ವಾರ್ ರೂಂನಲ್ಲಿ ಬೆಡ್ ಬ್ಲಾಕ್; ಬಿಬಿಎಂಪಿಗೆ ವರದಿ ಸಲ್ಲಿಕೆ
ಬೆಂಗಳೂರು, ಮೇ 07; ಬಿಬಿಎಂಪಿ ವಾರ್ ರೂಂ ಸಿಬ್ಬಂದಿ ಕೋವಿಡ್ ರೋಗಿಗಳಿಗೆ ಸರ್ಕಾರಿ ಕೋಟಾದಡಿ ಹಾಸಿಕೆ ಹಂಚಿಕೆ ಮಾಡುವ ವೇಳೆ ಅಕ್ರಮ ನಡೆಸಿದ್ದಾರೆ ಎಂಬ ಆರೋಪವಿದೆ. ಈ ಕುರಿತು ಬಿಬಿಎಂಪಿ ಆಯುಕ್ತರಿಗೆ ವರದಿ ಸಲ್ಲಿಕೆಯಾಗಿದೆ.
ಹಾಸಿಗೆ ಹಂಚಿಕೆ ಅಕ್ರಮದ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸೂಚನೆ ನೀಡಿದ್ದರು. ವಿಶೇಷ ಆಯುಕ್ತರಾದ ತುಳಸಿ ಮುದ್ದಿನೇನಿ ಗುರುವಾರ ವರದಿ ಸಲ್ಲಿಕೆ ಮಾಡಿದ್ದಾರೆ.
12 ನಿರ್ದಿಷ್ಟ ಪ್ರಕರಣಗಳಲ್ಲಿ ಹಾಸಿಕೆ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಕುರಿತು ಆರೋಪವಿದೆ. ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಆಯುಕ್ತರು ತನಿಖಾ ವರದಿಯಲ್ಲಿನ ಅಂಶಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

"ಹಾಸಿಗೆ ಬ್ಲಾಕಿಂಗ್ ದಂಧೆ ಆರೋಪದ ಕುರಿತು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಸದ್ಯಕ್ಕೆ ದಕ್ಷಿಣ ವಲಯದಲ್ಲಿ ನಡೆದಿದೆ ಅನ್ನಲಾದ ಅಕ್ರಮದ ಆರೋಪಗಳಿಗೆ ಸಂಬಂಧಿಸಿದ ವಿವರಗಳಿವೆ" ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.
ಸಿಸಿಬಿ ತನಿಖೆಗೆ ಆದೇಶ; ದಿನದಿಂದ ದಿನಕ್ಕೆ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ರೋಗಿಗಳು ಬೆಡ್ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದಾರೆ. ಬಿಬಿಎಂಪಿ ವಾರ್ ರೂಂ ಮೂಲಕ ಬೆಂಗಳೂರು ನಗರದಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಬಹಿರಂಗ ಮಾಡಿದ್ದರು.
ಸೋಂಕು ತಗುಲಿದ ವ್ಯಕ್ತಿ ಹೋಂ ಐಸೋಲೇಷನ್ನಲ್ಲಿದ್ದರೂ ಅಂತಹ ವ್ಯಕ್ತಿಗಳ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹೇಗೆ ಬೆಡ್ ಬುಕ್ ಆಗುತ್ತದೆ? ಎಂಬ ಸತ್ಯವನ್ನು ತೇಜಸ್ವಿ ಸೂರ್ಯ ಬಿಚ್ಚಿಟ್ಟಿದ್ದರು.
ಕರ್ನಾಟಕ ಸರ್ಕಾರ ಬೆಡ್ ಬ್ಲಾಕಿಂಗ್ ದಂಧೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಸಿಸಿಬಿ ತನಿಖೆಗೆ ಆದೇಶ ನೀಡಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.











Click it and Unblock the Notifications