ಕಾಲೇಜುಗಳ ವಿರುದ್ಧ ಬೆಂಗಳೂರು ವಿವಿ ಕುಲಪತಿ ಗರಂ
ಬೆಂಗಳೂರು, ಡಿ. 13: ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಪ್ರಾಧ್ಯಾಪಕರನ್ನು ಕಳುಹಿಸಲು ಕಾಲೇಜುಗಳು ಆಸಕ್ತಿ ತೋರುತ್ತಿಲ್ಲ. ಇದರಿಂದ ಬೆಂಗಳೂರು ವಿಶ್ವವಿದ್ಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕಾಲೇಜುಗಳ ಈ ಧೋರಣೆಯನ್ನು ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಿದೆ.
ಮೌಲ್ಯಮಾಪನಕ್ಕೆ ಅಧ್ಯಾಪಕರನ್ನು ಕಳುಹಿಸದ ಕಾಲೇಜುಗಳಿಗೆ ಬೆಂಗಳೂರು ವಿವಿಯ ಸಂಯೋಜನಾ ನವೀಕರಣಕ್ಕೆ ಸ್ಥಳೀಯ ವಿಚಾರಣಾ ಸಮಿತಿ ಕಳುಹಿಸುವುದಿಲ್ಲ. ಈ ಕಾಲೇಜುಗಳ ಫಲಿತಾಂಶವನ್ನೂ ತಡೆಹಿಡಿಯಲಾಗುವುದೆಂದು ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಎಚ್ಚರಿಕೆ ನೀಡಿದ್ದಾರೆ.
ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸಿಂಡಿಕೇಟ್ ಸಭೆ ಬಳಿಕ ಪತ್ರಕರ್ತರೊಂದಿಗೆ ಈ ವಿಷಯ ತಿಳಿಸಿದರು.
1,500 ಮೌಲ್ಯಮಾಪಕರ ಕೊರತೆ: ಮೌಲ್ಯಮಾಪನಕ್ಕೆ ಪ್ರತಿ ಬಾರಿ ಸುಮಾರು 5000 ಮೌಲ್ಯಮೌಪಕರು ಬೇಕು. ಈ ಬಾರಿ ಕೇವಲ 3,500 ಜನ ಮಾತ್ರ ಮೌಲ್ಯಮಾಪನ ನಡೆಸುತ್ತಿದ್ದಾರೆ. ಈ ಕೊರತೆಯಿಂದ ಫಲಿತಾಂಶ ಬರುವುದು ತಡವಾಗುತ್ತಿದೆ. ಆದ್ದರಿಂದ ಮೌಲ್ಯಮಾಪನ ಕಳುಹಿಸದ ಕಾಲೇಜುಗಳ ಸಂಯೋಜನೆ ಹಾಗೂ ಸಂಜೋಯನೆ ನವೀಕರಣ ನೀಡಲು ಎಲ್ಐಸಿ ಸಮಿತಿ ಕಳುಹಿಸುವುದಿಲ್ಲ ಎಂದು ಪ್ರೊ. ತಿಮ್ಮೇಗೌಡ ಸ್ಪಷ್ಟಪಡಿಸಿದ್ದಾರೆ.
ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಬಿಎಂಟಿಸಿ ಡಿಪೋ ಸ್ಥಾಪನೆಗೆ 3 ಎಕರೆ, ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರಕ್ಕೆ 2 ಎಕರೆ ಹಾಗೂ ಎನ್ಸಿಸಿ ಭವನಕ್ಕೆ 2 ಎಕರೆ ಸ್ಥಳ ನೀಡಲಾಗುವುದು ಎಂದು ತಿಳಿಸಿದರು.