ಬಿಬಿಎಂಪಿ ಮೇಯರ್ ಚುನಾವಣೆ: ಕಾಂಗ್ರೆಸ್ ಹಿರಿಯ ನಾಯಕರ ಮಧ್ಯೆ ಜಟಾಪಟಿ
ಬಿಬಿಎಂಪಿ ಮೇಯರ್ ಚುನಾವಣೆ: ಕಾಂಗ್ರೆಸ್ ಹಿರಿಯ ನಾಯಕರ ಮಧ್ಯೆ ಜಟಾಪಟಿ
ಬೆಂಗಳೂರು, ಸೆಪ್ಟೆಂಬರ್ 26: ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯು ಸೆಪ್ಟೆಂಬರ್ 28ರಂದು ನಡೆಯಲಿದ್ದು. ಮೇಯರ್ ಆಯ್ಕೆಯು ಕಾಂಗ್ರೆಸ್ನ ಮೂವರು ಪ್ರಮುಖ ನಾಯಕರ ನಡುವೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಬೆಂಬಲಿತ ಅಭ್ಯರ್ಥಿ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಮೇಯರ್ ಆಗಿ ಆಗಿ ಆಯ್ಕೆ ಆಗಬೇಕೆಂದು ಪಟ್ಟು ಹಿಡಿದಿದ್ದರೆ, ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೌಮ್ಯಾ ಶಿವಕುಮಾರ್ ಅವರು ಮೇಯರ್ ಆಗಬೇಕೆನ್ನುವ ಹಠ.
ಮೂವರೂ ಹೈಪ್ರೊಫೈಲ್ ನಾಯಕರು ಬಿಬಿಎಂಪಿಯ ಅಧಿಕಾರದ ಕುರ್ಚಿಯಲ್ಲಿ ತಮ್ಮ ಬೆಂಬಲಿಗರನ್ನು ಕೂರಿಸಲು ಪ್ರಯತ್ನ ಮಾಡುತ್ತಿದ್ದು, ಇಂದು ಸಂಜೆ ನಗರದ Radisson ಬ್ಲೂ ಹೊಟೆಲ್ನಲ್ಲಿ ಪರಮೇಶ್ವರ್ ಅವರು, ಪಕ್ಷೇತರ ಕಾರ್ಪೊರೇಟರ್ಗಳು, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್ಗಳನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. ರಾಮಲಿಂಗಾ ರೆಡ್ಡಿ ಅವರೂ ಸಹ ಈಗಾಗಲೇ ಕಾರ್ಪೊರೇಟರ್ಗಳನ್ನು ಭೇಟಿ ಮಾಡಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಹಿಂದೆಯೇ ಸಭೆ ಮಾಡಿರುವ ರಾಮಲಿಂಗಾರೆಡ್ಡಿ
ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಸೆಪ್ಟೆಂಬರ್ 18ರಂದೇ ಈ ಕುರಿತು ಪಕ್ಷೇತರ ಕಾರ್ಪೊರೇಟರ್ಗಳು ಹಾಗೂ ಜೆಡಿಎಸ್-ಕಾಂಗ್ರೆಸ್ ಸದಸ್ಯರ ಸಭೆ ನಡೆಸಿ ಜಯನಗರ ವಾರ್ಡ್ನ ಕಾರ್ಪೊರೇಟರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ನೀಡಲು ಮನವಿ ಮಾಡಿದ್ದಾರೆ. ಅಲ್ಲದೆ ಗಂಗಾಂಬಿಕೆ ಅವರನ್ನೇ ಆಯ್ಕೆ ಮಾಡಲು ಈಗಾಗಲೇ ತೆರೆಮರೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ಪರಮೇಶ್ವರ್ಗೆ ಬೆಂಬಲ ಯಾರಿಗೆ?
ಉಪಮುಖ್ಯಮಂತ್ರಿ ಜೊತೆಗೆ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಪರಮೇಶ್ವರ್ ಅವರು ಸೌಮ್ಯಾ ಶಿವಕುಮಾರ್ ಅವರನ್ನು ಮೇಯರ್ ಮಾಡಲು ಯತ್ನಿಸುತ್ತಿದ್ದಾರೆ. ಉಸ್ತುವಾರಿ ಸಚಿವ ಸ್ಥಾನದ ವಿಷಯದಲ್ಲಿ ರಾಮಲಿಂಗಾ ರೆಡ್ಡಿ ಅವರೊಂದಿಗೆ ಈಗಾಗಲೇ ಮನಸ್ಥಾಪ ಸೃಷ್ಟಿಸಿಕೊಂಡಿರುವ ಪರಮೇಶ್ವರ್, ಮೇಯರ್ ಸ್ಥಾನ ರೆಡ್ಡಿ ಅವರ ಬೆಂಬಲಿಗರ ಪಾಲಾದರೆ ಬಿಬಿಎಂಪಿ ಮೇಲೆ ತಮ್ಮ ಹಿಡಿತ ತಪ್ಪುತ್ತದೆ ಎಂಬ ಕಾರಣಕ್ಕೆ ಅವರು ತಮ್ಮ ಶಕ್ತಿ ಮೀರಿ ತಮ್ಮ ಬೆಂಬಲಿಗರಿಗೆ ಮೇಯರ್ ಸ್ಥಾನ ಕಲ್ಪಿಸಲು ಒದ್ದಾಡುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಬೆಂಬಲ ಸೌಮ್ಯಾ ಶಿವಕುಮಾರ್ಗೆ
ಪರಮೇಶ್ವರ್ ಬೆಂಬಲಿಸಿರುವ ಸೌಮ್ಯಾ ಶಿವಕುಮಾರ್ ಅವರಿಗೆ ಸಚಿವ ಡಿ.ಕೆ.ಶಿವಕುಮಾರ್ ಸಹ ಬೆಂಬಲ ನೀಡಿದ್ದು. ತಮ್ಮ ಬೆಂಬಲಿಗರಾದ ಶಿವಕುಮಾರ್ ಅವರ ಪತ್ನಿ ಸೌಮ್ಯಾ ಅವರೇ ಮೇಯರ್ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಮೇಯರ್ ಆಗಿದ್ದ ಜಿ.ಪದ್ಮಾವತಿ ಹಾಗೂ ಪ್ರಸ್ತುತ ಮೇಯರ್ ಸಂಪತ್ ರಾಜ್ ಸಹ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರೇ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಒತ್ತಾಯವಾಗಿ ವ್ಯತಿರಿಕ್ತವಾಗಿ ಗಂಗಾಂಬಿಕೆಗೆ ಮೇಯರ್ ಸ್ಥಾನ ಸಿಕ್ಕರೆ ಮತ್ತೆ ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ.

ರಾಮಲಿಂಗಾ ರೆಡ್ಡಿ-ಪರಮೇಶ್ವರ್ ಜಟಾಪಟಿ?
ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮೇಯರ್ ಆಯ್ಕೆ ಕುರಿತು ಚರ್ಚೆ ನಡೆಯಿತು ಎನ್ನಲಾಗಿದ್ದು. ಪರಮೇಶ್ವರ್, ಡಿ.ಕೆ.ಶಿವಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಹಿರಿಯ ಕಾಂಗ್ರೆಸ್ಸಿಗರ ಮಾತಿನಿಂದ ಅಸಂತುಷ್ಟಗೊಂಡ ರಾಮಲಿಂಗಾರೆಡ್ಡಿ ಅವರು ಸಭೆಯ ಮಧ್ಯದಲ್ಲೇ ಅಸಮಾಧಾನಗೊಂಡು ಹೊರ ಹೋಗಿದ್ದಾರೆ.

ವೀರಶೈವರಿಗೆ ಅವಕಾಶ ನೀಡಲು ಒತ್ತಾಯ
ಹಲವು ದಶಕಗಳಿಂದ ಬಿಬಿಎಂಪಿಗೆ ವೀರಶೈವ ಸಮುದಾಯದವರು ಮೇಯರ್ ಆಗಿಲ್ಲ ಹಾಗಾಗಿ ಈ ಬಾರಿ ವೀರಶೈವ ಸಮುದಾಯಕ್ಕೆ ಅವಕಾಶ ನೀಡಿ ಗಂಗಾಂಬಿಕ ಮಲ್ಲಿಕಾರ್ಜುನ ಅವರನ್ನು ಮೇಯರ್ ಮಾಡಬೇಕು ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಮಠಾಧೀಶರಿಂದ ಕಾಂಗ್ರೆಸ್ ಮೇಲೆ ಒತ್ತಡ ಬಂದಿದೆ. ಹಾಗಾಗಿ ಈ ಬಾರಿ ಗಂಗಾಂಬಿಕ ಅವರಿಗೆ ಮೇಯರ್ ಆಗುವ ಸಿಗುವ ಸಾಧ್ಯತೆ ಇದೆ.

ಉಪಮೇಯರ್ ಸ್ಥಾನ ಜೆಡಿಎಸ್ಗೆ
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು. ಉಪಮೇಯರ್ ಸ್ಥಾನವನ್ನು ಈ ಬಾರಿ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಜೆಡಿಎಸ್ನ ಇಮ್ರಾನ್ ಪಾಷಾ ಅವರು ಉಪಮೇಯರ್ ಆಗುವುದು ಬಹುತೇಕ ಖಚಿತವಾಗಿದೆ. ಮೇಯರ್ ಆಯ್ಕೆ ಚುನಾವಣೆಯು ಸೆಪ್ಟೆಂಬರ್ 28ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ.











Click it and Unblock the Notifications