ಬಿಬಿಎಂಪಿ: ನಲಪಾಡ್ ಅಕಾಡೆಮಿ ಸೇರಿ 18 ಕಡೆ ಒತ್ತುವರಿ ತೆರವು
ಬೆಂಗಳೂರು, ಸೆಪ್ಟಂಬರ್ 13: ಬೃಹತ್ ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆ ಮಂಗಳವಾರವು ಮುಂದುವರಿಸಿದೆ. ಆದರೆ ಕೆಲವು ಪ್ರಭಾವಿಗಳ ಒತ್ತುವರಿ ಕಟ್ಟಡ ತೆರವುಗೊಳಿಸುವಲ್ಲಿ ಬಿಬಿಎಂಪಿ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಬಿಬಿಎಂಪಿ ನಗರದ ನಲಪಾಡ್ ಅಕಾಡೆಮಿ ಮಾಡಿದ್ದ ಒತ್ತುವರಿಯನ್ನು ತೆರವು ಕಾರ್ಯ ಕೈಗೊಂಡಿದೆ.
ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಹಲವು ಆವಾಂತರಗಳಿಗೆ ಕಾರಣವಾಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬಿಬಿಎಂಪಿ ಕೇವಲ ಕೆಳ ವರ್ಗದವರನ್ನೆ ಗುರಿಯಾಗಿಸಿದೆ. ಪ್ರಭಾವಿಗಳ ಒತ್ತುವರಿ ತೆರವಿಗೆ ಹಿಂದೇಟು ಹಾಕುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಮಧ್ಯೆ ನಲಪಾಡ್ ಅಕಾಡೆಮಿ, ಬಾಗಮನೆ ಟೆಕ್ ಪಾರ್ಕ್ಗಳಿಂದಲೂ ಒತ್ತುವರಿ ಆಗಿದೆ ಎನ್ನಲಾಗಿತ್ತು. ಇದರಲ್ಲಿ ಮಹದೇವಪುರ ವಲಯ ಚೆಲ್ಲಘಟ್ಟದ ಸರ್ವೇ ನಂಬರ್ 70/14 ರಲ್ಲಿರುವ ನಲಪಾಡ್ ಅಕಾಡೆಮಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ಬೆಂಗಳೂರು ಪ್ರವಾಹ: ಸಾವಿರ ಕೆರೆಗಳ ನಗರದಲ್ಲಿ 126 ಕೆರೆಗಳು ಭರ್ತಿ
ನಲಪಾಡ್ ಅಕಾಡೆಮಿ ವತಿಯಿಂದ 2.5 ಮೀಟರ್ ಅಗಲ ಹಾಗೂ 150.5 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಆ ರಾಜಕಾಲುವೆಯ ಮೇಲೆ ಕಾಂಕ್ರಿಟ್ ಅಳವಡಿಸಿ ಎತ್ತರವಾಗಿ ಕಾಂಪೌಂಡ್ ಗೋಡೆ ಹಾಗೂ ಕಾಂಪೌಂಡ್ ಗೋಡೆಯ ಮೇಲೆ ಫೆನ್ಸಿಂಗ್ ಅಳವಡಿಸಲಾಗಿದೆ.
