ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: 7 ಆರೋಪಿಗಳಿಗೆ ಜೀವಾವಧಿ
ಬೆಂಗಳೂರು, ಮೇ 20: ಬಾಂಗ್ಲಾದೇಶದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ನ್ಯಾಯಾಲಯ ಆರೋಪಿಗಳಿಗೆ ತೀರ್ಪು ನೀಡಿದೆ. 2021 ಮೇ ತಿಂಗಳಲ್ಲಿ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿತ್ತು. ಪ್ರಕರಣ ಸಂಬಂಧ 12 ಆರೋಪಿಗಳನ್ನು ಬಂಧಿಸಲಾಗಿತ್ತು. ಬಾಣಸವಾಡಿ ಉಪವಿಭಾಗದ ಎಸಿಪಿ ಸಕ್ರಿ ನೇತೃತ್ವದಲ್ಲಿ ತನಿಖೆಯನ್ನು ನಡೆಸಲಾಗಿತ್ತು. 1019 ಪುಟಗಳ ಚಾರ್ಜ್ ಶೀಟ್ ಅನ್ನು ಸಹ ಸಲ್ಲಿಕೆ ಮಾಡಲಾಗಿತ್ತು.
ಬಾಂಗ್ಲಾದೇಶದ ಯುವತಿಯ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿದ್ದ ಅಮಾನುಷವಾಗಿ ವರ್ತಿಸಿದ್ದ ದುರಳರಿಗೆ ಪ್ರಕರಣದಲ್ಲಿ ಸುಧೀರ್ಘವಾದ ವಿಚಾರಣೆ ವಾದ ಪ್ರತಿವಾದವನ್ನು ಆಲಿಸಿದ್ದ ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಸಿಸಿಹೆಚ್ 54 ರ ನ್ಯಾಯಾಧೀಶ ಸುಬ್ರಮಣ್ಯರಿಂದ ತೀರ್ಪು ತೀರ್ಪು ಪ್ರಕಟಿಸಿದ್ದು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ.
ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ
2021. ಮೇ 18. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ ಯುವತಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದರು. ಅಷ್ಟೇ ಅಲ್ಲದೇ ಆಕೆಯ ಮೇಲೆ ನಡೆಸಿದ ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗ್ತಿದ್ದಾಗೆ ಎಚ್ಚೆತ್ತ ಬಾಂಗ್ಲಾ ಪೊಲೀಸರು, ಬೆಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು, ಕಾರ್ಯಾಚರಣೆ ನಡೆಸಿ, ಕೆಲವೇ ದಿನಗಳಲ್ಲಿ ಬರೋಬ್ಬರಿ 10 ಮಂದಿ ಆರೋಪಿಗಳನ್ನ ಬಂಧಿಸಿ, ಕೈಗೆ ಬೇಡಿಯನ್ನು ತೊಡಿಸಿದ್ದರು.
ಮಾನವ ಕಳ್ಳ ಸಾಗಾಣಿಕೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು
ಕೇವಲ ಅತ್ಯಾಚಾರ ಪ್ರಕರಣವಲ್ಲದೇ ಮಾನವ ಕಳ್ಳ ಸಾಗಾಣಿಕೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ಪ್ರಮುಖ ಸಾಕ್ಷಿಗಳನ್ನ ಸಂಗ್ರಹಿಸಿ, 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಪ್ರಕರಣದಲ್ಲಿ ಭಾಗಿಯಾಗಿ ಕ್ರೌರ್ಯ ಮೆರೆದಿದ್ದ 7 ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಯಾವ ಆರೋಪಿಗೆ ಯಾವ ಶಿಕ್ಷೆ
A1- ಸೋಭುಜ್ ಶೇಖ್, ಜೀವಿತಾವಧಿ ಶಿಕ್ಷೆ
A2 - ರಿದಯ್ ಬಾಬು - ಜೀವಿತಾವಧಿ ಶಿಕ್ಷೆ
A3- ರಫ್ ಸನ್ ಮಂಡಲ್ - ಜೀವಿತಾವಧಿ ಶಿಕ್ಷೆ
A4 - ರಕಿಬುಲ್ ಇಸ್ಲಾಂ ಸಾಗರ್ - ಜೀವಿತಾವಧಿ ಶಿಕ್ಷೆ
A5 - ಮಹಮ್ಮದ್ ಬಾಬು - ಜೀವಿತಾವಧಿ ಶಿಕ್ಷೆ
A7 - ದಲಿಮ್ - ಜೀವಿತಾವಧಿ ಶಿಕ್ಷೆ
A8 - ಅಜೀಂ - ಜೀವಿತಾವಧಿ ಶಿಕ್ಷೆ
ಇವರನ್ನು ಹೊರತು ಪಡಿಸಿ ಆರೋಪಿಗಳ ಪೈಕಿ ಎ6 ಆರೋಪಿಯಾದ ತಾನಿಯಾ ಗೆ 20 ವರ್ಷ ಜೈಲು ಹಾಗೂ ಎ9 ಆರೋಪಿಯಾದ ಜಮಾಲ್ ಗೆ ಫಾರೀನರ್ಸ್ ಆ್ಯಕ್ಟ್ ಅಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಅಖಿಲ್ ಎಂಬಾತ ಪ್ರಕರಣದಿಂದ ಖುಲಾಸೆಯಾಗಿದ್ದು, ನುಸ್ರತ್ ಹಾಗೂ ಕಾಜಲ್ ಎಂಬುವರಿಗೆ 9 ತಿಂಗಳ ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗಿದೆ.
ಅಂದಿನ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹೇಳಿದ್ದೇನು..?
