ಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲು
Recommended Video

ಬೆಂಗಳೂರು, ಅಕ್ಟೋಬರ್ 30: ಬಳ್ಳಾರಿ ಲೋಕಸಭೆ ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ಜನಾರ್ದನ ರೆಡ್ಡಿ ನಡುವಣ ಕದನ ತಾರಕಕ್ಕೇರುವ ಸೂಚನೆ ಕಂಡುಬಂದಿದೆ.
ರಾಜಕೀಯವಾಗಿ ಬಹಿರಂಗ ಚಟುವಟಿಕೆಗಳಿಂದ ದೂರವಿದ್ದ ಜನಾರ್ದನ ರೆಡ್ಡಿ, ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ನೇರ ಅಖಾಡಕ್ಕೆ ಇಳಿಯುವ ಸೂಚನೆ ನೀಡಿದ್ದರು. ಸಿದ್ದರಾಮಯ್ಯ ಅವರಿಂದಲೇ ತಾವು ಜೈಲಿನಲ್ಲಿ ಅನ್ಯಾಯವಾಗಿ ನಾಲ್ಕು ವರ್ಷ ಕಳೆಯುವಂತಾಯಿತು ಎಂದು ಅಲವತ್ತುಕೊಂಡಿದ್ದರು.
ಇದಕ್ಕೆ ಸಿದ್ದರಾಮಯ್ಯ ಪ್ರತಿ ಟ್ವೀಟ್ ಮಾಡಿ, ನೀವು ಮಾಡಿದ ಪಾಪಗಳು ಏನು ಎಂಬುದನ್ನು ನಿಮ್ಮ ಪಕ್ಷದ ಸಂಸದರೇ ಬರೆದಿದ್ದಾರೆ ಓದಿ ಎಂದು ಪ್ರತಾಪ್ ಸಿಂಹ ಬರೆದಿದ್ದ ಪುಸ್ತಕದ ಚಿತ್ರವನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದರು.
ಸಿದ್ದರಾಮಯ್ಯ ಇಷ್ಟಕ್ಕೇ ಸುಮ್ಮನಾಗಿಲ್ಲ. ಸೋಮವಾರ ಬಳ್ಳಾರಿಯಲ್ಲಿ ಪ್ರಚಾರ ಮುಗಿಸಿದ ಬಳಿಕ ಮತ್ತೆ ಟ್ವಿಟ್ಟರ್ನಲ್ಲಿ ರೆಡ್ಡಿ ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದಾರೆ. ಸರಣಿ ಟ್ವೀಟ್ಗಳನ್ನು ಮಾಡಿರುವ ಸಿದ್ದರಾಮಯ್ಯ, ಗಣಿ ಅವ್ಯವಹಾರದ ಕುರಿತು ಬಹಿರಂಗ ಚರ್ಚೆಗೆ ಬರಲು ಸಿದ್ಧ. ನಿಮಗೆ ಪ್ರವೇಶಕ್ಕೆ ಅನುಮತಿ ಇರುವ ಸ್ಥಳದಲ್ಲಿಯೇ ಚರ್ಚೆಗೆ ಬನ್ನಿ ಎಂದು ವ್ಯಂಗ್ಯದ ದಾಟಿಯಲ್ಲಿ ಸವಾಲು ಹಾಕಿದ್ದಾರೆ.
ಅವರ ಸರಣಿ ಟ್ವೀಟ್ಗಳು ಹೀಗಿವೆ...
|
ಅವರೇ ಸ್ಥಳ, ಸಮಯ ನಿಗದಿಮಾಡಲಿ
ಜನಾರ್ಧನ ರೆಡ್ಡಿಯವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ, ಅವರ ಜೊತೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಬಳ್ಳಾರಿಯಿಂದ ಗಡಿಪಾರಾಗಿರುವ ರೆಡ್ಡಿಯವರೇ ಚರ್ಚೆಯ ಸ್ಥಳ ಮತ್ತು ಸಮಯ ನಿಗದಿಪಡಿಸಲಿ.
|
ಇವರೇನು ಸಾಮ್ರಾಟರ ವಂಶಸ್ಥರೇ?
ಚಿನ್ನದ ಕಮೋಡ್, ಚಿನ್ನದ ಕುರ್ಚಿ ಇವೆಲ್ಲ ಜನಾರ್ಧನ ರೆಡ್ಡಿಯವರ ವೈಭವದ ಜೀವನಕ್ಕೆ ಸಾಕ್ಷಿಗಳು. ಇಷ್ಟೆಲ್ಲ ಎಲ್ಲಿಂದ ಬಂತು? ಇವರೇನು ಸಾಮ್ರಾಟ ವಂಶಸ್ಥರೇ?
ಈ ಸಂಪತ್ತು ಗಣಿಲೂಟಿಯ ಸಂಪಾದನೆ ಎನ್ನುವುದು ಬಳ್ಳಾರಿ ಮಾತ್ರವಲ್ಲ ಇಡೀ ದೇಶಕ್ಕೆ ಗೊತ್ತು. ಇಷ್ಟಾದ ಮೇಲೆಯೂ ತಮ್ಮನ್ನು ಪ್ರಾಮಾಣಿಕರೆಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ವೇ?
|
ಜಿಲ್ಲೆಗೆ ಅವರು ಏನು ಮಾಡಿದ್ದಾರೆ?
ಚಳ್ಳಕೆರೆ, ಪಾವಗಡ, ಮೊಳಕಾಲ್ಮೂರುಗಳಿಗೆ ಕುಡಿಯುವ ನೀರಿನ ಪೂರೈಕೆಗೆ ತುಂಗಭದ್ರಾ ಹಿನ್ನೀರನ್ನು ಪೂರೈಸುವ ಶಾಶ್ವತ ಯೋಜನೆಯನ್ನು ರೂಪಿಸಿ, ಟೆಂಡರ್ ಕರೆದು, ಟೆಂಡರ್ ಎಜೆನ್ಸಿಯನ್ನು ಕೂಡ ನಿಗದಿಪಡಿಸಿರುವುದು ನಮ್ಮ ಸರ್ಕಾರ. ಜನಾರ್ಧನ ರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಮಂತ್ರಿಯಾಗಿದ್ದಾಗ ಜಿಲ್ಲೆಗೆ ಏನು ಮಾಡಿದ್ದಾರೆ?
|
ದೇವೇಗೌಡರು, ಉಗ್ರಪ್ಪ ಕೊಡುಗೆ
1991ರಲ್ಲಿ ದೇವೇಗೌಡರು ಲೋಕಸಭಾ ಸದಸ್ಯರಾಗಿದ್ದಾಗ ಉಗ್ರಪ್ಪನವರು ನಾಯಕ, ವಾಲ್ಮೀಕಿ ಮುಂತಾದ ಜಾತಿಗಳಿಗೆ ಎಸ್.ಟಿ ಮೀಸಲಾತಿ ದೊರೆಯುವಂತೆ ಮಾಡಿದ್ದರು. ಇಂದು ಎಸ್.ಟಿ ಮೀಸಲು ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸಿ ಲೋಕಸಭೆಗೆ ಹೋಗಿದ್ದರೆ ಅದು ದೇವೇಗೌಡರು ಮತ್ತು ಉಗ್ರಪ್ಪನವರ ಕೊಡುಗೆ ಎಂಬುದನ್ನು ಅವರು ಮರೆಯಬಾರದು.
|
ಪಾದಯಾತ್ರೆ ಮಾಡಿದ್ದು ನೆನಪಿಲ್ಲವೇ?
