ಗ್ರಾಹಕರು ಮಾಸ್ಕ್ ಹಾಕದಿದ್ದರೆ ಮಾಲೀಕರಿಗೆ ದಂಡ; ಅಧಿಸೂಚನೆ ಹಿಂಪಡೆಯುವಂತೆ ಒತ್ತಾಯ
ಬೆಂಗಳೂರು, ಡಿಸೆಂಬರ್ 09: ಗ್ರಾಹಕರು ಕೋವಿಡ್ ನಿಯಮ ಉಲ್ಲಂಘಿಸಿದರೆ, ಆಯಾ ವಾಣಿಜ್ಯ ಮಳಿಗೆ ಮೇಲೆ ದಂಡ ವಿಧಿಸುವುದಾಗಿ ಈಚೆಗೆ ಬಿಬಿಎಂಪಿ ಅಧಿಸೂಚನೆ ಹೊರಡಿಸಿದ್ದು, ಈ ಕುರಿತಂತೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸದಸ್ಯರು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅವರನ್ನು ಭೇಟಿಯಾಗಿ ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್
ಸರ್ಕಾರದ ಗುರಿ ಏನಿದ್ದರೂ ನಿಯಮ ಪಾಲನೆ ಮಾಡದ ನಾಗರಿಕರಿಗೆ ದಂಡ ಹಾಕುವುದಾಗಿರಬೇಕೇ ಹೊರತು ವಾಣಿಜ್ಯ ಮಳಿಗೆ ಮಾಲೀಕರ ಮೇಲಲ್ಲ. ಇದರ ಬದಲು ಮಾಸ್ಕ ಧರಿಸದ, ಸಾಮಾಜಿಕ ಅಂತರ ಕಾಪಾಡದ ರಾಜಕಾರಣಿಗಳಿಗೆ ದಂಡ ಹಾಕಲಿ. ಯಾರು ನಿಯಮ ಪಾಲಿಸುವುದಿಲ್ಲವೋ ಅಂಥವರಿಗೆ ದಂಡ ಹಾಕಲಿ ಎಂದು ಆಗ್ರಹಿಸಿದ್ದಾರೆ.
ಕೊರೊನಾ ಲಸಿಕೆ ಪಡೆಯುವ 1.15 ಲಕ್ಷ ಜನರ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ
ರೆಸ್ಟೋರೆಂಟ್, ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ತಿನ್ನುವಾಗ, ಕುಡಿಯುವಾಗ ಮಾಸ್ಕ್ ಹಾಕಿಕೊಳ್ಳಲು ಆಗುವುದಿಲ್ಲ. ಸರ್ಕಾರಕ್ಕೆ ತಾನು ಹೊರಡಿಸಿರುವ ಅಧಿಸೂಚನೆ ಕುರಿತು ಸ್ಪಷ್ಟತೆ ಹೊಂದಿಲ್ಲ. ಮಾಸ್ಕ್ ಧರಿಸುವುದು, ನಿಯಮ ಪಾಲಿಸುವುದು ನಾಗರೀಕರ ಕರ್ತವ್ಯ. ವಾಣಿಜ್ಯ ಮಳಿಗೆಗಳ ಮಾಲೀಕರೂ, ತಮ್ಮ ಗ್ರಾಹಕರು ಮಾಸ್ಕ್ ಧರಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಿಸಬಹುದು. ಆದರೆ ಮಾಲೀಕರ ಮೇಲೆ ದಂಡ ಹೇರುವುದು ಸರಿಯಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್ ತಿಳಿಸಿದರು.
Recommended Video
ಮಾರ್ಷಲ್ ಗಳು ಹಾಗೂ ಆರೋಗ್ಯಾಧಿಕಾರಿಗಳು ಎಲ್ಲಾ ಕಡೆಯೂ ಹೋಗಿ, ಜನರು ಮಾಸ್ಕ್ ಹಾಕಿಕೊಂಡಿದ್ದಾರೆಯೇ ಇಲ್ಲವೇ ಎಂಬುದನ್ನು ಗಮನಿಸಲು ಆಗುವುದಿಲ್ಲ. ಆ ಸಂದರ್ಭ ಮಳಿಗೆಗಳ ಮಾಲೀಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಗ್ರಾಹಕರಲ್ಲಿ ಜಾಗೃತಿ ಉಂಟು ಮಾಡಬೇಕಾಗುತ್ತದೆ. ಆದರೆ ಜನರು ಮಾಡುವ ತಪ್ಪಿಗೆ ಮಾಲೀಕರನ್ನು ಹೊಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ದಂಡದ ಮೊತ್ತವನ್ನು ಸರ್ಕಾರ ಆದಾಯ ಎಂಬಂತೆ ನೋಡಬಾರದು. ಜಾಗೃತಿಗೆ ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತರು, ಇದು ಸರ್ಕಾರದ ಆದೇಶ. ಅಸೋಸಿಯೇಷನ್ ಸದಸ್ಯರು ಕೊಟ್ಟಿರುವ ಸಲಹೆಯನ್ನು ಸರ್ಕಾರಕ್ಕೆ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ.