ಧೃತಿಗೆಡಬೇಡಿ, ದೇಶವೇ ನಿಮ್ಮೊಂದಿಗಿದೆ: ಇಸ್ರೋಗೆ ಧೈರ್ಯ ಹೇಳಿದ ಮೋದಿ
Recommended Video
ಬೆಂಗಳೂರು, ಸೆಪ್ಟೆಂಬರ್ 07: ಚಂದ್ರಯಾನ 2 ಮೂಲಕ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದ ಇಸ್ರೋ ವಿಜ್ಞಾನಿಗಳು ಸರ್ವ ಪ್ರಯತ್ನ, ಶ್ರಮದ ಬಳಿಕ ಅತ್ಯಂತ ಕೊನೆಯ ಕ್ಷಣದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ.
ಇಸ್ರೋದ ಈ ಸಾಧನೆಯನ್ನು ಕಣ್ಣು ತುಂಬಿಸಿಕೊಳ್ಳಲು ಪ್ರಧಾನಿ ಮೋದಿ ಅವರು ಸಹ ಮಧ್ಯ ರಾತ್ರಿ ಇಸ್ರೋಕ್ಕೆ ಆಗಮಿಸಿದ್ದರು. ಆದರೆ ಅವರಿಗೂ ನಿರಾಸೆ ಆಯಿತು. ಆದರೆ ಅದನ್ನು ತೋರ್ಗೊಡದ ಮೋದಿ ಅವರು, ನಿರಾಸೆ, ಬೇಸರದ ಮಡುವಲ್ಲಿದ್ದ ಇಸ್ರೋ ವಿಜ್ಞಾನಿಗಳಿಗೆ ಹುರುಪು ತುಂಬುವ ಕಾರ್ಯವನ್ನು ಮಾಡಿದರು.
ವಿಕ್ರಂ ಲ್ಯಾಂಡರ್, ಇಸ್ರೊದೊಂದಿಗೆ ಸಂವಹನ ಕಡಿದುಕೊಂಡ ಕೆಲವು ನಿಮಿಷದಲ್ಲಿಯೇ ಮೋದಿ ಬಳಿಗೆ ತೆರಳಿದ ಇಸ್ರೊ ಅಧ್ಯಕ್ಷ ಶಿವನ್ ಅವರು ಪರಿಸ್ಥಿತಿ ವಿವರಿಸಿದರು. ಮೋದಿ ಅವರು ಅವರು ಅಲ್ಲಿಯೇ ಶಿವನ್ ಅವರಿಗೆ ಧೃತಿ ಗೆಡದಂತೆ ಹೇಳಿದರು. ನಂತರ ಗ್ಯಾಲರಿಯಿಂದ ಕೆಳಗೆ ಬಂದ ಮೋದಿ, ವಿಜ್ಞಾನಿಗಳನ್ನು ಉದ್ದೇಶಿಸಿ, ಧೃತಿಗೆಡಬೇಡಿ, ನೀವು ಮಾಡಿರುವ ಸಾಧನೆ ಕಡಿಮೆ ಅಲ್ಲ ಎಂದು ಮಾತಿನ ಮೂಲಕ ಬೆನ್ನು ತಟ್ಟಿ ಸಂತೈಸಿದರು.
ವಿಶ್ವಾಸ ಕಳೆದುಕೊಳ್ಳಬೇಡಿ: ಮೋದಿ
ಮಾತು ಮುಂದುವರೆಸಿದ ಮೋದಿ, ವಿಶ್ವಾಸ ಕಳೆದುಕೊಳ್ಳಬೇಡಿ, ನೀವು ಮಾಡಿರುವ ಸಾಧನೆ ಕಡಿಮೆ ಅಲ್ಲ, ನಿಮ್ಮೊಂದಿಗೆ ನಾವಿದ್ದೇವೆ, ದೇಶವೇನಿಮ್ಮೊಂದಿಗೆ ಇದೆ. ದೇಶ ಸಂತಸಗೊಳ್ಳುವಂತಾ ಕಾರ್ಯವನ್ನು ನೀವು ಮಾಡಿದ್ದೀರಿ ಎಂದು ಮೋದಿ ಅವರು ಹೇಳಿದರು. ಮೋದಿ ಮಾತಿಗೆ ವಿಜ್ಞಾನಿಗಳು ಚಪ್ಪಾಳೆ ತಟ್ಟಿದರು.
ಶಿವನ್ ಅವರೊಂದಿಗೆ ಮಾತನಾಡಿದ ಮೋದಿ
ಶಿವನ್ ಅವರ ಕೈಕುಲುಕಿ ಕೆಲ ಸಮಯ ಮಾತನಾಡಿದ ಮೋದಿ, ಎಲ್ಲ ವಿಜ್ಞಾನಿಗಳಿಗೂ 'ಆಲ್ ದಿ ಬೆಸ್ಟ್' ಹೇಳಿದರು. ಹೊರಡುವ ಮುನ್ನಾ ವಿದ್ಯಾರ್ಥಿಗಳೊಡನೆ ಕೆಲ ಕಾಲ ಮಾತನಾಡಿ, ಅವರೊಂದಿಗೆ ಫೋಟೊಕ್ಕೆ ಫೋಸು ನೀಡಿದರು.
ಬಾಹ್ಯಾಕಾಶ ಕಾರ್ಯಕ್ರಮ ಮುಂದುವರಿಸುತ್ತೇವೆ: ಮೋದಿ
ಆ ನಂತರ ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಮೋದಿ ಅವರು, 'ಭಾರತದ ವಿಜ್ಞಾನಿಗಳು ನಮ್ಮ ಹೆಮ್ಮೆ, ಅವರು ತಮ್ಮ ಅತ್ಯುತ್ತಮವಾದುದನ್ನು ಭಾರತಕ್ಕೆ ನೀಡಿದ್ದಾರೆ, ಅವರ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ. ಧೈರ್ಯದಿಂದ ಎದುರುಗೊಳ್ಳುವ ಸಮಯ ಕೆಲವು ಬರುತ್ತವೆ, ನಾವು ಧೈರ್ಯವಾಗಿಯೇ ಇದ್ದೇವೆ, ಇಸ್ರೋ ಅಧ್ಯಕ್ಷರು ಚಂದ್ರಯಾನ 2 ಬಗ್ಗೆ ಮಾಹಿತಿ ನೀಡಲಿದ್ದಾರೆ. ನಾವು ವಿಶ್ವಾಸವನ್ನು ಕಳೆದುಕೊಂಡಿಲ್ಲ, ನಾವು ನಮ್ಮ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುಂದುವರೆಸಲಿದ್ದೇವೆ' ಎಂದು ಮೋದಿ ಹೇಳಿದ್ದಾರೆ.
ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್
ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಗೆ ತಲುಪಲು 2.1 ಕಿ.ಮೀ ಇರುವವರೆಗೆ ಸೂಕ್ತವಾಗಿ ಕಾರ್ಯನಿರ್ವಹಿಸಿತು. ಆದರೆ ಆ ನಂತರ ವಿಕ್ರಂ ಲ್ಯಾಂಡರನ್ನಿಂದ ಸಂಪರ್ಕವು ಕಡಿತಗೊಂಡಿದೆ, ಮಾಹಿತಿಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಇಸ್ರೋದ ಅಧ್ಯಕ್ಷ ಶಿವನ್ ಹೇಳಿದರು. ಅವರ ದನಿಯಲ್ಲಿ ಬೇಸರವಿತ್ತು.