ಲೋಕಾಯುಕ್ತ ಸಂತೋಷ್ ಹೆಗ್ಡೆ ವರದಿಯ ಮೇಲೆ ಸದನದಲ್ಲಿ ಚರ್ಚೆ ನಡೆದಿದ್ದಾಗ ತಾಕತ್ತಿದ್ದರೆ ಬಳ್ಳಾರಿಗೆ ಬರುವಂತೆ ಜನಾರ್ದನ ರೆಡ್ಡಿ ನನಗೆ ಸವಾಲು ಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ಬೆಂಗಳೂರಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ.
|
ಮತ್ತೆ ಕೆಣಕಬೇಡಿ
ಆ ದಿನದಿಂದಲೇ ರೆಡ್ಡಿ ಗ್ಯಾಂಗ್ ಕಟ್ಟಿದ್ದ ಬಳ್ಳಾರಿ ರಿಪಬ್ಲಿಕ್ ಕುಸಿಯಲಾರಂಭಿಸಿತ್ತು. ಅದರ ನಂತರ ಜನಾರ್ದನ ರೆಡ್ಡಿ ಜೈಲುಪಾಲಾಗಿ ಹೋದರು. ನಮ್ಮನ್ನು ಮತ್ತೆ ಕೆಣಕಲು ಬರಬೇಡಿ, ಬೇಲ್ ರದ್ದಾಗಿ ಮತ್ತೆ ಜೈಲಿಗೆ ಹೋಗಬೇಕಾದೀತು.
|
ಮಕ್ಕಳಿಗೂ ಗೊತ್ತು
ಮಕ್ಕಳೂ ಸೇರಿದಂತೆ ಬಳ್ಳಾರಿಯಲ್ಲಿರುವ ಎಲ್ಲರಿಗೂ ಜನಾರ್ದನ ರೆಡ್ಡಿ ಭ್ರಷ್ಟ ಎಂದು ಗೊತ್ತು. ಅದಕ್ಕಾಗಿ ಅವರಿಗೆ ನಾಚಿಕೆಯಾಗಬೇಕು. ಬಳ್ಳಾರಿಗೆ ಅವರು ಪ್ರವೇಶ ಮಾಡುವುದನ್ನೇ ನಿಷೇಧಿಸಲಾಗಿದೆ. ಚರ್ಚೆಗೆ ಬರಬೇಕೆಂಬ ಅವರ ಸವಾಲನ್ನು ಸ್ವೀಕರಿಸುತ್ತೇನೆ. ಮೊದಲು ಅವರು ತಮ್ಮ ಪ್ರವೇಶಕ್ಕೆ ಎಲ್ಲಿ ಅನುಮತಿ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಲಿ ಮತ್ತು ಬಳಿಕ ಸ್ಥಳ ಸೂಚಿಸಲಿ.
|
ಎಲ್ಲಿಂದ ಬಂತು ದುಡ್ಡು?
ಅಪನಗದೀಕರಣದ ಸಂದರ್ಭದಲ್ಲಿ ಇಡೀ ದೇಶ ಆರ್ಥಿಕ ದುಸ್ಥಿತಿಗೆ ಸಿಲುಕಿದ್ದಾಗ ಅವರು ತಮ್ಮ ಭ್ರಷ್ಟಚಾರದ ಸಂಪತ್ತನ್ನು ಪ್ರದರ್ಶಿಸುತ್ತಿದ್ದರು. ಅದಕ್ಕೆ ಅವರನ್ನು ಹೊಣೆಗಾರರನ್ನಾಗಿಸಬೇಕಲ್ಲವೇ? ಅವರು ಅಪನಗದೀಕರಣ ಎಂಬ ದುರಂತದಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತರು, ರೋಗಿಗಳು, ವಿದ್ಯಾರ್ಥಿಗಳು ಮುಂತಾದವರ ಬಗ್ಗೆ ಯಾವಾಗಲಾದರೂ ಕಾಳಜಿ ತೋರಿದ್ದರಾ?












Click it and Unblock the Notifications