ಅರ್ಧಕ್ಕಿಂತ ಕಡಿಮೆ ಬೆಂಗಳೂರಿಗರ ತೀರ್ಪು ಬಂದ ಮೇಲೇನು?
ಬೆಂಗಳೂರು, ಆಗಸ್ಟ್. 24: ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಅರ್ಧಕ್ಕಿಂತ ಕಡಿಮೆ (ಶೇ.49) ಬೆಂಗಳೂರಿಗರು ನೀಡಿದ ತೀರ್ಪು ಹೊರಬೀಳಲಿದೆ. ಪ್ರತಿ ಕ್ಷಣ ಕ್ಷಣದ ಮಾಹಿತಿಗಾಗಿ ಆಗಸ್ಟ್ 25 ಬೆಳಗ್ಗೆ 7.30ರಿಂದಲೇ ಒನ್ಇಂಡಿಯಾ ಕನ್ನಡ ವೀಕ್ಷಿಸಿ.
ನ್ಯಾಯಾಲಯದ ಆದೇಶ ಅನ್ವಯ ಚುನಾವಣೆಗೆ ಹಿಡಿದಿದ್ದ ಗ್ರಹಣ ಬಿಡುಗಡೆಯಾಗಿತ್ತು. 197 ವಾರ್ಡ್ ಗಳ ಭವಿಷ್ಯ ಹೊರಬಿದ್ದ ನಂತರವೇ ಅಧಿಕಾರದ ಹಾದಿಯ ಲೆಕ್ಕಾಚಾರ ಆರಂಭವಾಗಲಿದೆ.
ಶನಿವಾರ ಮತದಾನದಲ್ಲಿ ಪಾಲ್ಗೊಳ್ಳದ ನಾಗರಿಕರಿಗೂ ಫಲಿತಾಂಶದ ಬಗ್ಗೆ ಕುತೂಹಲವಿದೆ. ಜನರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಗೆ ಮಣೆ ಹಾಕಿದ್ದಾರೋ, ಹಿಂದಿನ ಸಾರಿ ಬಿಬಿಎಂಪಿಯನ್ನು ಆಳಿದ್ದ ಬಿಜೆಪಿಗೆ ಮತ್ತೆ ಅವಕಾಶ ನೀಡುತ್ತಾರೋ, ಎಲ್ಲರ ನಿರೀಕ್ಷೆಯಂತೆ ಅತಂತ್ರ ಪರಿಸ್ಥಿತಿ ಉಂಟಾಗುತ್ತದೆಯೋ ಎಲ್ಲದಕ್ಕೂ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಉತ್ತರ ಸಿಗಲಿದೆ.
'ಯಾರೇ ಬಂದ್ರೂ ಬೆಂಗಳೂರು ಅಭಿವೃದ್ಧಿ ಮಾಡ್ಲಪ್ಪಾ, ರಸ್ತೆ, ಕುಡಿವ ನೀರು ಮುಂತಾದ ಮೂಲ ಸೌಕರ್ಯ ಆದ್ರೂ ಮೊದ್ಲು ಕೊಡ್ಲಿ, ದೊಡ್ಡ ದೊಡ್ಡ ಐಟಿ ಪ್ರಾಜೆಕ್ಟ್ ನಂತ್ರ ಮಾಡ್ಕಳ್ಲಿ ' ಎಂಬುದು ಸಾಮಾನ್ಯ ನಾಗರಿಕನ ಮನದಲ್ಲಿರುವ ಮಾತು.
ಮಹಾನಗರ ಪಾಲಿಕೆಗೆ ಶೇ. 50 ಮಹಿಳಾ ಮೀಸಲನ್ನು ಅಳವಡಿಸಿಕೊಂಡ ಚುನಾವಣೆ ಇದು. ಪ್ರಚಾರದಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಚುನಾವಣೆ ಇದು ಎಂದು ಕರೆಸಿಕೊಂಡಿದೆ.

