ಮುಲಾಜಿಲ್ಲದೆ ಕೆಎಸ್ಆರ್ ಟಿಸಿ ದರವೂ ಏರಿಸಿಬಿಟ್ರು
ಬೆಂಗಳೂರು, ಮೇ2: ಕಳೆದ ವಾರ ಬಿಎಂಟಿಸಿ ಪ್ರಯಾಣಿಕರಿಗೆ ಪ್ರಯಾಣ ದರ ಏರಿಕೆ ಶಾಕ್ ಟ್ರೀಟ್ ಮೆಂಟ್ ಕೊಟ್ಟಿದ್ದ ಸರಕಾರ ಈ ಬಾರಿ ಮುಲಾಜಿಲ್ಲದೆ ಕೆಎಸ್ಆರ್ ಟಿಸಿ ದರವನ್ನೂ ಏರಿಸಲು ಸಜ್ಜಾಗಿದೆ. ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ನಾಳೆ ಅಥವಾ ನಾಳಿದ್ದು ಈ ನೂತನ ಬಸ್ ದರ ಜಾರಿಗೆ ಬರಲಿದೆ. ಆದರೆ ಯಾವ ಪ್ರಮಾಣದಲ್ಲಿ ಪ್ರಯಾಣ ದರ ಏರಿಕೆಯಾಗಲಿದೆ ಎಂಬುದರ ಬಗ್ಗೆ ಸಚಿವರು ಸುಳಿವು ನೀಡಲಿಲ್ಲ. ಗಮನಾರ್ಹವೆಂದರೆ ಸರಕಾರವು ಸಬ್ಸಿಡಿ ನೀಡಿದರೆ ಮಾತ್ರ ಈ ಬಸ್ ಪ್ರಯಾಣ ದರವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುವುದಾಗಿ ಸಚಿವ ರೆಡ್ಡಿ ಹೇಳಿದ್ದಾರೆ.

ಬಿಎಂಟಿಸಿ ಸಂಸ್ಥೆಯ ಮೇಲೆ 600 ಕೋಟಿ ರೂ. ಸಾಲವಿದೆ. ಪ್ರತಿ ವರ್ಷ ಇದಕ್ಕಾಗಿ 60 ಕೋಟಿ ರೂ ಬಡ್ಡಿ ಕಟ್ಟಲಾಗುತ್ತಿದೆ. ಸಿಬ್ಬಂದಿ ವೆಚ್ಚ ಹೆಚ್ಚಿದ್ದು, ಡೀಸೆಲ್ ಬೆಲೆ ಏರಿಕೆಯಿಂದಲೂ ಸಂಸ್ಥೆ ಆರ್ಥಿಕ ನಷ್ಟ ಎದುರಿಸುತ್ತಿದೆ. ಹೀಗಾಗಿ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಪ್ರಯಾಣದರ ಏರಿಕೆ ಅನಿವಾರ್ಯವೆಂದು ರಾಮಲಿಂಗಾರೆಡ್ಡಿ ಅವರು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. (ಮತದಾನದ ದಿನ ಸುಲಿಗೆಗಿಳಿದ ಕೆಎಸ್ಸಾರ್ಟಿಸಿ!)
ಇಲಾಖೆಯ ಮೇಲೆ ಅಧಿಕವಾಗುತ್ತಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವ ಸಲುವಾಗಿ ಸಾರಿಗೆ ದರವನ್ನು ಏರಿಕೆ ಮಾಡದೆ ಬೇರೆ ದಾರಿ ಇಲ್ಲ. ಹೀಗಾಗಿ ಕೆಎಸ್ಆರ್ ಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಲಾಗುತ್ತದೆ ಎಂದು ಸಚಿವ ರೆಡ್ಡಿ ಹೇಳಿದ್ದಾರೆ. (ಬಿಎಂಟಿಸಿ ಆಘಾತ: ಪ್ರಯಾಣಿಕರಿಗೆ ದರ ಏರಿಕೆ ಶಾಕ್)












Click it and Unblock the Notifications