ಸಾಮಾಜಿಕ ಅಂತರ ಕಾಪಾಡಲು ಬನ್ನೇರುಘಟ್ಟದಲ್ಲಿ ಹೊಸ ತಂತ್ರ
ಬೆಂಗಳೂರು, ಏಪ್ರಿಲ್ 29 : ಕೊರೊನಾ ದೇಶಕ್ಕೆ ಕಾಲಿಟ್ಟ ಮೇಲೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಲಾಗುತ್ತದೆ. ಜನರಲ್ಲಿ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ.
Recommended Video
ಲಾಕ್ ಡೌನ್ ಮುಗಿದ ಬಳಿಕವೂ ಕೆಲವು ತಿಂಗಳ ಕಾಲ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಆದರೆ, ಜನರು ಇದನ್ನು ಎಷ್ಟರ ಮಟ್ಟಿಗೆ ಪಾಲನೆ ಮಾಡುತ್ತಾರೆ? ಎಂಬುದನ್ನು ಕಾದು ನೋಡಬೇಕು.
ಬನ್ನೇರುಘಟ್ಟ ಮೃಗಾಲಯ ಲಾಕ್ ಡೌನ್ ಪರಿಣಾಮ ಈಗ ಬಂದ್ ಆಗಿದೆ. ಮೃಗಾಲಯ ಪ್ರವಾಸಿಗರಿಗೆ ತೆರೆದ ಬಳಿಕ ಸಾಮಾಜಿಕ ಅಂತರ ಕಾಪಾಡಲು ಹೊಸ ತಂತ್ರವನ್ನು ಅನುಸರಿಸಲಾಗುತ್ತಿದೆ. ಇದಕ್ಕಾಗಿ ಬಣ್ಣ-ಬಣ್ಣದ ಛತ್ರಿಗಳು ಬಂದಿವೆ.

ಲಾಕ್ ಡೌನ್ ಮುಗಿದ ಬಳಿಕ ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಛತ್ರಿ ನೀಡಲಾಗುತ್ತದೆ. ಒಂದು ಕುಟುಂಬಕ್ಕೆ ವಿಶಿಷ್ಟ ಅಂಕಿಯ ಛತ್ರಿಯನ್ನು ನೀಡಲಾಗುತ್ತದೆ. ಜನರು ಛತ್ರಿಯನ್ನು ಬಿಚ್ಚಿ ಹಿಡಿದು ನಡೆಯುವುದರಿಂದ ಸಾಮಾಜಿಕ ಅಂತರವೂ ಪಾಲನೆಯಾಗಲಿದೆ.
ಲಾಕ್ ಡೌನ್ಗೆ ಮುನ್ನವೂ ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರವಾಸಿಗರಿಗೆ ಛತ್ರಿಗಳನ್ನು ನೀಡಲಾಗುತ್ತಿತ್ತು. ಈಗ ಕೊರೊನಾ ಬಂದ ಮೇಲೆ ಛತ್ರಿಯನ್ನು ಸಾಮಾಜಿಕ ಅಂತ ಕಾಯ್ದುಕೊಳ್ಳಲು ಬಳಕೆ ಮಾಡಲು ತೀರ್ಮಾನಿಸಲಾಗಿದೆ.

ಬನ್ನೇರುಘಟ್ಟ ಮೃಗಾಲಯದ ಸಿಬ್ಬಂದಿಗಳು ಛತ್ರಿ ಹಿಡಿದು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡೇ ಈಗ ಪ್ರಾಣಿಗಳ ಪಾಲನೆ ಮಾಡುತ್ತಿದ್ದಾರೆ. ಲಾಕ್ ಡೌನ್ ಮುಗಿದ ಬಳಿಕ ಬರುವ ಪ್ರವಾಸಿಗರಿಗೆ ಛತ್ರಿ ನೀಡಲಾಗುತ್ತದೆ ಎಂದು ಮೃಗಾಲಯದ ಆಡಳಿತ ಮಂಡಳಿ ಹೇಳಿದೆ.
ಕೇರಳದ ಹಲವು ಜಿಲ್ಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಛತ್ರಿ ಕಡ್ಡಾಯಗೊಳಿಸಲಾಗಿದೆ. ಜನರು ಅಂಗಡಿಗಳಿಗೆ ಬರುವಾಗ ಕೈಯಲ್ಲಿ ಛತ್ರಿ ಹಿಡಿದು ಬರುತ್ತಿದ್ದಾರೆ. ಇಂತಹ ವ್ಯವಸ್ಥೆಯನ್ನು ಬನ್ನೇರುಘಟ್ಟದಲ್ಲಿಯೂ ಜಾರಿಗೊಳಿಸಲಾಗುತ್ತಿದೆ.












Click it and Unblock the Notifications