ಯಾರಿಗೆ ಎಷ್ಟು ಬೇಕು
ಅಧಿಕಾರ ಹಿಡಿಯಲು ಕಾಂಗ್ರೆಸ್ ಗೆ 100 ಸ್ಥಾನ ಸಿಕ್ಕರೂ ಸಾಕು, ಶಾಸಕ ಮತ್ತು ಸಂಸದರ ಮತ ಅವರಿಗೆ ಪ್ಲಸ್ ಆಗುತ್ತದೆ. ಬಿಜೆಪಿ 115ಕ್ಕಿಂತ ಅಧಿಕ ಸ್ಥಾನ ಗಳಿಸಿಕೊಂಡರೆ ಸರ್ಕಸ್ ಮಾಡಬಹುದು.

ಕಾಂಗ್ರೆಸ್ ಗೆ ಬಹುಮತ?
ಮಾಧ್ಯಮಗಳ ಸಮೀಕ್ಷೆ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ಹೇಳಿದೆ. ಅದರಂತೆ ಆದರೆ ಕಾಂಗ್ರೆಸ್ ಸರ್ಕಾರ ಇನ್ನು ಮೂರು ವರ್ಷ ಅಧಿಕಾರ ನಡೆಸಲಿದ್ದು ಮಹಾನಗರಕ್ಕೆ ಇನ್ನಷ್ಟು ಅನುದಾನ ಸಿಕ್ಕರೆ ಆಶ್ಚರ್ಯವಿಲ್ಲ. ಬೆಂಗಳೂರಿಗೆ ಪ್ರತ್ಯೇಕ ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದನ್ನು ಇಲ್ಲಿ ಉದಾರಿಸಬಹುದು. ಸಿದ್ದರಾಮಯ್ಯನವರ ಮುಖ್ಯಮಂತ್ರಿ ಗಾದಿ ಮತ್ತಷ್ಟು ಭದ್ರವಾಗುತ್ತದೆ.

ಬಿಜೆಪಿಗೆ ಜನ ಜೈ ಅಂದರೆ?
ಬಿಜೆಪಿಗೆ ಒಂದು ವೇಳೆ ಜನ ಬೆಂಬಲ ನೀಡಿದ್ದರೆ ಬೆಂಗಳೂರಿಗೆ ಕೇಂದ್ರ ಸರ್ಕಾರದಿಂದ ಕೆಲ ಯೋಜನೆಗಳು ಸುಲಭವಾಗಿ ಹರಿದು ಬರಬಹುದು. ಇತ್ತ ಕಾಂಗ್ರೆಸ್ ನಲ್ಲಿ ರಾಜಕೀಯವಾಗಿ ಮಹತ್ವದ ಬದಲಾವಣೆ ಸಾಧ್ಯತೆಯಿದ್ದು ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿರುವ ಬೆಂಗಳೂರು ಸಚಿವರಿಗೆ ಸಮಸ್ಯೆ ಉಂಟಾಗಬಹುದು.

ಕಿಂಗ್ ಮೇಕರ್ ಜೆಡಿಎಸ್?
ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಕಿಂಗ್ ಮೇಕರ್ ಎನ್ನುವುದು ಗೊತ್ತೆ ಇದೆ. ಹೀಗಾದಲ್ಲಿ ಮತ್ತೆ ರಾಜಕೀಯ ಮೇಲಾಟ ಆರಂಭವಾಗುತ್ತದೆ. ಜಾತ್ಯತೀತ ಶಕ್ತಿಗಳು ಒಂದಾಗುತ್ತೇವೆ ಎಂದು ಹೇಳಿಕೆ ನೀಡಿಕೊಂಡರೆ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು.

ಸ್ವತಂತ್ರರ ಸಹಕಾರಲ್ಲಿ ಬಹುಮತ?
ಪಕ್ಷೇತರರು, ಎಐಎಡಿಎಂಕೆ, ಆಮ್ ಆದ್ಮಿ ಪಾರ್ಟಿ ಎಲ್ಲ ಸೇರಿ 10-15 ಸ್ಥಾನ ಬಂದರೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಾರ್ಟಿ ಅವರನ್ನು ಸೇರಿಸಿಕೊಂಡು ಅಧಿಕಾರ ಪಡೆಯಬಹುದು. ಆಗ ಪ್ರಮುಖ ಎರಡು ರಾಜಕೀಯ ಪಕ್ಷಗಳು ಅಧಿಕಾರದಿಂದ ಹೊರಗಿರಬೇಕಾಗುತ್ತದೆ.

ಬಿಜೆಪಿ ಜೆಡಿಎಸ್ ಸಖ್ಯ ಸಾಧ್ಯವೇ?
ಹಿಂದೆ ಕರ್ನಾಟದಲ್ಲಿ ಇಪ್ಪತ್ತು ತಿಂಗಳ ಸರ್ಕಾರ ಮಾಡಿಕೊಂಡು ನಂತರ ಮನಸ್ಸು ಮುರಿದುಕೊಂಡಿದ್ದ ಪಕ್ಷಗಳು ಮತ್ತೆ ಒಂದಾಗಬಹುದೇ ಎಂಬುದು ಮಹತ್ವದ ಸಂಗತಿ. ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಕೆಲ ತಿಂಗಳ ಹಿಂದೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ರೈತರ ಆತ್ಮಹತ್ಯೆ ವಿರುದ್ಧ ಎರಡು ಪಕ್ಷಗಳು ವಿಧಾನಸಭೆಯಲ್ಲಿ ಒಟ್ಟಾಗೇ ಹೋರಾಟ ನಡೆಸಿದ್ದವು.

ಅಶೋಕ್ ಮತ್ತು ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಿಬಿಎಂಪಿ ಚುನಾವಣೆಯಲ್ಲು ಬಿಜೆಪಿ ಕಡೆಗಣಿಸಿದೆ ಎಂಬ ಆರೋಪಗಳು ಹರಿದಾಡಿದ್ದವು. ಒಂದು ವೇಳೆ ಬಿಜೆಪಿ ನೆಲಕಚ್ಚಿದರೆ ಯಡಿಯೂರಪ್ಪ ಅಗತ್ಯ ಎಂದು ನಾಯಕರು ಅಂದುಕೊಳ್ಳಬಹುದು. ಬಿಜೆಪಿ ವಿಜಯಿಯಾದರೆ ಎಲ್ಲ ಕ್ರೆಡಿಟ್ ಆರ್ ಅಶೋಕ್ ಅವರಿಗೆ ಸಲ್ಲಿಕೆ.

ಆಡಳಿತ ಯಂತ್ರಕ್ಕೆ ಚುರುಕು
ಮುಖ್ಯಮಂತ್ರಿ ಒಳಗೊಂಡಂತೆ ಅನೇಕ ಸಚಿವರು ಬಿಬಿಎಂಪಿ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದರು. ಫಲಿತಾಂಶ ಕಾಂಗ್ರೆಸ್ ಪರವಾಗಿ ಮೀಸಲು ಪ್ರಕಟವಾದ ಮೇಲೆ ಮೇಯರ್ ಆಯ್ಕೆ ಕಸರತ್ತಿನಲ್ಲಿ ತೊಡಗುತ್ತಾರೆ. ಆದರೆ ಕಾಂಗ್ರೆಸ್ ನಲ್ಲಿ ಹೈ ಕಮಾಂಡ್ ನಿರ್ಧಾರ ಅಂತಿಮ. ಉಸ್ತುವಾರಿ ಸಚಿವರು ಸಲಹೆ ನೀಡಬಹುದು ಅಷ್ಟೆ.












Click it and Unblock the Notifications