ಬೆಂಗಳೂರು ದಕ್ಷಿಣ: ನಂದನ್ ನಿಲೇಕಣಿ ವ್ಯಕ್ತಿಚಿತ್ರ
ಬೆಂಗಳೂರು, ಮಾ.26: ಇನ್ಫೋಸಿಸ್ ಸಹಸ್ಥಾಪಕ, ಆಧಾರ್ ಕಾರ್ಡ್ ರುವಾರಿ ನಂದನ್ ನಿಲೇಕಣಿ ಅವರು ಈಗ ಭಾರತೀಯ ಕನಸುಗಾರಿಕೆಗೆ ದಿಕ್ಸೂಚಿ ನೀಡಲು ಚುನಾವಣಾ ರಂಗಕ್ಕೆ ಇಳಿದಿದ್ದಾರೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿಲೇಕಣಿ ಎಂಬ ಪುಟ್ಟ ಊರಿನ ನಂದನ್ ಈಗ ಜನಪ್ರತಿನಿಧಿಯಾಗಿ ಹೊಸ ಕನಸನ್ನು ಬಿತ್ತುತ್ತಿದ್ದಾರೆ. ಬೆಂಗಳೂರಿನ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರ ಸ್ಥೂಲ ವ್ಯಕ್ತಿಚಿತ್ರ ಇಲ್ಲಿದೆ...
ಬೆಂಗಳೂರಿನಲ್ಲಿ ಜೂನ್ 2, 1955ರಲ್ಲಿ ಜನಿಸಿದ ನಂದನ್ ಅವರು ಧಾರವಾಡದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದರು. ಮುಂಬೈ ಐಐಟಿ ಸೇರಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರಾದರು. ಮುಂಬೈ ಮೂಲದ 'ಪಟ್ನಿ ಕಂಪ್ಯೂಟರ್ಸ್' ಸಂಸ್ಥೆಯಲ್ಲಿ ನಾರಾಯಣ ಮೂರ್ತಿಗಳಿಂದ ಆಯ್ಕೆಗೊಂಡ ನಂದನ್ ಮುಂದೆ ನಾರಾಯಣ ಮೂರ್ತಿಗಳೊಂದಿಗೆ ಇನ್ಫೋಸಿಸ್ ಸಂಸ್ಥೆ ಸ್ಥಾಪನೆಯಲ್ಲೂ ಕೈಜೋಡಿಸಿದರು. ಇನ್ಫೋಸಿಸ್ ಸಿಇಒ ಆಗಿ ಸಮರ್ಥವಾಗಿ ಸಂಸ್ಥೆ ಬೆಳೆಸಿದ ನಂದನ್ ಅವರು ನಂತರ ಮಹತ್ವದ ಯೋಜನೆಯ ರುವಾರಿಯಾದರು.
ನಂದನ್ ನಿಲೇಕಣಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಲು ಒಪ್ಪಿಕೊಂಡಿದ್ದು ಜೀವನದ ಪ್ರಮುಖ ತಿರುವು. ಇನ್ಫೋಸಿಸ್ ಹುದ್ದೆಯಿಂದ ಹೊರಬಂದ ಮೇಲೆ ಕೇಂದ್ರ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನಕ್ಕೆ ಸಮನಾದ Unique Identification Authority of India (UIDAI)ದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ಈ ಹುದ್ದೆಗೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ರಾಜಕೀಯ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನಿಲೇಕಣಿ ಅವರ 'Imagining India'
ಭಾರತ ಸರ್ಕಾರದ ತಂತ್ರಜ್ಞಾನ ಸಲಹಾ ಸಮಿತಿಯ ಮುಖ್ಯಸ್ಥರಾಗಿ ಕೂಡಾ ನಿಲೇಕಣಿ ಜವಾಬ್ದಾರಿ ವಹಿಸಿಕೊಂಡಿದ್ದರು. ನಿಲೇಕಣಿ ಅವರ 'Imagining India' ಇಪ್ಪತ್ತನೆಯ ಶತಮಾನದ ಭಾರತೀಯ ಸ್ಥಿತಿಗತಿಗಳ ಅವಲೋಕನಕ್ಕೆ ಭಾರತೀಯ ಕನಸುಗಾರಿಕೆಗೆ ದಿಕ್ಸೂಚಿಯಾಗಿದೆ ಎಂದು ಹೊಗಳಲಾಗಿದೆ.

