ಬಿಬಿಎಂಪಿ ಬಜೆಟ್ನಲ್ಲಿ ಜನಾಭಿಪ್ರಾಯ ಸೇರ್ಪಡೆಗೆ 'ನನ್ನ ನಗರ-ನನ್ನ ಬಜೆಟ್' ಅಭಿಯಾನ: ರಾಯಪುರ
ಬೆಂಗಳೂರು, ನವೆಂಬರ್ 24: ಬೆಂಗಳೂರಿನ ಅಭಿವೃದ್ಧಿ ಮತ್ತಿತರ ಬಿಬಿಎಂಪಿಯ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲ ನಾಗರಿಕಸ ಸಹಭಾಗಿತ್ವ, ಒಳಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ 'ನನ್ನ ನಗರ-ನನ್ನ ಬಜೆಟ್' ಅಭಿಯಾನ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಹೇಳಿದರು.
ಎರಡರಿಂದ ಮೂರು ತಿಂಗಳಲ್ಲಿ ಬಿಬಿಎಂಪಿ ಬಜೆಟ್ ಮಂಡನೆ ಸಾಧ್ಯತೆ ಇದೆ. ಇದಕ್ಕೆ ಪೂರ್ವಭಾವಿಯಾಗಿ ಜನರಿಂದ ಎಲ್ಲ ವಾರ್ಡ್ ಅಭಿವೃದ್ಧಿ, ವಸ್ತುಸ್ಥಿತಿ ಕುರಿತು ಜನಾಗ್ರಹ ಸಂಸ್ಥೆ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸಲಿದೆ. ಅದಕ್ಕಾಗಿ ಸಂಸ್ಥೆ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ 'ನನ್ನ ನಗರ - ನನ್ನ ಬಜೆಟ್ (My City- My Budget) ಅಭಿಯಾನಕ್ಕೆ ಚಾಲನೆ ನೀಡಿ ಜಯರಾಮ್ ರಾಯಪುರ ಮಾತನಾಡಿದರು.
ಬೆಂಗಳೂರು ಕಾರ್ಮಿಕ ಆಯುಕ್ತರಿಂದ ಅಮೆಜಾನ್ಗೆ ನೋಟಿಸ್
ಅಭಿಯಾನದಡಿ ವಾಹನವು ಒಂದು ವಾರ ಇಲ್ಲವೇ ಹತ್ತು ದಿನಗಳ ಕಾಲ ನಗರದ ಎಲ್ಲ 243ವಾರ್ಡ್ಗಳಲ್ಲಿ ಸಂಚರಿಸಲಿದೆ. ಎಲ್ಲ ನಾಗರಿಕರ ಸಲಹೆ, ಕುಂದು ಕೊರತೆಗಳನ್ನು ಪಡೆದುಕೊಳ್ಳಲಿದೆ. ವಾರ್ಡ್ ಮಟ್ಟದಲ್ಲಿ ಆಗಬೇಕಾದ ಕೆಲಸಗಳು, ಆಗಿರುವ ಅಭಿವೃದ್ಧಿ ಕುರಿತು ಅಭಿಪ್ರಾಯ ಸಂಗ್ರಹಿಸಲಿದೆ. ನಂತರ ಆ ಕುರಿತ ವರದಿಯನ್ನು ಜನಾಗ್ರಹ ಸಂಸ್ಥೆ ಬಿಬಿಎಂಪಿ ಸಲ್ಲಿಸಲಿದೆ ಎಂದರು.
ಬಿಬಿಎಂಪಿ ಆಯವ್ಯಯದಲ್ಲಿ ಜನಾಭಿಪ್ರಾಯ
ಜನರ ಅಭಿಪ್ರಾಯ, ಸಲಹೆಗಳನ್ನು ಬಿಬಿಎಂಪಿ ಮಂಡಿಸಲಿರುವ 2023-24ರ ವಾರ್ಷಿಕ ಆಯವ್ಯಯದಲ್ಲಿ ಅಗತ್ಯವುಗಳನ್ನು ಸೇರಿಸಲಾಗುವುದು. ಈ ಮೂಲಕ ಬೆಂಗಳೂರಿನಲ್ಲಿ ಕೈಗೊಳ್ಳಬೇಕಾದ ಕ್ರಮ ಹಾಗೂ ವಾರ್ಡ್ ಮಟ್ಟದಲ್ಲಿ ವಸ್ತುಸ್ಥಿತಿಯ ಸ್ಪಷ್ಟತೆ ದೊರೆಯಲಿದೆ.
ಈಗಾಗಲೇ ಬಿಬಿಎಂದು ಒಂದು ವಾರ್ಡ್ಗೆ ಒಂದು ಕೋಟಿ ರೂ. ಅನುದಾನ ಎಂದು ನಿರ್ಧರಿಸಿದೆ. ಈ ಅನುದಾನವನ್ನು ನಾವು ಖರ್ಚು ಮಾಡದೇ ವಾರ್ಡ್ನಲ್ಲಿನ ಸಮಿತಿ ಅಭಿಪಾಯ ಪಡೆದು ಅವರ ಸಲಹೆಯಂತೆ ಖರ್ಚು ಮಾಡುತ್ತೇವೆ. ಈಗಾಗಲೇ ಪ್ರತಿ ವಾರ್ಡ್ಗೆ ಒಂದು ಕೋಟಿ ರೂ. ಅನುದಾನ ಪೈಕಿ 70ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಅದು ವಾರ್ಡ್ ಸಮಿತಿ ಸಲಹೆ ಮೇರೆಗೆ ಅಭಿವೃದ್ಧಿಗೆ ಖರ್ಚಾಗಲಿದೆ. ಆದಷ್ಟು ಶೀಘ್ರವೇ ಈ ಅನುದಾನ ಏರಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಬಿಬಿಎಂಪಿಯಿಂದ ಪ್ರಾಮಾಣಿಕ ಎನ್ಜಿಓ ಬಳಕೆ
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಚಿಲುಮೆ ಸಂಸ್ಥೆಯ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿ ವ್ಯಾಪ್ತಿಯ ಒಂದಷ್ಟು ಜವಾಬ್ದಾರಿ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡುಲು ಮುಂದೆ ಬಂದ ಎನ್ಜಿಓಗಳ ಜೊತೆ ಕೈ ಜೋಡಿಸಬಹುದು.
ಈ ನಿಟ್ಟಿನಲ್ಲಿ ಕಳೆದ 20 ವರ್ಷದಿಂದ ಜನಾಗ್ರಹ ಸಂಸ್ಥೆ ನಂಬಿಕೆ, ಪ್ರಾಮಾಣಿಕವಾಗಿ ಬಿಬಿಎಂಪಿ ಜೊತೆ ಕೆಲಸ ಮಾಡುತ್ತಿದೆ. ಈ ಅಭಿಯಾನವು ಉಚಿತವಾಗಿ ನಡೆಯಲಿದೆ ಎಂದು ಅವರು ವಿವರಿಸಿದರು.