ಬಿಬಿಎಂಪಿ ಮೇಯರ್ ಚುನಾವಣೆ, ಬಿಜೆಪಿಗೆ ಹಿನ್ನಡೆ ಆಗಿದ್ದೇಕೆ?
Recommended Video

ಬೆಂಗಳೂರು, ಸೆಪ್ಟೆಂಬರ್ 28 : ಕೂಗಾಟ...ತಳ್ಳಾಟ....ಗದ್ದಲದ ನಡುವೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟಕ್ಕೆ ಜಯಸಿಕ್ಕಿದೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 52ನೇ ಮೇಯರ್ ಆಗಿ ಜಯನಗರ ವಾರ್ಡ್ ಕಾಂಗ್ರೆಸ್ ಕಾರ್ಪೊರೇಟರ್ ಗಂಗಾಬಿಕೆ, ಉಪ ಮೇಯರ್ ಆಗಿ ಕಾವೇರಿಪುರ ವಾರ್ಡ್ ಜೆಡಿಎಸ್ ಕಾರ್ಪೊರೇಟರ್ ರಮೀಳಾ ಆಯ್ಕೆಯಾದರು.
ಮೇಯರ್ ಚುನಾವಣೆಯಲ್ಲಿ ಜಯಗಳಿಸುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ. ಬಿಜೆಪಿ ಚುನಾವಣೆ ಬಹಿಷ್ಕಾರ ಮಾಡಿ ಹೊರನಡೆಯಿತು. 'ಬಿಬಿಎಂಪಿ ಮೇಯರ್ ಎಲೆಕ್ಷನ್ ಒಂದು ಅಕ್ರಮ' ಎಂದು ಬಿಜೆಪಿ ನಾಯಕ ಆರ್.ಅಶೋಕ್ ಆರೋಪ ಮಾಡಿದರು.
2018ರ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಬಿಜೆಪಿ ಪ್ರಯತ್ನ ವಿಫಲವಾಗಿತ್ತು. ಈಗ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯವು ಪ್ರಯತ್ನವೂ ಫಲ ನೀಡಿಲ್ಲ. ಬಿಜೆಪಿಯಲ್ಲೂ ಅದರಲ್ಲೂ ಆರ್.ಅಶೋಕ್ ಅವರಿಗೆ ಇದು ಭಾರಿ ಹಿನ್ನಡೆ ಉಂಟುಮಾಡಿದೆ.

ಪಕ್ಷೇತರ ಸದಸ್ಯರನ್ನು ಸೆಳೆಯಲು ವಿಫಲ
ಪಕ್ಷೇತರ ಸದಸ್ಯರನ್ನು ಸೆಳೆಯಲು ಬಿಜೆಪಿ ಸಂಪೂರ್ಣವಾಗಿ ವಿಫಲವಾಯಿತು. ಬಿಜೆಪಿ ನಾಯಕರು ಪಕ್ಷೇತರ ಸದಸ್ಯರ ಜೊತೆ ಮಾತುಕತೆ ನಡೆಸಿದ್ದನ್ನು ತಿಳಿದ ಕಾಂಗ್ರೆಸ್ ನಾಯಕರು ಅವರ ಜೊತೆ ಸಭೆ ನಡೆಸಿದರು. ಸ್ಥಾಯಿ ಸಮಿತಗಳ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿ ಅವರು ಬಿಜೆಪಿ ಬೆಂಬಲಿಸದಂತೆ ತಡೆದರು.
ಗುರುವಾರ ಕ್ಷಿಪ್ರಗತಿಯಲ್ಲಿ ಬಿಜೆಪಿ ಪಕ್ಷೇತರರನ್ನು ಸೆಳೆಯುವ ಕೊನೆ ಕ್ಷಣದ ಪ್ರಯತ್ನ ನಡೆಸಿತು. ಆದರೆ, ಜೆಡಿಎಸ್ ನಾಯಕರ ತಂತ್ರ, ಕಾಂಗ್ರೆಸ್ ನಾಯಕರ ಸರಣಿ ಸಭೆಗಳಿಂದಾಗಿ ಎಲ್ಲರೂ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬೆಂಬಲ ನೀಡಿದರು.

