ಬೆಂಗಳೂರು: ರಸ್ತೆ ವಿಸ್ತರಣೆ, ಮೇಲ್ಸೇತುವೆಗಾಗಿ 40ಮರ ತೆರವಿಗೆ ಬಿಬಿಎಂಪಿ ನಿರ್ಧಾರ: ಸಾರ್ವಜನಿಕರ ಆಕ್ರೋಶ
ಬೆಂಗಳೂರು, ಡಿಸೆಂಬರ್ 25: ಬೆಂಗಳೂರಿನ ಮಲ್ಲೇಶ್ವರದಲ್ಲಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ದಶಕಗಳಷ್ಟು ಹಳೆಯದಾದ ಸುಮಾರು 40 ಮರಗಳಿಗೆ ಕೊಡಲಿ ಹಾಕಲು ಬಿಬಿಎಂಪಿ ನಿರ್ಧರಿಸಿದೆ.
ಇಲ್ಲಿನ ಸ್ಯಾಂಕಿ ಟ್ಯಾಂಕ್ ಬಂಡ್ ರಸ್ತೆಯನ್ನು ವಿಸ್ತರಿಸಲು ಹಾಗೂ ಟಿ.ಚೌಡಯ್ಯ ರಸ್ತೆಯಿಂದ 18ನೇ ಕ್ರಾಸ್ವರೆಗೆ ಮೇಲ್ಸೇತುವೆಯನ್ನು ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಈ ಸಂಬಂಧ ಟೆಂಡರ್ ಆಹ್ವಾನಿಸಿದೆ.
ಬೆಂಗಳೂರು: ಮತದಾರ ಪಟ್ಟಿ ಪರಿಷ್ಕರಣೆ, ಬಿಎಲ್ಎ ನಿಯೋಜನೆಗೆ ರಾಜಕೀಯ ಪಕ್ಷಗಳಿಗೆ ಬಿಬಿಎಂಪಿ ಸೂಚನೆ
ಭಾಷ್ಯಂ ಸರ್ಕಲ್ ಮತ್ತು ಮಲ್ಲೇಶ್ವರಂ 18ನೇ ಕ್ರಾಸ್ ನಡುವಿನ 1.1 ಕಿಮೀ ರಸ್ತೆಯನ್ನು ವಿಸ್ತರಣೆ ಒಂದು ವಿವಾದಾತ್ಮಕ ಯೋಜನೆ ಎಂಬ ಮಾತುಗಳು ಕೇಳಿ ಬಂದಿವೆ. ಜನನಿಬಿಡ ಪ್ರದೇಶಗಳ ರಸ್ತೆಯನ್ನು ಎರಡೂ ಬದಿಗಳಲ್ಲಿ 7.5 ಮೀ ಕ್ಯಾರೇಜ್ಪಥಗಳನ್ನು ಸಂಪರ್ಕಿಸುವಂತೆ 560-ಮೀಟರ್ ಉದ್ದದ ರಸ್ತೆಯಲ್ಲಿ ನಾಲ್ಕು-ಪಥದ ಮೇಲ್ಸೇತುವೆ ನಿರ್ಮಿಸುವ ಉದ್ದೇಶ ಬಿಬಿಎಂಪಿ ಹೊಂದಿದೆ.
ಉದ್ದೇಶಿತ ಯೋಜನೆ ಸಂಬಂಧ ಬೃಹತ್ ಮರಗಳ ತೆರವಿಗೆ ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮರ ಕಡಿತದಿಂದ ಮುಂದೆ ಗಂಭೀರ ಪರಿಸರದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಯೋಜನೆಗೆ ಅನುಮೋದನೆ ನೀಡುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ. ಈ ಕಾಮಗಾರಿ ವಿಚಾರದಲ್ಲಿ ಪರಿಸರಕ್ಕೆ ಪೂರಕವಾಗಿ ಅಂಶಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಎದ್ದು ಕಾಣಿಸುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ. ರಸ್ತೆ ಕೇವಲ 15-18 ಮೀಟರ್ ಅಗಲವಿದೆ, ಅನೇಕ ಬಾರಿ ಎರಡು ಕಾರುಗಳು ಏಕಕಾಲದಲ್ಲಿ ಹಾದುಹೋಗಲು ಸಾಧ್ಯವಿಲ್ಲ, ದಟ್ಟಣೆ ಕಡಿಮೆ ಮಾಡಲು, ನಾವು ರಸ್ತೆಯನ್ನು 24 ಮೀಟರ್ಗೆ ವಿಸ್ತರಿಸುವ ಅಗತ್ಯವಿದೆ ಎಂದು ಬಿಬಿಎಂಪಿ ಹೇಳಿದೆ.
