ಬೆಂಗಳೂರು ಅಭಿವೃದ್ಧಿ ಕುರಿತು ಅಭ್ಯರ್ಥಿಗಳ ಕನಸು
ಬಿಪ್ಯಾಕ್ 1ನೇ ಪ್ರಶ್ನೆ : ಅತಿಯಾದ ನಗರೀಕರಣದಿಂದ ಬೆಂಗಳೂರಿನ ಅಭಿವೃದ್ಧಿ ಕುಂಠಿತಗೊಂಡಿದೆ ಮತ್ತು ಬೆಂಗಳೂರಿನ ಜನತೆ ಈ ನಗರೀಕರಣದ ಬಲಿಪಶುಗಳಾಗುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ನಗರಾಭಿವೃದ್ಧಿ ಕುರಿತು ಅಭ್ಯರ್ಥಿಗಳು ಏನು ಯೋಜನೆ ಹಾಕಿಕೊಂಡಿದ್ದಾರೆ?
ಅನಂತ್ ಕುಮಾರ್ ನೀಡಿದ ಉತ್ತರಗಳು
* ಮಾಜಿ ಪ್ರಧಾನಿ ವಾಜಪೇಯಿ ಅಧಿಕಾರಾವಧಿಯಲ್ಲಿ ನಮ್ಮ ಮೆಟ್ರೋಗೆ ಚಾಲನೆ ನೀಡಲಾಗಿತ್ತು. 4ನೇ ಹಂತದ ಕಾವೇರಿ ನೀರು ಸರಬರಾಜು ಮಾಡಲು ಯೋಜನೆ ಮಂಜೂರಾಯಿತು. ಇದರಿಂದ ಬೆಂಗಳೂರಿಗೆ 500 ಎಂಎಲ್ಡಿ (ಮಿಲಿಟನ್ ಲೀಟರ್ ಪರ್ ಡೇ) ನೀರು ನಗರಕ್ಕೆ ದೊರೆಯಲಿದೆ.
* ವಾಜಪೇಯಿ ಕಾಲದಲ್ಲಿ ಜೆಎಚ್ ಪಟೇಲ್ ಅವರ ಸರಕಾರದೊಡನೆ ಮಾಡಿಕೊಂಡ ಒಪ್ಪಂದದಿಂದಾಗಿ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲೆಯೆತ್ತಿ ನಿಂತಿದೆ. ಈಗ ಪ್ರತಿದಿನ ಲಕ್ಷಾಂತರ ಜನರು ಬಂದುಹೋಗುತ್ತಿದ್ದಾರೆ.
* ಹುಡ್ಕೋ ಮಾಡಿದ ಹಣಕಾಸು ಸಹಾಯದಿಂದಾಗಿ 50ಕ್ಕೂ ಹೆಚ್ಚು ಫ್ಲೈಓವರುಗಳು, 57 ಕೆರೆಗಳು ಬೆಂಗಳೂರಿನಲ್ಲಿ ನಿರ್ಮಾಣವಾಗಿವೆ. ನಿಲೇಕಣಿ ರೂಪಿಸಿದ ನಿರ್ಮಲ ಶೌಚಾಯಲಕ್ಕೆ ಕೂಡ ಹುಡ್ಕೋ ಹಣ ನೀಡಿದೆ.
* ಬೆಂಗಳೂರು ಮತ್ತು ದೆಹಲಿ ನಡುವೆ ಬುಲೆಟ್ ರೈಲು ತರುತ್ತೇನೆ. ಇದಕ್ಕಾಗಿ ಕೇಂದ್ರದಿಂದ 10 ಸಾವಿರ ಕೋಟಿ ರು. ಮಂಜೂರು ಮಾಡಿಸುತ್ತೇನೆ. ರೈಲು ಮತ್ತು ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಿಸುತ್ತೇನೆ.
ನಂದನ್ ನಿಲೇಕಣಿ ನೀಡಿದ ಉತ್ತರಗಳು
* ಬೆಂಗಳೂರು ನಗರದ ಜೀವನಾಡಿಯಾಗಿರುವ ನೀರು ಎಲ್ಲರಿಗೂ ಸಿಗಬೇಕು. ಅಂತರ್ಜಲ ಹೆಚ್ಚಾಗಬೇಕು, ನೀರಿನ ಮರುಬಳಕೆಗೆ ಚಾಲನೆ ನೀಡಬೇಕು, ಮಳೆನೀರು ಕೊಯ್ಲು ಪ್ರತಿ ಮನೆಯಲ್ಲಿ ನಿರ್ಮಾಣವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಾಯುತ್ತಿರುವ ಕೆರೆಗಳು ಮತ್ತೆ ಜೀವಂತಿಕೆಯಿಂದ ಉಸಿರಾಡಬೇಕು.
* ಮೆಟ್ರೋ, ಬಸ್ ಮತ್ತು ಆಟೋ ಸಂಚಾರ ವ್ಯವಸ್ಥೆ ಏಕೀಕೃತವಾಗಬೇಕು. ಮೂರೂ ಕನೆಕ್ಟ್ ಆಗಿ, ಜನರು ಸರಾಗವಾಗಿ ಸಂಚರಿಸುವಂತಾಗಬೇಕು.
* ಉದ್ಯೋಗಕ್ಕೆ ಬಂಡವಾಳ ಹರಿದುಬರಬೇಕು. ಎಲ್ಲರೂ ಅವಕಾಶಗಳ ಬಗ್ಗೆ ಮಾತಾಡುತ್ತಾರೆ, ಆದರೆ ಜನರಿಗೆ ಕೆಲಸವೇ ಇಲ್ಲದಂತಾಗಿದೆ. ಆಧಾರ್ ಯೋಜನೆಯಲ್ಲಿ 6 ಕೋಟಿ ಜನರಿಗೆ, ಇನ್ಫೋಸಿಸ್ ನಲ್ಲಿ ಸಹಸ್ರಾರು ಜನರಿಗೆ, ಬಿಎಟಿಎಫ್ ನಲ್ಲಿ ಕೂಡ ಜನರಿಗೆ ಉದ್ಯೋಗ ಸೃಷ್ಟಿಸಿದ ಅನುಭವ ನನಗಿದೆ. ನಾನು ನೀಡಿದ ಮಾತನ್ನು ಉಳಿಸಿಕೊಳ್ಳುವಂಥ ಮನುಷ್ಯ.
ರುತ್ ಮನೋರಮಾ ನೀಡಿದ ಉತ್ತರಗಳು
* ನಗರಾಡಳಿತ ನಿರ್ವಹಣೆ ಎಲ್ಲಕ್ಕಿಂತ ಮುಖ್ಯವಾದದ್ದು. ಎಲ್ಲರಿಗೂ ಸಮವಾದ ಅವಕಾಶ ಸಿಗಬೇಕು ಮತ್ತು ಬಂಡವಾಳ ಹರಿದು ಬರಬೇಕು. ಬಡವರಿಗೆ, ಮಧ್ಯಮ ವರ್ಗದವರಿಗೆ ಮನೆ, ಜಾಗ ಸಿಗುವಂತಾಗಬೇಕು. ಇದಕ್ಕೆಲ್ಲ ಮಾಸ್ಟರ್ ಪ್ಲಾನ್ ರೂಪಿಸಬೇಕು.
* ಅನಧಿಕೃತ ನಿರ್ಮಾಣಗಳು ಬಹಳವಾಗಿವೆ. ಗೋಡೆಗಳು ನಡುವೆ ಸ್ಥಳವಿರುವುದಿಲ್ಲ, ಉಸಿರಾಡಲು ಜಾಗವಿರುವುದಿಲ್ಲ. ಒಂದರ ಮೇಲೊಂದು ಅನಧಿಕೃತವಾಗಿ ಮನೆ ಕಟ್ಟುತ್ತಲೇ ಇದ್ದಾರೆ. ಇದು ನಿಲ್ಲಬೇಕು. ಬೆಂಗಳೂರು ವಿಶ್ವದರ್ಜೆಯ ನಗರವಾಗಬೇಕು.
* ಭ್ರಷ್ಟಾಚಾರದ ಬಗ್ಗೆ ಮಾತಾಡ್ತೀವಿ, ಆದರೆ ನಾವೇ ತಗೋತೀವಿ. ಜನರ ಹಣ ಲೂಟಿ ಆಗುವುದು ನಿಲ್ಲಬೇಕು. ಭ್ರಷ್ಟಾಚಾರ ನಿಂತು ಆಡಳಿತ ಪಾರದರ್ಶಕವಾಗಿರಬೇಕು. ಅಲ್ಲದೆ, ರಸ್ತೆಯಲ್ಲಿ ಸಂಚರಿಸುವ, ಉದ್ಯೋಗಸ್ಥ ಮತ್ತು ಮನೆಯಲ್ಲಿರುವ ಮಹಿಳೆಯರು ಸುರಕ್ಷಿತವಾಗಿರಬೇಕು.
ನೀನಾ ನಾಯಕ್ ನೀಡಿದ ಉತ್ತರಗಳು
* ಬೆಂಗಳೂರಿನ ಅಭಿವೃದ್ಧಿಗಾಗಿ ಉತ್ತಮ ಮೂಲಭೂತ ಸೌಕರ್ಯ ದೊರೆಯಬೇಕು. ಇದಕ್ಕಾಗಿ ಹಣವೇನೋ ಸಾಕಷ್ಟು ಹರಿದುಬರುತ್ತಿದೆ. ಆದರೆ, ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಪಾರದರ್ಶಕತೆ ಎಂಬುದೇ ಇಲ್ಲವಾಗಿದೆ. ಇದರ ಬಗ್ಗೆ ಯಾವ ಪಕ್ಷವೂ ಗಮನಹರಿಸಿಲ್ಲ.
* ಧಾರವಾಡ, ಹುಬ್ಬಳ್ಳಿ, ಬೆಳಗಾವಿಯಂಥ ನಗರಗಳಲ್ಲಿಯೂ ಅಭಿವೃದ್ಧಿಯಾಗಬೇಕು. ಬೆಂಗಳೂರಿನಲ್ಲಿ ಇರುವಂಥ ಉತ್ತಮ ಜೀವನಮಟ್ಟ ಉಳಿದ ನಗರಗಳಿಗೂ ಸಿಗಬೇಕು.