ನಲಪಾಡ್ ಪ್ರಕರಣ: ಇತರೆ ಆರೋಪಿಗಳ ಪರ ವಕೀಲರ ಭರ್ಜರಿ ವಾದ
ಬೆಂಗಳೂರು, ಫೆಬ್ರವರಿ 27: ವಿದ್ವತ್ ಮೇಲೆ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು ಮಾರ್ಚ್ 2 ಕ್ಕೆ ತೀರ್ಪು ಪ್ರಕಟವಾಗಲಿದೆ.
ಪ್ರಕರಣದ ಇತರೆ ಆರೋಪಿಗಳ ಪರ ವಕೀಲ ಎಸ್.ಬಾಲನ್ ಇಂದು ದೀರ್ಘ ವಾದ ಮಂಡನೆ ಮಾಡಿ 307 ಕೇಸು ದುರುದ್ದೇಶದಿಂದ ಹಾಕಲಾಗಿದ್ದು, ವಿದ್ವತ್ಗೆ ಆರೋಪಿಗಳು ಹಲ್ಲೆ ಮಾಡಿರುವುದು ಕೊಲೆ ಉದ್ದೇಶದಿಂದಲ್ಲ ಅದೊಂದು ಬಿಸಿ ರಕ್ತದ ಯುವಕರ ನಡುವೆ ನಡೆದ 2 ನಿಮಿಷದ ಜಗಳ ಅಷ್ಟೆ ಎಂದು ವಾದಿಸಿದರು.
ಹಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಎಸ್.ಬಾಲನ್ ಅವರು 'ಗಲಾಟೆ ಕುರಿತು ಎರಡು ಎಫ್ಐಆರ್ ದಾಖಲಾಗಿದೆ ಆದರೆ ಪೊಲೀಸರು ಒಂದು ಎಫ್ಐಆರ್ ಅನ್ನಷ್ಟೆ ವಿಜೃಂಭಿಸಿ ಮತ್ತೊಂದನ್ನು ಬಚ್ಚಿಟ್ಟಿದ್ದಾರೆ' ಎಂದು ಅವರು ಹೇಳಿದರು. ಗಲಾಟೆ ಕುರಿತು ವಿದ್ವತ್ ಮೇಲೆ ನಲಪಾಡ್ ಜೊತೆ ಆರೋಪಿಯಾಗಿರುವ ಅರುಣ್ ಬಾಬು ಎಂಬುವರು ಕೂಡಾ ದೂರು ದಾಖಲಿಸಿದ್ದರು.

ಅರುಣ್ ಬಾಬು ಸರ್ಕಾರಿ ಆಸ್ಪತ್ರೆಗೆ ಸೇರಿದ್ದ
ವಿದ್ವತ್ ಕೂಡಾ ಪ್ರಭಾವಿಯೇ ಎಂದು ವಾದಿಸಿದ ಎಸ್.ಬಾಲನ್ ಆತ ಸೇರಿರುವುದು ಡಾಲರ್ ಲೆಕ್ಕದಲ್ಲಿ ಬಿಲ್ ಪೀಕುವ ಆಸ್ಪತ್ರೆಗೆ, ಆದರೆ ನನ್ನ ಕಕ್ಷಿದಾರ ಅರುಣ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿ ಹಣ ಕೊಟ್ಟು ದಾಖಲೆ ತಿದ್ದಬಹುದು ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ತಿದ್ದಲು ಸಾಧ್ಯವಿಲ್ಲ ಎಂದು ಬಾಲನ್ ಹೇಳಿದರು.

ತಡವಾಗಿ ಎಫ್ಐಆರ್
ರಾತ್ರಿ 11.45 ಕ್ಕೆ ಮೊದಲ ದೂರು ದಾಖಲಾಗಿದೆ, ಆ ನಂತರ 69 ನಿಮಿಷದ ನಂತರ ಆಸ್ಪತ್ರೆಗೆ ದಾಖಲಾಗಿದೆ. ಆಸ್ಪತ್ರೆಗೆ ದಾಖಲಾಗಲು ಇಷ್ಟು ವಿಳಂಬ ಏಕೆ ಮಾಡಿದ್ದಾರೆ ಇದರ ಬಗ್ಗೆ ಕಾರಣ ನೀಡಿಲ್ಲ ಎಂಬ ವಾದ ಮಂಡಿಸಿದ ಬಾಲನ್ ಎಫ್ಐಆರ್ ಅನ್ನು ಬೆಳಗಿನ ಜಾವ 3.45ಕ್ಕೆ ದಾಖಲಿಸಲಾಗಿದೆ. ಆದರೆ ತಡವಾಗಿ ಎಫ್ಐಆರ್ ದಾಖಲಿಸಿದ್ದಕ್ಕೆ ಕಾರಣ ನೀಡಲಾಗಿಲ್ಲ, ಇದೆಲ್ಲಾ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಇದರ ಹಿಂದ ಪೊಲೀಸರ ಹಾಗೂ ಸರ್ಕಾರದ ಕೈ ಕೆಲಸ ಮಾಡಿದೆ ಎಂದು ಅವರು ವಾದಿಸಿದರು.

