84% ಲಸಿಕಾ ಗುರಿ ಸಾಧನೆ; ಬಿಬಿಎಂಪಿಯಿಂದ ಇದೀಗ ಮನೆ ಬಾಗಿಲಿಗೇ ಕೊರೊನಾ ಲಸಿಕೆ
ಬೆಂಗಳೂರು, ಅಕ್ಟೋಬರ್ 1: ವಾರ್ಡ್ವಾರು ಲಸಿಕಾ ಶಿಬಿರಗಳು ಹಾಗೂ ವಿಶೇಷ ಅಭಿಯಾನಗಳ ಮೂಲಕ ಬೆಂಗಳೂರು ನಗರದ ಎಲ್ಲಾ 198 ವಾರ್ಡ್ಗಳಲ್ಲಿ ಸುಮಾರು 84% ಜನಸಂಖ್ಯೆಗೆ ಬಿಬಿಎಂಪಿ ಕೊರೊನಾ ಲಸಿಕೆ ಹಾಕಿದ್ದು, ಇದೀಗ ಲಸಿಕೆ ಪಡೆದುಕೊಳ್ಳದವರಿಗೆ ಲಸಿಕೆ ನೀಡಲು ಮನೆ ಬಾಗಿಲಿಗೇ ಲಸಿಕೆ ನೀಡುವತ್ತ ಬಿಬಿಎಂಪಿ ಮುಂದಿನ ಯೋಜನೆ ರೂಪಿಸುತ್ತಿದೆ.
'ನಮ್ಮ ಉದ್ದೇಶಿತ ಜನಸಂಖ್ಯೆಯ ಬಹುಭಾಗಕ್ಕೆ ಕೊರೊನಾ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ. ಇದೀಗ ನಮ್ಮ ಲಸಿಕಾ ಕಾರ್ಯತಂತ್ರವನ್ನು ಬದಲಾಯಿಸುವ ಅವಶ್ಯಕತೆಯಿದೆ' ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ (ಆರೋಗ್ಯ) ರಣದೀಪ್ ಡಿ ತಿಳಿಸಿದ್ದಾರೆ.
'ನಾವು ಲಸಿಕಾ ಶಿಬಿರಗಳಲ್ಲಿ ಜನರಿಗಾಗಿ ಕಾಯಲು ಸಾಧ್ಯವಿಲ್ಲ. ಇನ್ನು ಮುಂದೆ ನಮ್ಮ ತಂಡಗಳು ಮನೆಗಳಿಗೆ ಹೋಗಿ ಲಸಿಕೆ ನೀಡುತ್ತವೆ' ಎಂದು ಹೇಳಿದರು. ಆದರೆ ಇದಕ್ಕೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ. ಶೀಘ್ರವೇ ಮನೆ ಬಾಗಿಲಿಗೆ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

'ಬೆಂಗಳೂರು ನಗರದಲ್ಲಿ ಲಸಿಕಾ ಶಿಬಿರಗಳಿಗೆ ಕಡಿಮೆ ಜನರು ಭೇಟಿ ನೀಡುತ್ತಿದ್ದು, ಬಿಬಿಎಂಪಿ, ನಗರದ ಪ್ರತಿ ಬ್ಲಾಕ್ಗೆ ಲಸಿಕಾ ತಂಡಗಳನ್ನು ನಿಯೋಜಿಸುತ್ತಿದೆ. ನಮ್ಮ ಘನತ್ಯಾಜ್ಯ ನಿರ್ವಹಣಾ ವಿಭಾಗವು ನಗರವನ್ನು 4250 ಬ್ಲಾಕ್ಗಳಾಗಿ ವಿಂಗಡಿಸಿದೆ ಹಾಗೂ ನಕ್ಷೆಗಳೊಂದಿಗೆ ಪ್ರತಿ ಬ್ಲಾಕ್ನ ವಿವರಗಳನ್ನು ಹೊಂದಿದೆ. ಪ್ರತಿ ಬ್ಲಾಕ್ ಸರಾಸರಿ 12ರಿಂದ 13 ಬೀದಿಗಳಲ್ಲಿ ಸುಮಾರು 750 ಮನೆಗಳನ್ನು ಒಳಗೊಂಡಿದೆ. ನಮ್ಮ ಲಸಿಕಾ ಯೋಜನೆಗೆ ತಕ್ಕಂತೆ ಇದನ್ನು ಬಳಸಿಕೊಳ್ಳುತ್ತೇವೆ' ಎಂದಿದ್ದಾರೆ.
ಬ್ಲಾಕ್ ಮಟ್ಟದಲ್ಲಿ ತಂಡಗಳು ಮನೆಗಳಿಗೆ ಭೇಟಿ ನೀಡಿ ಜನರಿಗೆ ಲಸಿಕೆ ಹಾಕಲಿವೆ ಎಂದರು.
'ನಾವು ಮನೆ ಬಾಗಿಲಿಗೆ ಲಸಿಕೆ ಕಾರ್ಯಕ್ರಮದ ಮೂಲಕ ಅನಾರೋಗ್ಯದಿಂದ ಹಾಸಿಗೆ ಹಿಡಿದವರು, ಅಂಗವಿಕಲರು ಹಾಗೂ ಇತರೆ ಅಸ್ವಸ್ಥತೆ ಇದ್ದವರನ್ನು ತಲುಪಲು ಸಾಧ್ಯವಾಗಲಿದೆ. ಸಮಯ ಅಥವಾ ಆಸಕ್ತಿ ಕೊರತೆಯಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದಾಗದವರನ್ನೂ ಪತ್ತೆ ಹಚ್ಚಿ ಲಸಿಕೆ ಹಾಕಲು ಸಾಧ್ಯವಾಗಲಿದೆ' ಎಂದು ರಣದೀಪ್ ತಿಳಿಸಿದ್ದಾರೆ.