ಯಾರು ಬಿಜೆಪಿ ಜೊತೆಗಿದ್ದರು?
ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಜೆಪಿ ಹೇಳಿತ್ತು. ಆದರೆ, ಗುರುವಾರ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿತು. ಮಾರತ್ತಹಳ್ಳಿ ವಾರ್ಡ್ ಪಕ್ಷೇತರ ಸದಸ್ಯ ಎನ್.ರಮೇಶ್ ಹಾಗೂ ಹೊಯ್ಸಳನಗರ ವಾರ್ಡ್ ಪಕ್ಷೇತರ ಸದಸ್ಯ ಎಸ್.ಆನಂದ್ ಅವರು ಬಿಜೆಪಿ ಜೊತೆಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರು ಬಿಜೆಪಿ ಪಾಳಯ ಬಿಟ್ಟು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಬೆಂಬಲ ಕೊಟ್ಟರು.

ಚುನಾವಣೆ ಬಹಿಷ್ಕಾರ ಮಾಡಿದ ಬಿಜೆಪಿ
ಇಂದು ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು. ಮೇಯರ್ ಸ್ಥಾನಕ್ಕೆ ಶೋಭಾ ಅಂಜನಪ್ಪ, ಉಪ ಮೇಯರ್ ಸ್ಥಾನಕ್ಕೆ ಪ್ರತಿಭಾ ಧನರಾಜ್ ನಾಮಪತ್ರವನ್ನು ಸಲ್ಲಿಸಿದರು. ಆದರೆ, ಚುನಾವಣೆಗೂ ಮುನ್ನ ಬಿಜೆಪಿ ಸದಸ್ಯರು ಮತದಾನ ಬಹಿಷ್ಕರಿಸಿ ಹೊರ ನಡೆದರು. ಆದ್ದರಿಂದ, ಅಭ್ಯರ್ಥಿಗಳಿಗೆ ಯಾವುದೇ ಮತ ಸಿಗಲಿಲ್ಲ. ಪಾಲಿಕೆಯಲ್ಲಿ ಅಧಿಕಾರ ಹಿಡಿಯವ ಬಿಜೆಪಿ ಪ್ರಯತ್ನ ಫಲ ನೀಡಲಿಲ್ಲ.

ಆರ್.ಅಶೋಕ ಹೇಳಿದ್ದೇನು?
ಮತದಾನ ಬಹಿಷ್ಕಾರ ಮಾಡಿದ ಬಳಿಕ ಮಾತನಾಡಿದ ಬಿಜೆಪಿ ನಾಯಕ ಆರ್.ಅಶೋಕ ಅವರು, '11.30ರ ನಂತರ ಯಾರನ್ನು ಒಳ ಬಿಡೋಲ್ಲ ಎಂದು ನಿಯಮವಿತ್ತು. 12 ಗಂಟೆ ಆದರೂ ಒಬ್ಬೊಬ್ಬರಾಗಿ ಬರುತ್ತಿದ್ದರು. ಈ ಚುನಾವಣೆ ಒಂದು ಅಕ್ರಮ. ಆದ್ದರಿಂದ, ನಾವು ಚುನಾವಣೆ ಬಹಿಷ್ಕರಿಸಿ ಹೊರಬಂದೆವು. ಆನಂದ್ ನಾಲ್ಕೈದು ದಿನಗಳಿಂದ ನಮ್ಮ ಜೊತೆಯಲ್ಲಿಯೇ ಇದ್ದರು. ಕಾಂಗ್ರೆಸ್ ಗೂಂಡಾಗಿರಿ ಮಾಡಿ ನಮ್ಮಅಭ್ಯರ್ಥಿಯನ್ನು ಎತ್ತಿಕೊಂಡು ಹೋಗಿದೆ' ಎಂದು ಆರೋಪಿಸಿದರು.












Click it and Unblock the Notifications