ಪ್ರಜ್ಞಾಹೀನ ಎಂಬುದೂ ಸುಳ್ಳು
ಹೊಡೆತ ತಿಂದ ವಿದ್ವತ್ ಪ್ರಜ್ಞಾಹೀನನಾಗಿದ್ದ ಎನ್ನುವುದು ಸುಳ್ಳು ಅಷ್ಟೆ ಅಲ್ಲ ಐಸಿಯುಗೆ ಹೋಗಿ ನಲಪಾಡ್ ಮತ್ತು ಸಹಚರರು ಬೆದರಿಕೆ ಹಾಕಿದ್ದರು ಎಂಬುದೂ ಸುಳ್ಳು ಎಂದ ಬಾಲನ್ ಅಷ್ಟು ತಡ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುಗೆ ಪ್ರವೇಶ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು. ಸಿಸಿಟಿವಿ ದೃಶ್ಯಗಳನ್ನೂ ತಿರುಚಿರುವ ಸಾಧ್ಯತೆ ಇದೆ ಹಾಗಾಗಿ ಅವನ್ನು ಎಫ್ಎಸ್ಎಲ್ ತನಿಖೆಗೆ ಒಳಪಡಿಸಬೇಕು ಎಂದು ಅವರು ಮನವಿ ಮಾಡಿದರು.

ವಿದ್ವತ್ 90% ಚೇತರಿಕೆ
ಇದೊಂದು ಬಿಸಿ ಯುವಕರ ನಡುವಿನ ಎರಡು ನಿಮಿಷದ ಗಲಾಟೆ ಅಷ್ಟೆ ಅದಲ್ಲದೆ ವಿದ್ವತ್ ಈಗ 90% ಗುಣಮುಖರಾಗಿದ್ದು ಅವರ ಪ್ರಾಣಕ್ಕೆ ಧಕ್ಕೆ ಆಗುವ ಹಲ್ಲೆಯೇ ಆಗಿಲ್ಲ ಎಂದು ಬಾಲನ್ ವಾದಿಸಿದರು. ವಿದ್ವತ್ಗೆ ನಾಲ್ಕು ವಾರಗಳ ಹಿಂದೆಯೇ ಕಾಲಿಗೆ ಗಾಯವಾಗಿತ್ತು, ಆಗ ಕಾಲಿಗೆ ಮಾತ್ರವೇ ಗಾಯವಾಗಿತ್ತಾ ಅಥವಾ ದೇಹದ ಇತರ ಭಾಗಗಳಿಗೂ ಆಗಿತ್ತಾ ಎಂಬ ಅನುಮಾನವನ್ನೂ ಅವರು ಎತ್ತಿದರು.

ಹಲ್ಲೆ ಎಂದರೇನು?
ಪ್ರಾಸಿಕ್ಯೂಷನ್ ಅವರ ವಾದ ನಿರಾಧಾರ ಮತ್ತು ಸುಳ್ಳಿನ ಕಂತೆ ಎಂದ ಬಾಲನ್ ಅವರು ನಕ್ಕಲ್ ರಿಂಗ್ ನಲ್ಲಿ ಹಲ್ಲೆ ಎಂಬುದು ಕಟ್ಟು ಕತೆ, ಕ್ರೂರ ಹಲ್ಲೆ ಎಂದು ಪ್ರಾಸೀಕೂಶನ್ ವಾದವೂ ಸುಳ್ಳು ಎಂದು ಜರಿದ ಅವರು ಹಲ್ಲೆ ಎಂದರೇನು ಎಂದು ಕೋರ್ಟ್ನಲ್ಲಿ ವಿವರಿಸಿ ಹೇಳಿದರು. ಟೆರರಿಸಂ, ಮಾಫಿಯಾ ಎಂಬೆಲ್ಲಾ ಪದಗಳನ್ನು ಬಳಸಲಾಗುತ್ತಿದೆ ಹಾಗಾದರೆ ಇದು ಪೊಲೀಸ್ ಟೆರರಿಸಂ ಆಗಿದೆಯಾ? ಎಂದು ಅವರು ಪ್ರಶ್ನಿಸಿದರು.

ಆಲ್ಕೊಹಾಲ್ ಇರಲಿಲ್ಲ
ವಿದ್ವತ್ ಪರ ವಕೀಲ ಸಾರ್ವಜನಿಕ ಅಭಿಯಂತರ ಶ್ಯಾಮ್ಸುಂದರ್ ವಾದ ಮಂಡಿಸಿ ಕೇವಲ ಮುನ್ನೆಚ್ಚರಿಕೆ ಹಾಗೂ ರಕ್ಷಣೆಗಾಗಿ ರಘುಬಾಬು ದೂರು ದಾಖಲಿಸಿದ್ದಾರೆ ಎಂದರು. ವಿದ್ವತ್ ದೇಹದಲ್ಲಿ ಮದ್ಯದ ಅಂಶ ಇರಲಿಲ್ಲ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications