ಬಿಬಿಎಂಪಿ ಚುನಾವಣೆ: ಸುಪ್ರೀಂಕೋರ್ಟ್ನಲ್ಲಿ ಕ್ಲೈಮ್ಯಾಕ್ಸ್ ಹಂತ
ಬೆಂಗಳೂರು, ಆ. 25: ಬಿಬಿಎಂಪಿ ಚುನಾವಣೆ ವಿವಾದ ಚೆಂಡು ಮತ್ತೆ ಸುಪ್ರೀಂಕೋರ್ಟ್ ಅಂಗಳ ತಲುಪಿರುವ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯುವ ಕುರಿತು ಅಂತಿಮ ನಿರ್ಧಾರ ಆಗುವ ಸಾಧ್ಯತೆ ಇದೆ.
ಇತ್ತ ಹೈಕೋರ್ಟ್, ಯಾವುದೇ ಮಧ್ಯಂತರ ಆದೇಶ ನೀಡದೆ ಸುಪ್ರೀಂಕೋರ್ಟ್ ನಿಂದ ಸ್ಪಷ್ಟನೆ ಕೋರಿದೆ. ಹಾಗಾಗಿ ಮತ್ತೆ ಎಲ್ಲರ ಚಿತ್ತ ಸುಪ್ರೀಂಕೋರ್ಟ್ನತ್ತ ನೆಟ್ಟಿದೆ.
ವಾರ್ಡ್ವಾರು ಮೀಸಲಿಗೂ ತಕರಾರು: ಈ ಮಧ್ಯೆ, ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಶ್ನಿಸಿ ಸಲ್ಲಿಸಿ ಈಜಿಪುರದ ಕೆ.ಮಹದೇವ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರ, ಬಿಬಿಎಂಪಿ, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರ ಪರ ವಕೀಲರು, ನಿಯಮಬಾಹಿರವಾಗಿ ಮೀಸಲಾತಿ ನಿಗದಿಪಡಿಸಿದ್ದಾರೆಂದು ಆರೋಪಸಿ, ಮೀಸಲಾತಿ ಪಟ್ಟಿ ರದ್ದು ಮಾಡಬೇಕೆಂದು ಕೋರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ನೋಟಿಸ್ ಜಾರಿ ನಂತರ ಮುಂದಿನ ವಿಚಾರಣೆಯನ್ನು ಸೆ.1 ಕ್ಕೆ ಮುಂದೂಡಿತು.
ಸುಪ್ರೀಂನಿಂದಲೇ ಸ್ಪಷ್ಟನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ಗಳ ಪುನರ್ವಿಂಗಡಣೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಬಹುದೇ ಹಾಗೂ ಈ ಸಂಬಂಧ ಏನಾದರೂ ಮಧ್ಯಂತರ ಆದೇಶಗಳನ್ನು ಹೊರಡಿಸಬಹುದೇ ಎಂಬ ಹೈಕೋರ್ಟ್ ಸುಪ್ರೀಂಕೋರ್ಟ್ನಿಂದ ಸ್ಪಷ್ಟನೆ ಬಯಸಿದೆ.
ಈ ವಿಚಾರವಾಗಿ ಸುಪ್ರೀಂಕೋರ್ಟ್ನಿಂದ ಸ್ಪಷ್ಟನೆ ತರುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿದೆ. ಆಗಸ್ಟ್ 26ಕ್ಕೆ ಸುಪ್ರೀಂಕೋರ್ಟ್ನಲ್ಲಿಈ ಅರ್ಜಿ ವಿಚಾರಣೆಗೆ ನಿಗದಿಯಾಗಿರುವುರಿಂದ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಆ.29ಕ್ಕೆ ಮುಂದೂಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020ರಂತೆ ಬಿಬಿಎಂಪಿ ವಾರ್ಡ್ಗಳ ಪುನರ್ ವಿಂಗಡಣೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ವಕೀಲ ಎಸ್. ಇಸ್ಮಾಯಿಲ್ ಜಬಿವುಲ್ಲಾ, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಾಜಿ ಕಾಪೋರೇಟರ್ಗಳಾದ ಬಿ.ಎನ್. ಮಂಜುನಾಥ್ ರೆಡ್ಡಿ, ಎನ್. ನಾಗರಾಜ್ ಹಾಗೂ ಇತರರು ಸೇರಿ ಸಲ್ಲಿಸಿರುವ ಒಟ್ಟು ಆರು ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಳೆದ ವಾರ ವಿಚಾರಣೆ ನಡೆಸಿತ್ತು.