ಮರಗಳ ನಾಶದಿಂದ ಆಪತ್ತು: ಸ್ಥಳಿಯರ ಆತಂಕ
ಮಳೆಗಾಲದ ಸಂದರ್ಭದಲ್ಲಿ ರೀ ಮಳೆ ಸುರಿಯುವುದರಿಂದ ಸ್ಯಾಂಕಿ ಟ್ಯಾಂಕ್ ಪೂರ್ಣವಾಗಿ ತುಂಬುತ್ತದೆ. ಕೆಲವು ಭಾರಿ ತುಂಬಿ ಹರಿಯುತ್ತದೆ. ಹೀಗಿದ್ದಾಗ ಈ ಪ್ರದೇಶಗಳಲ್ಲಿ ಹಸಿರಿನ ನಾಶದಿಂದ ಮಣ್ಣು ಮತ್ತಷ್ಟು ಸಡಿಲಗೊಳ್ಳುತ್ತದೆ ಎಂಬ ಆತಂಕವಿದೆ. ಇದು ಭವಿಷ್ಯದಲ್ಲಿ ಕೆರೆಯ ಕಟ್ಟೆ ದುರ್ಬಲಗೊಳ್ಳಲು ದಾರಿ ಮಾಡಿಕೊಡಲಿದೆ. ಸಂಚಾರ ಒಳಿತಗಿಂತ ಮಲ್ಲೇಶ್ವರಂ ಈ ಭಾಗದ ಜನಸಾಮಾನ್ಯರಿಗೆ ಇದು ಹೆಚ್ಚು ತೊಂದರೆ ನೀಡುತ್ತದೆ ಎಂದು ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸ್ಯಾಂಕಿ ಕೆರೆಯ ಭಾಗದ ಈ ರಸ್ತೆಯ ಸಾಮಾನ್ಯ ರಸ್ತೆಗಿಂತ ಭಿನ್ನವಾಗಿದೆ. ಇಲ್ಲಿ 80-100 ವರ್ಷಗಳಷ್ಟು ಹಳೆಯದಾದ ಮರಗಳು ಇವೆ. ಬೆಂಗಳೂರಿನ ಹಳೆಯ ರಸ್ತೆಯಗಳಲ್ಲಿ ಈ ರಸ್ತೆಯು ಒಂದು. 2011 ರಲ್ಲೇ ಈ ಯೋಜನೆಯನ್ನು ವಿರೋಧಿಸಲಾಗಿತ್ತು. ಸಂಚಾರ ಅಡಚಣೆ ನಿವಾಸಿರಲು ನಿರ್ಧರಿಸಿದ ಬಿಬಿಎಂಪಿ ಯೋಜನೆಯು ಅಲ್ಪಾವಧಿಯ ಪರಿಹಾರವಾಗಿದೆ ಎಂದು ಮತ್ತೊಬ್ಬ ನಿವಾಸಿ ಹೇಳಿದರು.
ರಾಜ್ಯ ಸರ್ಕಾರ ಪರಿಸರಕ್ಕೆ ವಿರುದ್ಧವಾದ ಯೋಜನೆಗಳನ್ನು ಉತ್ತೇಜಿಸುವ ಬದಲು ಸಾರ್ವಜನಿಕ ಸಾರಿಗೆ ಮತ್ತು ಲಭ್ಯವಿರುವ ಇತರ ಪರ್ಯಾಯಗಳನ್ನು ಉತ್ತೇಜಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಅಧಿಕಾರಿಗಳು ಸಿಎನ್ಆರ್ ರಾವ್ ರಸ್ತೆ ಮತ್ತು ಬಳ್ಳಾರಿ ರಸ್ತೆ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಲು ಅವಕಾಶ ಇದೆ. 2011 ರಲ್ಲಿ, ಯೋಜನೆಯನ್ನು ಮೊದಲು ಪ್ರಸ್ತಾಪಿಸಿದಾಗ, ಸ್ಥಳೀಯ ನಿವಾಸಿಗಳಿಂದ ವ್ಯಾಪಕ ಆಂದೋಲನ ನಡೆದಿತ್ತು. ಇದೇ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.ಆದರೆ ನ್ಯಾಯಾಲಯ ಅಂದು ಬಿಬಿಎಂಪಿ ಪರ ತೀರ್ಪು ನೀಡಿತ್ತು. ಹೀಗಾಗಿ ಯೋಜನೆ ಅನುಷ್ಠಾನಕ್ಕೆ ಅನುಮತಿ ದೊರೆತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.