ಬಿಪ್ಯಾಕ್ ಪ್ರಶ್ನೆಗಳಿಗೆ ಬೆಂ.ದ. ಅಭ್ಯರ್ಥಿಗಳ ಉತ್ತರ
ಬೆಂಗಳೂರು, ಮಾ. 29 : ಜಯನಾಮ ಸಂವತ್ಸರದ ಆರಂಭ, ಚಾಂದ್ರಮಾನ ಯುಗಾದಿ ಇನ್ನು ಎರಡೇ ದಿನ ಇದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಜೊತೆ ಚರ್ಚಿಸಿ, ಪರಿಹಾರಗಳನ್ನು ಕಂಡುಕೊಂಡು ಬೆಂಗಳೂರಿನ ಜನತೆಗೆ ಬೆಲ್ಲದ ಸಿಹಿ ತಿನ್ನಿಸಬೇಕೆಂಬ ಪ್ರಯತ್ನ ಬೇವಿನ ಕಹಿಯಲ್ಲಿ ಪರ್ಯವಸಾನವಾಗುತ್ತದೆ ಎಂದು ಬಿಪ್ಯಾಕ್ ಸಂಸ್ಥೆ ಖಂಡಿತ ಎಣಿಸಿರಲಿಲ್ಲ.
ಬೆಂಗಳೂರಿನ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಟೈಮ್ಸ್ ಆಪ್ ಇಂಡಿಯಾ ಸಹಯೋಗದಲ್ಲಿ ಬೆಂಗಳೂರಿನ ಅಭಿವೃದ್ಧಿಗಾಗಿ ತಂಡ ಕಟ್ಟಿಕೊಂಡಿರುವ ಬೆಂಗಳೂರು ಪಾಲಿಟಿಕಲ್ ಆಕ್ಷನ್ ಕಮಿಟಿ (ಬಿಪ್ಯಾಕ್) ಆಯೋಜಿಸಿದ್ದ 'ಕ್ಷೇತ್ರದ ಮತದಾರರೊಡನೆ ಅಭ್ಯರ್ಥಿಗಳ ಭೇಟಿ ಮತ್ತು ಸಂವಾದ' ಕಾರ್ಯಕ್ರಮ, ರಾಜಕೀಯ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರ ನಡುವಿನ ಗುದ್ದಾಟ, ಕನ್ನಡ-ಇಂಗ್ಲಿಷ್ ಭಾಷೆಗಳ ನಡುವಿನ ತಾಕಲಾಟ, ಆಂಗ್ಲಪ್ರೇಮಿ ಸಂಘಟಕರ ಪೀಕಲಾಟಗಳ ನಡುವೆ ಅರ್ಧದಲ್ಲೇ ಕೊನೆಗೊಂಡಿತು. [ಬಿಪ್ಯಾಕ್ ಚರ್ಚೆ ಪ್ಯಾಕಪ್]

ಇಷ್ಟಾಗಿಯೂ ಸಿಕ್ಕಷ್ಟು ಸಮಯದಲ್ಲಿ ಕೆಲ ಮಹತ್ವದ ಸಮಸ್ಯೆಗಳ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಿತು. ಬಿಪ್ಯಾಕ್ ಕೇಳಿದ ಪ್ರಶ್ನೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ, ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್, ಜೆಡಿಎಸ್ ಅಭ್ಯರ್ಥಿ ರುತ್ ಮನೋರಮಾ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನೀನಾ ನಾಯಕ್ ಅವರು ತಮ್ಮ ಯೋಜನೆ ಮತ್ತು ಯೋಚನೆಗಳನ್ನು ಹಂಚಿಕೊಂಡರು. ಭಾಷೆ ಮತ್ತು ರಾಜಕೀಯ ಸಂಬಂಧಿ ತಾಕಲಾಟ ನಡೆಯದಿದ್ದರೆ ಚರ್ಚೆ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು.
ಒಂದು ಪ್ರಶ್ನೋತ್ತರ ಮುಗಿದು, ಎರಡನೇ ಪ್ರಶ್ನೋತ್ತರ ಮುಗಿಯುವ ಹೊತ್ತಿಗೆ ಗದ್ದಲ ತಾರಕಕ್ಕೇರಿತು. ಕ್ಷೇತ್ರದ ಮತದಾರರು ಅಭ್ಯರ್ಥಿಗಳನ್ನು ಪ್ರಶ್ನೆ ಕೇಳಲು ಅವಕಾಶವೇ ಸಿಗಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ಜೈಜೈಕಾರದಲ್ಲಿಯೇ ಕಾಲ ಕಳೆದರೆ, ಇದನ್ನೆಲ್ಲ ಸಂಯಮದಿಂದಲೇ ನೋಡುತ್ತಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಾಯಿ ಮೇಲೆ ಬೆರಳಿಟ್ಟು ಮೌನ ಪ್ರತಿಭಟನೆ ಮಾಡಿ ಗಮನ ಸೆಳೆದರು. ಜೆಡಿಎಸ್ ಪಕ್ಷದ ಕಾರ್ಯಕರ್ತರು ಯಾಕೋ ಅಷ್ಟು ಸದ್ದು ಮಾಡಿದಂತೆ ಕಾಣಲಿಲ್ಲ.
ಇರಲಿ, ಬಯೋಕಾನ್ ಮುಖ್ಯಸ್ಥೆ ಮತ್ತು ಬಿಪ್ಯಾಕ್ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಕೇಳಿದ ಪ್ರಶ್ನೆಗಳಿಗೆ ಎಲ್ಲ ನಾಲ್ಕು ಪಕ್ಷಗಳ ಅಭ್ಯರ್ಥಿಗಳು ಹೇಳಿದ ಉತ್ತರಗಳು ಕೆಳಗಿನಂತಿವೆ.












Click it and Unblock the Notifications