ಬಿಎಟಿಎಫ್ ನಿಂದ ಆಗಿರುವ ಪ್ರಯೋಜನಗಳು
ಬೆಂಗಳೂರು ನಗರಕ್ಕಾಗಿ ನಂದನ್ ಅವರ ನೇತೃತ್ವದ Bangalore Agenda Task Force ಹೊರ ತಂದ ಯೋಜನೆಗಳು ಯಶಸ್ವಿಯಾಗಿದೆ. ಹೀಗಾಗಿ ನಂದನ್ ಅವರು ಉತ್ತಮ ಬೆಂಗಳೂರಿಗಾಗಿ ಕನಸು ಹೊತ್ತಿದ್ದಾರೆ.
* ಕಸ ನಿರ್ಮೂಲನೆ ಕಾರ್ಯತಂತ್ರ ರೂಪಿಸಿದ 'ಸ್ವಚ್ಛ ಬೆಂಗಳೂರು'
* ಆಸ್ತಿ ಘೋಷಣೆ: ಸ್ವಯಂ ಆಸ್ತಿ ಘೋಷಣೆ ಯೋಜನೆ ಜಾರಿ
* TRAC, ನಗರದ ರಸ್ತೆ, ಬಸ್ ಶೆಲ್ಟರ್, ರಸ್ತೆ ಸುರಕ್ಷತೆ ಬಗ್ಗೆ Traffic Review and Action Committee
* ನಿರ್ಮಲ ಬೆಂಗಳೂರು ಇನ್ಫೋಸಿಸ್ ಸಹಭಾಗಿತ್ವದಲ್ಲಿ ಬಂದ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ

ನಂದನ್ ರಾಜಕೀಯ ಪ್ರವೇಶ ಹಿಂದೆ ರಾಹುಲ್
2009ರಿಂದ ಕಾಂಗ್ರೆಸ್ ಸರ್ಕಾರದ ಜತೆ ನಿರಂತರ ಸಂಪರ್ಕದಲ್ಲಿರುವ ನಂದನ್ ಅವರ ಕಾರ್ಯಕ್ಷಮತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮೆಚ್ಚುಗೆಯಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ಆಧಾರ್ ಯೋಜನೆ ಸಂಪೂರ್ಣ ಜವಾಬ್ದಾರಿಯನ್ನು ನೀಡಿದರು.
ಆಧಾರ್ ಯೋಜನೆ ಬಗ್ಗೆ ಅಪಸ್ವರ, ಭಾರಿ ಮೊತ್ತ ಅವವ್ಯಹಾರಗಳ ಸುದ್ದಿಗಳನ್ನು ಸಾಯುವಂತೆ ಮಾಡುವಲ್ಲಿ ರಾಹುಲ್ ಯಶಸ್ವಿಯಾದರು.ನಂದನ್ ರಾಜಕೀಯಕ್ಕೆ ಇಳಿಯಬೇಕಾದರೆ ಈಗಿನ ಸ್ಥಾನ ಬಿಡಬೇಕಾಗುತ್ತದೆ. ಅಲ್ಲದೆ ಯೋಜನೆ ಮುಕ್ತಾಯದ ಹಂತದಲ್ಲಿದೆ. ಹೀಗಾಗಿ ನಂದನ್ ಅವರಿಗೆ ಲೋಕಸಭೆ ಚುನಾವಣೆ ಸ್ಪರ್ಧಿಸಲು ಒಪ್ಪಿಸಿದ್ದು ಸ್ವತಃ ರಾಹುಲ್ ಎಂದು ತಿಳಿದು ಬಂದಿದೆ.
ನಂದನ್ ಯಶಸ್ಸಿನ ಹಿಂದಿನ ಶಕ್ತಿ ರೋಹಿಣಿ
ನಂದನ್ ಯಶಸ್ಸಿನ ಹಿಂದಿನ ಶಕ್ತಿ ಪತ್ನಿ ರೋಹಿಣಿ. ಸುಮಾರು 7700 ಕೋಟಿ ಘೋಷಿತಾ ಆಸ್ತಿ ಹೊಂದಿರುವ ದಂಪತಿ 1999ರಿಂದ ದಾನ ಧರ್ಮಗಳ ಮೂಲಕ ಮನೆ ಮಾತಗಾಗಿದ್ದಾರೆ. ರೋಹಿಣಿ ಅವರು ಸಾಮಾಜಿಕ ಕಾರ್ಯಕರ್ತೆಯಾಗಿ ಜನಪ್ರಿಯತೆ ಹೊಂದಿದ್ದಾರೆ.
ಪ್ರಥಮ್ ಬುಕ್ಸ್, ಆರ್ಘ್ಯಂ ಎಂಬ ಸಂಸ್ಥೆಗಳನ್ನು ರೋಹಿಣಿ ಹುಟ್ಟು ಹಾಕಿದ್ದಾರೆ.ಶಿಕ್ಷಣ ಹಾಗೂ ಜಲ ಸಂಪನ್ಮೂಲ ಸಂರಕ್ಷಣೆ, ಕಸ ನಿರ್ವಹಣೆ ಕ್ಷೇತ್ರ ರೋಹಿಣಿ ಉತ್ತಮ ಸಾಧನೆ ಮಾಡಿದ್ದಾರೆ. ಇದುವರೆವಿಗೂ ಸುಮಾರು 500 ಕೋಟಿ ರು.ಗೂ ಅಧಿಕ ಮೊತ್ತವನ್ನು ದಾನವಾಗಿ ನೀಡಿದ್ದಾರೆ.ಇದು ಅವರನ್ನು ಕಂಡಿರುವ ಬೆಂಗಳೂರು ದಕ್ಷಿಣ ಭಾಗದ ಜನ ಸಾಮಾನ್ಯರಿಗೂ ಗೊತ್ತಿದೆ. ಹೀಗಾಗಿ ನಂದನ್ ಗೆ ರೋಹಿಣಿ ಬೆಂಬಲ ಶ್ರೀರಕ್ಷೆಯಾಗಲಿದೆ.
ನಂದನ್ ಸ್ಪರ್ಧೆ ಉದ್ಯಮಿಗಳಲ್ಲಿ ಹೊಸ ಹುರುಪು
ಭಾರತದ ಐಟಿ ಉದ್ಯಮದ ಒಳ ಹೊರಗು ತಿಳಿದಿರುವ ನಂದನ್ ನಿಲೇಕಣಿ ಅವರು ಚುನಾವಣೆ ಕಣಕ್ಕಿಳಿದರೆ ಉದ್ಯಮಿಗಳಲ್ಲಿ ಹೊಸ ಹುರುಪು ಮೂಡಿದೆ.
ನ್ಯಾಸ್ ಕಾಂ ಸಹ ಸ್ಥಾಪಕರಾಗಿರುವ ನಂದನ್ ಅವರು ದೇಶದ ಪ್ರತಿಷ್ಠಿತ ಆರ್ಥಿಕ ಸಂಶೋಧನಾ ಸಂಸ್ಥೆ NCEAR ಹಾಗೂ Indian Council for Research on International Economic Relations (ICRIER) ಜತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಇದರ ಜತೆಗೆ ಸಲಹಾ ಸಮಿತಿಗಳಲ್ಲಿದ್ದಾರೆ. World Economic Forum Foundation ಹಾಗೂ ಬಾಂಬೆ ಹೆರಿಟೇಜ್ ಫಂಡ್ ಸಮಿತಿಯಲ್ಲೂ ಇದ್ದಾರೆ.

ಬೆಂಗಳೂರು ದಕ್ಷಿಣದ ಶ್ರೀಮಂತ ಅಭ್ಯರ್ಥಿ
ಫೋರ್ಬ್ ಎಣಿಕೆಯಂತೆ ನಿಲೇಕಣಿ ನಿವ್ವಳ ಆಸ್ತಿ 1.3 ಬಿಲಿಯನ್ ಡಾಲರ್ ತೂಗುತ್ತದೆ. ವಿಶ್ವದ 53ನೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಇದರ ಜತೆಗೆ ಇನ್ಫೋಸಿಸ್ ಷೇರುಗಳಿವೆ. ಪತ್ನಿ ರೋಹಿಣಿ ನಿಲೇಕಣಿ ಅವರು ಎನ್ ಜಿಒ ಜತೆ ಕಾರ್ಯನಿರ್ವಹಿಸುತ್ತಿದ್ದು, ಉದ್ಯಮಿಗಳ ಪೈಕಿ ರತನ್ ಟಾಟಾ ಬಿಟ್ಟರೆ ದಾನ ಧರ್ಮದಲ್ಲಿ ರೋಹಿಣಿ ಅವರದ್ದು ಎತ್ತಿದ ಕೈ. ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿ ಈ ದಂಪತಿ ಘೋಷಿಸಿದ ಆಸ್ತಿ 7,700 ಕೋಟಿ ರು.

ನಂದನ್ ಗೆ ಸಿಕ್ಕ ಪ್ರಶಸ್ತಿ, ಪುರಸ್ಕಾರ, ಮನ್ನಣೆ
* 2004ರಲ್ಲಿ ಸಿಎನ್ ಬಿಸಿಯಿಂದ ಕಾರ್ಪೊರೇಟ್ ಸಿಟಿಜನ್ ಆಫ್ ದಿ ಇಯರ್ ಪ್ರಶಸ್ತಿ
* 2005ರಲ್ಲಿ ಆರ್ಥಿಕ, ರಾಜಕೀಯ ಸುಧಾರಣೆಗಾಗಿ Joseph Schumpeter ಪ್ರಶಸ್ತಿ
* 2006 ಫೋರ್ಬ್ಸ್ ಏಷ್ಯಾದಿಂದ ವರ್ಷದ ಉದ್ಯಮಿ ಪ್ರಶಸ್ತಿ
* ಭಾರತದ ಪ್ರತಿಷ್ಥಿತ ಪದ್ಮಭೂಷಣ ಪ್ರಶಸ್ತಿ
* 2006, 2009ರಲ್ಲಿ ಜಾಗತಿಕ 100 ಪ್ರಭಾವಿ ಉದ್ಯಮಿಗಳಲ್ಲಿ ಒಬ್ಬರು ಎಂದ ಟೈಮ್ಸ್ ಮ್ಯಾಗಜೀನ್
* ನಂದನ್ ಕೃತಿ ಇಮ್ಯಾಜಿನಿಂಗ್ ಇಂಡಿಯಾ FT-Goldman Sachs Book Award ಅಂತಿಮ ಹಂತಕ್ಕೆ ಆಯ್ಕೆ
* ಜಾಗತಿಕ 100 ಪ್ರಭಾವಿ ಚಿಂತಕರ ಪಟ್ಟಿಯಲ್ಲಿ ನಂದನ್
* 2011ರಲ್ಲಿ ಎನ್ ಡಿಟಿವಿಯಿಂದ ಆಧಾರ್ ಯೋಜನೆ ಯಶಸ್ಸಿಗೆ ಪ್ರಶಸ್ತಿ












Click it and Unblock the Notifications