ಸ್ಪಷ್ಟನೆ ಅಗತ್ಯವಿದೆ: ಚುನಾವಣಾ ಆಯೋಗ ಹಾಗೂ ಅರ್ಜಿದಾರರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿಗಳ ವಿಚಾರಣೆ ಮುಂದುವರಿಸಿ ಯಾವುದೇ ಆದೇಶ ಹೊರಡಿಸಬೇಕಿದ್ದರೆ ಸುಪ್ರೀಂಕೋರ್ಟ್ನ ಸ್ಪಷ್ಟನೆಯ ಅಗತ್ಯವಿದೆ. ಅದಿಲ್ಲದೆ ಅರ್ಜಿಗಳನ್ನು ಆಲಿಸಲು ಸುರೇಶ್ ಮಹಾಜನ್ ಪ್ರಕರಣದಲ್ಲಿಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೈ ಕಟ್ಟಿ ಹಾಕಿದಂತಾಗಿದೆ. ಆದ್ದರಿಂದ ಆ.26ರಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಬರಲಿಕ್ಕಿದ್ದು, ಅರ್ಜಿದಾರರು ಸ್ಪಷ್ಟನೆ ಪಡೆದುಕೊಂಡು ಬಂದರೆ ವಿಚಾರಣೆ ಮುಂದುವರಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಮುಂದೂಡಿತು.
ಹಸ್ತಕ್ಷೇಪವಾಗುತ್ತದೆ: ರಾಜ್ಯ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕೆ.ಎನ್. ಫಣೀಂದ್ರ, ಸುರೇಶ್ ಮಹಾಜನ್ ಪ್ರಕರಣದಲ್ಲಿಮಧ್ಯಪ್ರದೇಶ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನಲ್ಲಿನೀಡಿರುವ ನಿರ್ದೇಶನಗಳು ಕೇವಲ ಆ ರಾಜ್ಯದ ಚುನಾವಣಾ ಆಯೋಗಕ್ಕೆ ಸೀಮಿತವಲ್ಲ, ಬದಲಿಗೆ ಎಲ್ಲಾರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುತ್ತದೆ.
ಈ ವಿಚಾರ ಸುಪ್ರೀಂಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ ಹೈಕೋರ್ಟ್ ಮಧ್ಯಪ್ರವೇಶಿಸಿದರೆ ಸುಪ್ರೀಕೋರ್ಟ್ ತೀರ್ಪಿಗೆ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಚುನಾವಣೆ ವಿಳಂಬ ಮಾಡಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆಕ್ಷೇಪಣೆಗಳಿದ್ದರೆ ಅರ್ಜಿದಾರರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಿ. ಇದಲ್ಲದೆ, ಬಿಬಿಎಂಪಿ ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸೆ.22ರೊಳಗೆ ಅದನ್ನು ಅಂತಿಮಗೊಳಿಸಲಾಗುವುದು ತಿಳಿಸಿದರು. ಆದರೆ, ಸುರೇಶ್ ಮಹಾಜನ್ ಪ್ರಕರಣ ತಮಗೆ ಅನ್ವಯಿಸುವುದಿಲ್ಲಎಂಬುದು ಎಲ್ಲಾಅರ್ಜಿದಾರರ ವಾದವಾಗಿತ್ತು.
ಮಧ್ಯಂತರ ಆದೇಶಕ್ಕೆ ನಕಾರ: ಈ ಮಧ್ಯೆ ಮಧ್ಯಂತರ ಆದೇಶಕ್ಕೆ ನಿರಾಕರಿಸಿದೆ. ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದ್ದರಿಂದ ವಾರ್ಡ್ಗಳ ಪುನರ್ವಿಂಗಡಣೆ ತಡೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಆದರೆ, ಯಾವುದೇ ಮಧ್ಯಂತರ ಆದೇಶ ಹೊರಡಿಸುವುದಿಲ್ಲ. ಅರ್ಜಿಗಳ ಮೆರಿಟ್ ಆಧಾರದ ಮೇಲೆ ಅಂತಿಮ ತೀರ್ಪು ನೀಡಲಾಗುವುದು ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತು.