ಬಿಬಿಎಂಪಿ ಬಜೆಟ್ 2019: ಮಹಿಳೆಯರು, ಜನಸಾಮಾನ್ಯರಿಗೆ ಸಿಕ್ಕಿದ್ದೇನು?
ಬೆಂಗಳೂರು, ಫೆಬ್ರವರಿ 18: ಮಹಿಳೆಯೇ ಬಿಬಿಎಂಪಿಯ ಮೇಯರ್ ಆಗಿರುವ ಈ ಸಾಲಿನ ಬಜೆಟ್ನಲ್ಲಿ ಮಹಿಳೆಯರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಾಕಷ್ಟು ಯೋಜನೆಗಳ ಘೋಷಣೆಯಾಗಿದೆ.
ಅಷ್ಟೇ ಅಲ್ಲದೆ ಆರ್ಥಿಕ ಸ್ಥಾಪಿ ಸಮಿತಿಯ ಅಧ್ಯಕ್ಷರು ಕೂಡ ಮಹಿಳೆಯೇ ಆಗಿದ್ದು ಇವರು ಮಾಜಿ ಮೇಯರ್ ಕೂಡ ಆಗಿದ್ದಾರೆ, ಬಜೆಟ್ನನ್ನು ಈ ಬಾರಿ ಹೇಮಲತಾ ಗೋಪಾಲಯ್ಯ ಅವರೇ ಮಂಡಿಸಿದ್ದಾರೆ.
ಮಹಿಳಾ ಸ್ವಾವಲಂಬನೆಗೆ ಸ್ವಂತ ಉದ್ಯೋಗ, ಆರ್ಥಿಕ ಭದ್ರತೆಗೆ ಮಹಾಲಕ್ಷ್ಮಿ ಯೋಜನೆ, ಕತ್ತಲಿನಿಂದ ಬೆಳಕಿನೆಡೆಗೆ ರೋಶಿನಿ ಯೋಜನೆ, ಸ್ವಯಂ ಉದ್ಯೋಗ ಹೊಂದಲು ಮಹಿಳೆಯರಿಗೆ ಸಂಚಾರಿ ಕ್ಯಾಂಟಿನ್ ವಾಹನಗಳ ಅನ್ನಪೂರ್ಣೇಶ್ವರಿ ಯೋಜನೆ ಸೇರಿದಂತೆ ಮಹಿಳಾ ಕಲ್ಯಾಣಕ್ಕೆ ಒತ್ತು ನೀಡುವ ಹಲವು ಮಹತ್ವದ ಯೋಜನೆಗಳನ್ನು ಇಂದು ಬಿಬಿಎಂಪಿ ಮೈತ್ರಿ ಆಡಳಿತದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮೊದಲ ಮಹಿಳಾ ಅಧ್ಯಕ್ಷರಾದ ಹೇಮಲತಾ ಗೋಪಾಲಯ್ಯ ಅವರು ಮಹಿಳೆಯರ ಮನಗೆಲ್ಲುವ ಪಿಂಕ್ ಬಜೆಟ್ ಮಂಡಿಸಿದರು.

ಬಜೆಟ್ ನ ಹೈಲೈಟ್ಸ್ :
- ಬಿಬಿಎಂಪಿ ರಚನೆಯಾದ ಮೇಲೆ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ.
- ಬಿಬಿಎಂಪಿ ಶಾಲೆ ಕಟ್ಟಡಗಳ ದುರಸ್ತಿಗೆ ಹೆಚ್ಚಿನ ಅನುದಾನ.
- ಸಿದ್ದಗಂಗಾ ಶಿವಕುಮಾರ್ ಸ್ವಾಮೀಜಿ ಕಂಚಿನ ಪ್ರತಿಮೆಗೆ 5 ಕೋಟಿ ಅನುದಾನ.
- ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ತರಲು ಚಿಂತನೆ
- ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಗೆ ಸಿದ್ದಗಂಗಾ ಶ್ರೀಗಳ ಹೆಸರಲ್ಲಿ ಪ್ರಶಸ್ತಿ
- ಪ್ರತಿ ವಾರ್ಡ್ಗಳಲ್ಲಿ 20 ಮಹಿಳೆಯರಿಗೆ ಮೊಪೆಡ್( ಎಲೆಕ್ಟ್ರಿಕ್ ಸ್ಕೂಟಿ) ನೀಡಲು ಚಿಂತನೆ

