ಗಾಲಿ ರೆಡ್ಡಿ ಅಪ್ತ ಅಲಿ ಖಾನ್ ಗೆ ಜಾಮೀನು ಸಿಕ್ಕರೂ ಆತಂಕ
ಹೈದರಾಬಾದ್, ನವೆಂಬರ್ 07: ಅಂಬಿಡೆಂಟ್ ಸಂಸ್ಥೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆಪ್ತ, ಮೆಹಫೂಜ್ ಅಲಿ ಖಾನ್ ಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.
ಬೆಂಗಳೂರಿನ 61ನೇ ಸೆಷನ್ಸ್ ನ್ಯಾಯಾಲಯವು ಇಂದು(ನವೆಂಬರ್ 07) ಅಲಿಖಾನ್ ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. 50 ಸಾವಿರ ರು ಬಾಂಡ್, ಇಬ್ಬರ ಶ್ಯೂರಿಟಿ, ಹಾಗೂ ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಲಾಗಿದೆ.
ಬಹುಕೋಟಿ ಮೋಸ ಪ್ರಕರಣ: ಸಿಸಿಬಿಯಿಂದ ಜನಾರ್ದನ ರೆಡ್ಡಿ ಹುಡುಕಾಟ
ಜಾಮೀನು ಪಡೆದರೂ ಅಲಿ ಖಾನ್ ಗೆ ಆತಂಕ ದೂರಾಗಿಲ್ಲ, ಸಿಸಿಬಿ ಪೊಲೀಸರು ಗಾಲಿ ಜನಾರ್ದನ ರೆಡ್ಡಿ ಅವರ ಬೆಂಗಳೂರು, ಬಳ್ಳಾರಿ ಮನೆ ಮೇಲೆ ದಾಳಿ ಮುಂದುವರೆಸಿದ್ದಾರೆ. ಅದರಂತೆ, ಬಳ್ಳಾರಿಯಲ್ಲಿ ಅಲಿ ಖಾನ್ ಮನೆ ಮೇಲೂ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಿರೀಕ್ಷೆಯಿದೆ.
ಅಕ್ರಮ ಗಣಿಗಾರಿಕೆ ಮಾಸ್ಟರ್ ಮೈಂಡ್ ಅಲಿ ಖಾನ್
ಗಾಲಿ ರೆಡ್ಡಿ ಅವರನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ತಂತ್ರ ಹೆಣೆಯಲಾಗಿದೆ. 57 ಕೆಜಿ ಚಿನ್ನದ ಗಟ್ಟಿಯನ್ನು ಪಡೆದು ಮಾರಾಟ ಮಾಡಿರುವುದು, ಜಾರಿ ನಿರ್ದೇಶನಾಲಯದ ಅಧಿಕಾರಿಗೆ ಲಂಚ ನೀಡಿರುವುದು ಎಲ್ಲವೂ ಕಪೋಲ ಕಲ್ಪಿತ ಕಥೆ, ಅಲಿ ಖಾನ್ ಗೆ ಪೊಲೀಸರು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಅಲಿ ಖಾನ್ ಪರ ವಕೀಲ ಚಂದ್ರಶೇಖರ್ ಅವರು ಕೋರ್ಟಿನಲ್ಲಿ ವಾದಿಸಿದರು.
ಬಂಧನ ಭೀತಿ: ಹೈದರಾಬಾದ್ನಲ್ಲಿ ಜಾಮೀನಿಗೆ ಮೊರೆ ಹೋದ ರೆಡ್ಡಿ
ಮಾರ್ಕೆಟಿಂಗ್ ಹೆಸರಲ್ಲಿ ಹಣ ದ್ವಿಗುಣ(ಸುಮಾರು 30 ರಿಂದ 40% ಬಡ್ಡಿ) ಮಾಡಲು ಬಯಸುವವರು ಬೆಂಗಳೂರಿನ ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ, ಇಲ್ಲಿ ಕಳೆದ ಒಂದೂವರೆ ವರ್ಷದಿಂದ ಹೂಡಿಕೆ ಮಾಡಿದವರಿಗೆ ಆರಂಭದಲ್ಲಿ ರಿಟರ್ನ್ಸ್ ಸಿಕ್ಕಿದೆ. ಆದರೆ, ಲಕ್ಷಾಂತರ ಮಂದಿಗೆ ನಯಾ ಪೈಸಾ ಸಿಕ್ಕಿಲ್ಲ. ಈ ಸಂಬಂಧ ಕಳೆದ ವರ್ಷ ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸಿಸಿಬಿ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ.