ದಕ್ಕದ ಅಧಿಕಾರ: ಹೋರಾಟದ ಹಾದಿ ಹಿಡಿದ ಬಿಜೆಪಿ
ಬೆಂಗಳೂರು, ಸೆಪ್ಟೆಂಬರ್.04: ಬಿಬಿಎಂಪಿ ಮೇಯರ್ ಗಾದಿ ತಮಗೆ ಒಲಿಯುವುದಿಲ್ಲ ಎಂದು ಬಹುತೇಕ ಖಚಿತಮಾಡಿಕೊಂಡಿರುವ ಬಿಜೆಪಿ ಇದೀಗ ಹೋರಾಟದ ಹಾದಿ ಹಿಡಿದಿದೆ. ಸತತ ಐದು ದಿನಗಳ ಕಾಲ ಪ್ರತಿಭಟನೆ ನಡೆಸಲು ಮುಂದಾಗಿದೆ.
ಈ ಬಗ್ಗೆ ಬಿಜೆಪಿ ಆರ್ ಅಶೋಕ್ ನೇತೃತ್ವದಲ್ಲಿ ಸಮಾಲೋಚನಾ ಸಭೆಯನ್ನು ನಡೆಸಿದ್ದು, ಸೆಪ್ಟೆಂಬರ್ 4 ರಂದು ಬೆಂಗಳೂರು ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಸಲಿದೆ.[ಬಿಬಿಎಂಪಿ ಮೇಯರ್ ಆಯ್ಕೆಗೆ ಸೆ.11ಕ್ಕೆ ಚುನಾವಣೆ]
ಕಾಂಗ್ರೆಸ್ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಯತ್ನ ಮಾಡುತ್ತಿದೆ. ಜನಾದೇಶದ ವಿರುದ್ಧ ಹೋಗುತ್ತಿದೆ. ಪುರಭವನ, ರಾಜಭವನದ ಎದುರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ನ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಖಂಡಿಸಲಾಗುವುದು. ಅಲ್ಲದೇ ಈ ಬಗ್ಗೆ ರಾಜ್ಯಪಾಲರಿಗೂ ದೂರು ಸಲ್ಲಿಕೆ ಮಾಡಲಾಗುವುದು ಎಂದು ಆರ್ ಅಶೀಕ್ ಹೇಳಿದ್ದಾರೆ.
ಆದರೆ ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಮುಂದಾಗಿರುವ ಜೆಡಿಎಸ್ ಬಗ್ಗೆ ಚಕಾರ ಎತ್ತಿಲ್ಲ. ಬಿಬಿಎಂಪಿಯಲ್ಲಿ 100 ಸ್ಥಾನ ಗಳಿಸಿದ್ದರೂ ಅಧಿಕಾರ ಕೈ ತಪ್ಪುತ್ತಿರುವುದು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಗುರುವಾರ ರಾತ್ರಿ ನಡೆದ ಬಿಜೆಪಿ ಸಮಾಲೋಚನಾ ಸಭೆಗೆ ಬೆಂಗಳೂರಿಗೆ ಸಂಬಂಧಿಸಿದ ಕೆಲ ಶಾಸಕರು ಗೈರಾಗಿದ್ದು ಆರ್. ಅಶೋಕ್ ಪರ ತಮ್ಮ ಅಸಮಾಧಾನ ಹೊರಹಾಕಿದರು.[ಬಿಬಿಎಂಪಿಯ ಮೇಯರ್ ಹುದ್ದೆ ಮ್ಯಾಜಿಕ್ ನಂಬರ್ ಹಿಂದೆ-ಮುಂದೆ]
ಬಿಬಿಎಂಪಿ ಬೆಳವಣಿಗೆ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಬೇಕು ಎಂದು ಕೇಳಿಕೊಳ್ಳಲಾಗುವುದು. ಇಡೀ ಬೆಂಗಳೂರು ನಾಗರಿಕರಿಗೆ ಕಾಂಗ್ರೆಸ್ ನ ಕುತಂತ್ರ ರಾಜಕಾರಣದ ಬಗ್ಗೆ ಹೇಳಲಾಗುವುದು ಎಂದು ಅಶೋಕ್ ಹೇಳಿದ್ದಾರೆ. ಅಲ್ಲದೇ ಬಿಜೆಪಿ ಅಭ್ಯರ್ಥಿಯೇ ಮೇಯರ್ ಆಗಲಿದ್ದಾರೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.