ಇದನ್ನು ಗಮನಿಸಿದ ಬಿಬಿಎಂಪಿ ಅಧಿಕಾರಿಗಳು ನಲಪಾಡ್ ಅಕಾಡೆಮಿಯ ಮಾಡಿಕೊಂಡ ಒಟ್ಟು ಒತ್ತುವರಿ ಪೈಕಿ ಒಟ್ಟು ಸುಮಾರು 50 ಮೀಟರ್ ನಷ್ಟು ತೆರವು ಮಾಡಿದ್ದಾರೆ. ಬಾಕಿ ಒತ್ತುವರಿಯ ತೆರವು ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
18 ಕಡೆ ಒತ್ತುವರಿ ತೆರವು ಮಾಡಿದ ಬಿಬಿಎಂಪಿ
ಅದೇ ರೀತಿ ಬಿಬಿಎಂಪಿಯು ಮಹದೇವಪುರ ವಲಯ ಹಾಗೂ ಯಲಹಂಕ ವಲಯ ಸೇರಿದಂತೆ ಒಟ್ಟು 18 ಒತ್ತುವರಿಗಳನ್ನು ತೆರವುಗೊಳಿಸಿರುವುದಾಗಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚೆಲ್ಲಘಟ್ಟ ಹಾಗೂ ಯಲಹಂಕ ವಲಯ ಸ್ಯಾಟಲೈಟ್ ಟೌನ್ ನಲ್ಲಿ ರಾಜಕಾಲುವೆ ಒತ್ತುವರಿಯನ್ನು ಪಾಲಿಕೆಯ ಇಂಜಿನಿಯರ್ಗಳು, ಕಂದಾಯ ಅಧಿಕಾರಿಗಳು, ಮಾರ್ಷಲ್ಗಳು, ಪೊಲೀಸ್ ಸಿಬ್ಬಂದಿಯ ಭದ್ರತೆಯೊಂದಿಗೆ 2 ಹಿಟಾಚಿ ಹಾಗೂ 8 ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿರುತ್ತದೆ.
'ಹಿಂದಿ ದಿವಸ್' ವಿರುದ್ಧ ಬೆಂಗಳೂರಿನಲ್ಲಿ ಕರವೇ ಪ್ರತಿಭಟನೆ
ಖಾಲಿ ಜಾಗ ತೆರವು ಮಾಡಿ ವಶಕ್ಕೆ
ಮಹಾದೇವಪುರ ವಲಯದ ಶಾಂತಿನಿಕೇತನ ಲೇಔಟ್ನಲ್ಲಿ ಏಳು ಕಟ್ಟಡ ಹಾಗೂ ನಾಲ್ಕು ಕಾಂಪೌಂಡ್ ಗೋಡೆಗಳನ್ನು ತೆರವುಗೊಳಿಸಲಾಗಿರುತ್ತದೆ. ಪಾಪಯ್ಯ ರೆಡ್ಡಿ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಅಪಾರ್ಟ್ಮೆಂಟ್ ಗೋಡೆ ಹಾಗೂ ರಾಜಕಾಲುವೆಯ ಖಾಲಿ ಜಾಗದ ಮೇಲೆ ನಿರ್ಮಿಸಿಕೊಂಡಿದ್ದ ನಾಲ್ಕು ಶೇಡ್ ಗಳನ್ನು ತೆರವುಗೊಳಿಸಲಾಗಿದೆ. ಬಸವನಪುರದಲ್ಲಿ ಒಂದು ಕಾಂಪೌಂಡ್ ಗೋಡೆ ಹಾಗೂ ಒಂದು ಖಾಲಿ ಜಾಗದ ಒತ್ತುವರಿ ತೆರವುಗೊಳಿಸಿ ಬಿಬಿಎಂಪಿ ತನ್ನ ವಶಕ್ಕೆ ಪಡೆದಿದೆ.
ಯಲಹಂಕ ವಲಯದ ಸ್ಯಾಟಲೈಟ್ ಟೌನ್ ವ್ಯಾಪ್ತಿಯಲ್ಲಿ ಎನ್.ಬಿ.ಎಸ್ ಇನ್ಸಿಟಿಟ್ಯೂಟ್ ವತಿಯಿಂದ 120 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಜೆಸಿಬಿಯಿಂದ ನೆಲಸಮ ಮಾಡಲಾಗಿದೆ.
ನಗರದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಭೂಮಾಪಕರ ಮೂಲಕ ಸಮೀಕ್ಷೆ ಮಾಡಿ ಮಾರ್ಕಿಂಗ್ ಮಾಡಿಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯು ಒತ್ತುವರಿ ಆಗಿರುವ ಪ್ರದೇಶಗಳ ತೆರವಿನವರೆಗೆ ಮುಂದುವರಿಸಲು ಬಿಬಿಎಂಪಿ ನಿರ್ಧರಿಸಿದೆ.