ಲಸಿಕೆ ಹಾಕದ ಜನರನ್ನು ಒಳಗೊಳ್ಳುವುದರ ಜೊತೆಗೆ, ಬಿಬಿಎಂಪಿಗೆ ವಾರ್ಡ್ನಲ್ಲಿ ಲಸಿಕೆ ಹಾಕಿದ ಜನರ ಸಂಖ್ಯೆಯನ್ನು ಖಚಿತವಾಗಿ ನಿರ್ಧರಿಸಲು ಸಹಾಯ ಮಾಡುತ್ತದೆ. ಲಸಿಕಾ ವ್ಯಾಪ್ತಿಯನ್ನು ನಿರ್ಧರಿಸಲು ಸಂಶೋಧಕರಿಗೆ ಸೂಕ್ತ ಮಾಹಿತಿಯೂ ದೊರೆತಂತಾಗುತ್ತದೆ ಎಂದರು. ಲಸಿಕೆ ಪಡೆದ ನಂತರ ಪ್ರತಿಕೂಲ ಪರಿಣಾಮ ಕಂಡುಬಂದರೆ, ಚಿಕಿತ್ಸೆ ನೀಡುವ ಸೌಲಭ್ಯ ಕೂಡ ಸ್ಥಾಪಿಸಲಾಗುವುದು ಎಂದು ರಣದೀಪ್ ಸ್ಪಷ್ಟಪಡಿಸಿದ್ದಾರೆ.
ಕೊಳೆಗೇರಿಗಳಲ್ಲಿ ಲಸಿಕೆ ನೀಡಲು ಸಮಸ್ಯೆ:
ಕೊರೊನಾ ಲಸಿಕೆ ಹಾಕದ ಜನರನ್ನು ತಲುಪಲು ಬಿಬಿಎಂಪಿ ಹಲವು ಯೋಜನೆಗಳನ್ನು ರೂಪಿಸಿದರೂ, ಕೊಳೆಗೇರಿ ನಿವಾಸಿಗಳಿಗೆ ಲಸಿಕೆ ನೀಡುವುದು ಅಧಿಕಾರಿಗಳಿಗೆ ಸಮಸ್ಯೆಯಾಗಿ ಉಳಿದಿದೆ.
ಬಿಬಿಎಂಪಿ ಒಂದು ವಾರದ ಹಿಂದೆ ಐದು ಲಕ್ಷ ಲಸಿಕೆ ಹಾಕದ ಕೊಳೆಗೇರಿ ನಿವಾಸಿಗಳನ್ನು ಗುರುತಿಸಿದೆ. ಆದರೆ ಇದುವರೆಗೆ ಕೇವಲ ಒಂದು ಲಕ್ಷ ಜನರನ್ನು ತಲುಪಲು ಸಾಧ್ಯವಾಗಿದೆ.
'ಕೊಳೆಗೇರಿ ನಿವಾಸಿಗಳಿಗೆ ಲಸಿಕೆ ಹಾಕಲು ನಾವು ವಿಭಿನ್ನ ತಂತ್ರವನ್ನು ರೂಪಿಸಬೇಕಾಗಿದೆ. ಚುನಾಯಿತ ಪ್ರತಿನಿಧಿಗಳು, ನಾಯಕರು ಹಾಗೂ ಸ್ವಯಂಸೇವಕರನ್ನು ಈ ಕಾರ್ಯಕ್ರಮದಲ್ಲಿ ಒಳಗೊಳ್ಳಬೇಕಿದೆ' ಎಂದು ರಣದೀಪ್ ವಿವರಣೆ ನೀಡಿದರು.
ಕರ್ನಾಟಕದಲ್ಲಿ ಗುರುವಾರ 933 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಒಂದು ದಿನದಲ್ಲಿ 704 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 14 ಜನರು ಸಾವನ್ನಪ್ಪಿದ್ದು, ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 12780 ಆಗಿದೆ.
ಕರ್ನಾಟಕದಲ್ಲಿ ಈವರೆಗೂ 5,62,20,894 ಮಂದಿ ಲಸಿಕೆ ಪಡೆದಿದ್ದು, 3,91,79,817 ಮಂದಿ ಮೊದಲ ಡೋಸ್ ಪಡೆದಿದ್ದಾರೆ. 1,70,41,077 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.












Click it and Unblock the Notifications