ಮಹಿಳೆಯರ ಆರ್ಥಿಕ ಸದೃಡತೆಗೆ ಕಿರು ಸಾಲ ಭಾಗ್ಯ
- ತ್ಯಾಜ್ಯ ವಿಲೇವಾರಿ ಮಾಡುವ ಕಲ್ಲು ಕ್ವಾರಿಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ.
- ಪಿಂಕ್ ಬೇಬಿ ಯೋಜನೆ ವರ್ಷವಿಡಿ ಜಾರಿ.
- ಬಿಬಿಎಂಪಿ ಆಸ್ಪತ್ರೆಗಳಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟರ್ ಅಂಬುಲೆನ್ಸ್ ಖರೀದಿ
- ಹೊಸದಾಗಿ ಪಾಲಿಕೆಗೆ ಸೇರಿದ 110 ಹಳ್ಳಿಗಳ ಅಭಿವೃದ್ಧಿಗೆ ಒತ್ತು.
- ವಾರ್ಡ್ ಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ ಪಡಿಸಲು ಸಿದ್ದತೆ.
-ಉತ್ತಮ ಆಡಳಿತ ವ್ಯವಸ್ಥೆಗೆ ಏಕ ಕಡತ ನಿರ್ವಹಣೆ ಪದ್ಧತಿ ಜಾರಿ
-ಪಾಲಿಕೆ ಎರಡು ಆಸ್ತಿಗಳನ್ನು ಅಡಮಾನಗೊಳಿಸಲು ಕ್ರಮ
- 2019-20 ಸಾಲಿನಲ್ಲಿ ಆಸ್ತಿ ತೆರಿಗೆ 3500 ಕೋಟಿ ರುಪಾಯಿ ನಿರೀಕ್ಷೆ
- ಟೋಟಲ್ ಸ್ಟೇಷನ್ ಸರ್ವೇ ನಡೆಸಿ ಬೃಹತ್ ಕಟ್ಟಡಗಳಿಂದ 400 ಕೋಟಿ ರೂ. ನಿರೀಕ್ಷೆ
-ಹೊಸ ವಲಯಗಳ ಭೂ ಪರಿವರ್ತನೆಯಾದ ಆಸ್ತಿಗಳಿಂದ 400 ಕೋಟಿ ರೂ. ನಿರೀಕ್ಷೆ
- ಓಎಫ್ ಸಿಯಿಂದ 175 ಕೋಟಿ, ಮೊಬೈಲ್ ಟವರ್ ಗಳಿಂದ 50 ಕೋಟಿ, ನಗರ ಯೋಜನೆ ವಿಭಾಗದಿಂದ 841 ಕೋಟಿ ರೂ

ಸ್ವಯಂ ಉದ್ಯೋಗ
ಸ್ವಯಂ ಉದ್ಯೋಗ ಹೊಂದಲು ಸಂಚಾರಿ ಕ್ಯಾಂಟಿನ್ ಸೌಲಭ್ಯವನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ನಾಲ್ಕು ವಾಹನದಂತೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ನೀಡಲು 5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಕಾಲೇಜು ವಿದ್ಯಾರ್ಥಿಗಳಿಗೂ ಬಿಸಿಯೂಟ
ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಒಂದು ಕೋಟಿ ರೂ. ಮೀಸಲಿಡಲಾಗಿದೆ. ಪಾಲಿಕೆಯ ಶಾಲಾ-ಕಾಲೇಜುಗಳ ದುರಸ್ತಿ, ಮೂಲಭೂತ ಸೌಕರ್ಯಕ್ಕಾಗಿ 25 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.

ಬಿಬಿಎಂಪಿ ಬೆಳಕು
ಬಿಬಿಎಂಪಿಯ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳೆಲ್ಲವನ್ನೂ ಜನರಿಗೆ ತಲುಪಿಸಲು ಬೆಳಕು ಎಂಬ ಮಾಸಿಕ ಪತ್ರಿಕೆ ಪ್ರಾರಂಭಿಸಲು ನಿರ್ಧಾರ. ನಗರದ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ವಿವಿಧ ನಿರ್ವಹಣಾ ಘಟಕಗಳ ಅಭಿವೃದ್ಧಿಗೆ 110 ಕೋಟಿ ರೂ.ಗಳ ಅನುದಾನ, ಆಸ್ತಿ ಮತ್ತು ಸ್ವತ್ತುಗಳ ನಿರ್ವಹಣೆ, ಭೂ ಪರಿಹಾರ ನೀಡುವ ಸಲುವಾಗಿ 50 ಕೋಟಿ, ಪಾಲಿಕೆ ಒಡೆತನದ ಆಸ್ತಿಗಳ ಲೆಕ್ಕ ಪರಿಶೋಧನೆ ಮತ್ತು ಮೌಲ್ಯಮಾಪನಕ್ಕೆ 5 ಕೋಟಿ ಮೀಸಲಿರಿಸಲಾಗಿದೆ ಎಂದು ಹೇಳಿದರು.ಬಿಬಿಎಂಪಿ ಪಾರ್ಕ್ಗಳ ನಿರ್ವಹಣೆಗೆ 34 ಕೋಟಿ, ಹಸಿರು ಬೆಂಗಳೂರು ನಿರ್ಮಾಣಕ್ಕೆ 10 ಲಕ್ಷ ಗಿಡಗಳನ್ನು ನೆಡಲು 3 ಕೋಟಿ, ಕೆರೆಗಳ ನಿರ್ವಹಣೆಗೆ 25 ಕೋಟಿ ಅನುದಾನ ನೀಡಲಾಗಿದೆ.












Click it and Unblock the Notifications