ಅಜಾದಿ ಕಾ ಅಮೃತ ಮಹೋತ್ಸವ; ಶಾಲೆ, ಮದರಸಾ ಮೇಲೆ ರಾಷ್ಟ್ರಧ್ವಜ ಹಾರಾಟ
ಬೆಂಗಳೂರು, ಜುಲೈ 18: ದೇಶ ಸ್ವಾತಂತ್ರ್ಯವನ್ನು ಪಡೆದು 75 ವರ್ಷವನ್ನು ಪೂರೈಸುತ್ತಿದೆ. ಈ ವೇಳೆ ದೇಶದಲ್ಲಿ 'ಹರ್ ಘರ್ ತಿರಂಗಾ' ಅನ್ನೋ ಮಹತ್ವದ ಅಭಿಯಾನವನ್ನು ಕೇಂದ್ರ ಸರಕಾರ ಹಮ್ಮಿಕೊಳ್ಳುತ್ತಿದೆ. ಇದೇ ವೇಳೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಶಾಲೆ, ಕಾಲೇಜು ಸೇರಿದಂತೆ ಮದರಸಾ ಮೇಲೂ ಒಂದು ವಾರ ಧ್ವಜಾರೋಹಣ ಮಾಡಿಸಲು ಉದ್ದೇಶಿಸಿದೆ. ಈ ಕುರಿತು 'ಒನ್ಇಂಡಿಯಾ ಕನ್ನಡ'ದ ವಿಶೇಷ ವರದಿ ಇಲ್ಲಿದೆ.
ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರುಷವಾಗುತ್ತದೆ. ಈ ಶುಭ ಸಮಯವನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಆಚರಿಸಲು ನಿರ್ಧರಿಸಲಾಗಿದೆ. ಈ ಕುರಿತು ವಿವಿಧ ಕಾರ್ಯಕ್ರಮಗಳು ಈಗಾಗಲೇ ನಡೆಯುತ್ತಿದೆ.
ದೇಶದ ಭವ್ಯ ಸಂಸ್ಕೃತಿ , ಇತಿಹಾಸ, ಸಾಧನೆಗಳನ್ನು ಸಂಭ್ರಮಾಚರಣೆಯನ್ನು ಮಾಡುವ ಉದ್ದೇಶದೊಂದಿದೆ. ಸ್ವಾತಂತ್ರ್ಯ ಅಮೃತ್ ಮಹೋತ್ಸವ ( ಆಜಾದಿ ಕಿ ಅಮೃತ್ ಮಹೋತ್ಸವ) ಉಪಕ್ರವಮವನ್ನು ಭಾರತ ಸರಕಾರ ಆರಂಭಿಸಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯು 2021 ಮಾರ್ಚ್ 12ರಿಂದ ಪ್ರಾರಂಭವಾಗಿದ್ದು. 75 ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಒಳಗೊಂಡಂತೆ 75 ವಾರಗಳ ಅವಧಿಯಲ್ಲಿ ಜರುಗುತ್ತಿದೆ. 2023 ಆಗಸ್ಟ್ 15ರ ನಂತರ ಮಹೋತ್ಸವ ಆಚರಣೆಗೆ ಶುಭಮಂಗಳವನ್ನು ಹಾಡಲಾಗುತ್ತದೆ.
ಮದರಸಾಗಳೂ ಸಹ ಧ್ವಜಾರೋಹಣ ಮಾಡಬೇಕು
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಶಾಲೆ , ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಎಲ್ಲಾ ಮದರಸಾಗಳಲ್ಲಿ 2022ರ ಆಗಸ್ಟ್ 11 ರಿಂದ 2022 ಆಗಸ್ಟ್ 17ರವರೆಗೆ ಭಾರತ ಧ್ವಜಾರೋಹಣ ಅಭಿಯಾನ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿನೆ ನೀಡಲಾಗುತ್ತಿದೆ. ಇದರ ಜೊತೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ಮನೆಯ ಮೇಲೂ ಧ್ವಜಾರೋಹಣವನ್ನು ಮಾಡಬೇಕು ಎಂಬ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ.
ರಾಷ್ಟ್ರ ಭಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಕ್ಕೆ ಸೂಚನೆ
ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ವೇಳೆಯಲ್ಲಿ ಸರ್ಕಾರಿ ಮತ್ತು ಅನುದಾನಿತ , ಅನುದಾನ ರಹಿತ ಪ್ರಾಥಮಿಕ ಶಾಲೆ , ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಎಲ್ಲಾ ಮದರಸಾಗಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಮತ್ತು ತ್ಯಾಗ, ