ್ದಾರೆ.

ಏನೂ ಹೇಳೋದು ಕಷ್ಟ ಸಾರ್
"ಈ ಬಾರಿ ಚುನಾವಣೆ ಫಲಿತಾಂಶ ಏನಾಗುತ್ತದೆ ಎಂದು ಹೇಳುವುದು ಕಷ್ಟ ಸಾರ್, ತುಂಬಾ ಫೈಟ್ ಇದೆ" ಎಂದು ಆಟೋ ಚಾಲಕ ಶಿವು ಗೌಡ (39) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನನಗೆ ವೋಟ್ ಮಾಡಲು ರಜೆ ಇಲ್ಲ
ನಾನು ಮಂಗಳೂರಿನವನು ಈ ಬಾರಿ ಚುನಾವಣೆಯಲ್ಲಿ ಮತದಾನ ಮಾಡಲು ರಜೆ ಇಲ್ಲ, ಆದ್ದರಿಂದ ವೋಟ್ ಇಲ್ಲ ಎಂದು ಆದರ್ಶ ಮಾತು ಆರಂಭಿಸಿದರು. ಕರ್ನಾಟಕದಲ್ಲಿ ಚುನಾವಣೆ ಫಲಿತಾಂಶ ಏನಾಗಲಿದೆ ಎಂದು ನನಗೆ ಕುತೂಹಲವಿದೆ. ಮೋದಿ ಅಲೆ ಮತ್ತು ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ನಡುವೆ ಈ ಚುನಾವಣೆ ನಡೆಯುತ್ತಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಎಎಪಿ ಸಹ ತನ್ನ ಒಂದೆರಡು ಸ್ಥಾನ ಗೆಲ್ಲಬೇಕೆಂದು ಆದರ್ಶ ತಿಳಿಸಿದ್ದಾರೆ.

ರಾಜಕೀಯದ ಬಗ್ಗೆ ಗೊತ್ತಿಲ್ಲ
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ 23 ವರ್ಷದ ಅಭಿಜಿತ್ ಮತ್ತು ದೀಪು "ರಾಜಕೀಯದ ಬಗ್ಗೆ ನಮಗೆ ಅಷ್ಟು ಐಡಿಯಾ ಇಲ್ಲ, ಫಲಿತಾಂಶದ ಬಗ್ಗೆಯೂ ತಿಳಿದಿಲ್ಲ ಬಿಡಿ" ಎಂದು ಹೇಳಿದರು.

ಅಯ್ಯೋ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ
ಕೋರಿಯರ್ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ಮೂಲಕ ಮೋಹನ್ (21), ರಾಜಕೀಯದ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿ ಇಲ್ಲ. ಫಲಿತಾಂಶ ಏನಾಗುತ್ತದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.

ಜಯರಾಮ್ ಶೆಟ್ಟರ ವಿಶ್ಲೇಷಣೆ ಹೀಗಿದೆ
ಜಯನಗರದಲ್ಲಿ ಟೀ ಅಂಗಡಿ ನಡೆಸುವ ಜಯರಾಮ್ ಶೆಟ್ಟಿ (45) ಬೆಂಗಳೂರು ದಕ್ಷಿಣ ಕ್ಷೇತ್ರದ ಸ್ಪರ್ಧೆಯನ್ನು ವಿಶ್ಲೇಷಿಸಿದ್ದಾರೆ. ದಕ್ಷಿಣದಲ್ಲಿ ನಂದನ್ ನಿಲೇಕಣಿ ಬಂದಿದ್ದರಿಂದ ಫಲಿತಾಂಶದ ಬಗ್ಗೆ ಕುತೂಹಲವ ಉಂಟಾಗಿದೆ. ಮುತಾಲಿಕ್ ಬಿಜೆಪಿಯ ಮತಗಳನ್ನು ಎಎಪಿ ಕಾಂಗ್ರೆಸ್ ಮತಗಳನ್ನು ಸೆಳೆದರೆ ಉಭಯ ಅಭ್ಯರ್ಥಿಗಳಿಗೂ ಕಷ್ಟವಾಗಲಿದೆ. ಒಟ್ಟಾರೆ ಗೆಲುವಿನ ಅಂತರ ಈ ಬಾರಿ ಕಡಿಮೆ ಇರುತ್ತದೆ ಎಂದು ವಿಶ್ಲೇಷಿಸಿದ್ದಾರೆ.












Click it and Unblock the Notifications