ಬಾಂಗ್ಲಾದೇಶ ಯುವತಿ ಮೇಲಿನ ಅತ್ಯಾಚರ ಪ್ರಕರಣದಲ್ಲಿ ""ಆರೋಪಿತಸ್ಥರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ, ಒರ್ವ ಮಹಿಳಾ ಆರೋಪಿತೆಗೆ ಇಪ್ಪತ್ತು ವರ್ಷ ಸಜೆ, ಒಂಭತ್ತು ಆರೋಪಿಗಳ ಪೈಕಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ವರ್ಷ ಸೋಷಿಯಲ್ ಮೀಡಿಯಾದ ವೀಡಿಯೋ ಮೂಲಕ ನಮ್ಮ ಗಮನಕ್ಕೆ ಬರತ್ತೆ, ಮೊದಲು ಬಾಂಗ್ಲಾ ಹಾಗೂ ನಂತರ ಭಾರತದ ಪ್ರಮುಖ ನಗರಗಳಲ್ಲಿ ವೈರಲ್ ಆಗತ್ತೆ, ನಂತರ ಕಮಲ್ ಪಂತ್ ,ಮುರುಗನ್, ಸಂದೀಪ್ ಪಾಟೀಲ್ ರ ಮಾರ್ಗದರ್ಶನಂತೆ ವಿಶೇಷ ಟೀಂ ರಚನೆಯಾಗಗಿತ್ತು.ಕೂಡಲೇ ಪ್ರಕರಣದಲ್ಲಿ ಕೆಲ ಅನುಮಾನಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆಯುತ್ತೇವೆ, ಮೊದಲಿಗೆ ಯಾವುದೇ ಕ್ಲೂ ನಮಗೆ ಲಭ್ಯವಾಗಿರಲ್ಲ, ನಂತರ ಆರೋಪಿಗಳನ್ನ ಪತ್ತೆಹಚ್ಚಿದಾಗ ಅವರು ನಿಜ ಒಪ್ಪಿಕೊಳ್ಳುತ್ತಾರೆ. ಆರೋಪಿಗಳು ಸಿಕ್ಕರೂ ಸಂತ್ರಸ್ತ್ಗೆ ಪತ್ತೆಯಾಗುವುದಿಲ್ಲ, ನಂತರ ಕೇರಳದ ಕ್ಯಾಲಿಕಟ್ ನಲ್ಲಿ ಸಂತ್ರಸ್ಥೆಯನ್ನ ಪತ್ತೆ ಹಚ್ಚಿ ಕರೆತರಲಾಗತ್ತದೆ.
ಒಟ್ಟು 12 ಮಂದಿಯನ್ನ ಬಂಧಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸೆನ್ಸಿಟಿವ್ ಕೇಸ್ ಆಗಿದೆ ಪ್ರಕರಣದಲ್ಲಿ ಸಂತ್ರಸ್ಥೆ ಮತ್ತು ಆರೋಪಿಗಳು ಬಾಂಗ್ಲಾ ಮೂಲದವರು ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದವರು. ಬಾಣಸವಾಡಿ ಎಸಿಪಿ ನಿಂಗಣ್ಣ ಸಕ್ರಿ, ರಾಮಮೂರ್ತಿನಗರ ಇನ್ಸ್ಪೆಕ್ಟರ್ ಮೆಲ್ವಿನ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಡಿ.ಎನ್.ಎ ಫ್ರಿಂಗರ್ ಪ್ರಿಂಟ್ ಪೊಟೋ ಆಡಿಯೋ ಡಿಟೇಲ್ಸ್ ಎಲ್ಲ ಡಿಜಿಟಲ್ ಎವಿಡೆನ್ಸ್ ಕಲೆಕ್ಟ್ ಮಾಡಲಾಗಿತ್ತು,50 ಕ್ಕೂ ಹೆಚ್ಚು ಮೆಟಿರಿಯಲ್ ಆಬ್ಜೆಕ್ಟ್ಸ್ ಗಳನ್ನ ಸೀಜ್ ಮಾಡಲಾಗಿತ್ತು. ಆರೋಪಿಗಳಿಗೆ ಶಿಕ್ಷೆಯಾಗಿರೋದು ತನಿಖೆ ಸಾರ್ಥಕತೆಯನ್ನು ಹೆಚ್ಚಿಸಿದೆ'' ಎಂದು ತಿಳಿಸಿದ್ದಾರೆ.
ಯುವತಿಯ ಅಸಹಾಯಕಥೆಯನ್ನ ದುರ್ಬಳಕೆ ಮಾಡಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕ್ರೌರ್ಯ ಪ್ರದರ್ಶಿಸಿದ್ದ ಅತ್ಯಾಚಾರಿಗಳ ವಿರುದ್ಧ ಪೊಲೀಸರು ಕೋರ್ಟ್ ಗೆ ಸಲ್ಲಿಸಿದ್ದ ಮಹತ್ವದ ಸಾಕ್ಷ್ಯಾಧಾರಗಳು ಅತ್ಯಾಚಾರಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದು, ಆರೋಪಿಗಳಿಗೆ ಜೈಲೇ ಗತಿಯಾಗಿದೆ. ಸರ್ಕಾರಿ ವಕೀಲರಾದ ವೀರಣ್ಣ ತಿಗಡಿಯವರು ಕೋರ್ಟ್ ನಲ್ಲಿ ಸಮರ್ಥವಾಗಿ ವಾದವನ್ನು ಮಾಡಿದ್ದು ಆರೋಪಿಗಳ ಶಿಕ್ಷೆಗೆ ಕಾರಣವಾಗಿದೆ.
Recommended Video