ಬಿಡಿಎ ಆಯುಕ್ತ ಶ್ಯಾಂ ಭಟ್ ವರ್ಗಾವಣೆ
ಬೆಂಗಳೂರು, ಜೂನ್ 21 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಶ್ಯಾಂ ಭಟ್ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಜಕುಮಾರ್ ಖತ್ರಿ ಅವರನ್ನು ಬಿಡಿಎ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ಮಂಗಳವಾರ ಕರ್ನಾಟಕ ಸರ್ಕಾರ ಶ್ಯಾಂ ಭಟ್ ಅವರನ್ನು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿದೆ. ಶ್ಯಾಂ ಭಟ್ ವರ್ಗಾವಣೆಯಿಂದ ತೆರವಾಗುವ ಬಿಡಿಎ ಆಯುಕ್ತ ಸ್ಥಾನಕ್ಕೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಜಕುಮಾರ್ ಖತ್ರಿ ಅವರನ್ನು ನೇಮಿಸಲಾಗಿದೆ. [ಶ್ಯಾಂ ಭಟ್ ಪರಿಚಯ]

ಕರ್ನಾಟಕ ಸರ್ಕಾರ 2016ರ ಮೇ ತಿಂಗಳಿನಲ್ಲಿ ಶ್ಯಾಂ ಭಟ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿತ್ತು. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೂ ಶ್ಯಾಂ ಭಟ್ ಹೆಸರು ಶಿಫಾರಸು ಮಾಡಲಾಗಿದೆ. ಆದರೆ, ರಾಜ್ಯಪಾಲರು ನೇಮಕಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ. [ಶ್ಯಾಂ ಭಟ್ ಬಗ್ಗೆ ರಾಜ್ಯಪಾಲರಿಗೆ ಲೋಕಾಯುಕ್ತ ವರದಿ]
1992ನೇ ಬ್ಯಾಚ್ ಐಎಎಸ್ ಅಧಿಕಾರಿ ಶ್ಯಾಂ ಭಟ್ ಅವರು 2012 ರಿಂದ ಬಿಡಿಎ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಶ್ಯಾಂ ಭಟ್ ಅವರನ್ನು ಬಿಡಿಎ ಆಯುಕ್ತರಾಗಿ ನೇಮಕ ಮಾಡಲಾಗಿತ್ತು. ಅಂದಿನಿಂದಲೂ ಅವರು ಬಿಡಿಎಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಕೆಪಿಎಸ್ಸಿ ಅಧ್ಯಕ್ಷರಾಗಬಹುದು : ಕರ್ನಾಟಕ ಸರ್ಕಾರ ಶ್ಯಾಂ ಭಟ್ ಅವರ ಹೆಸರನ್ನು ಕೆಪಿಎಸ್ಸಿ ಅಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಿದೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಶ್ಯಾಂ ಭಟ್ ಅವರ ವಿರುದ್ಧ ಯಾವುದಾದರೂ ಆರೋಪಗಳಿವೆಯೇ? ಎಂದು ಲೋಕಾಯುಕ್ತದ ಬಳಿ ವರದಿ ಕೇಳಿದ್ದಾರೆ. ಲೋಕಾಯುಕ್ತರು ವರದಿ ನೀಡಿದ್ದು ಆಗಿದೆ. ರಾಜ್ಯಪಾಲರು ಒಪ್ಪಿದರೆ ಶ್ಯಾಂ ಭಟ್ ಕೆಪಿಎಸ್ಸಿ ಅಧ್ಯಕ್ಷರಾಗಲಿದ್ದಾರೆ.












Click it and Unblock the Notifications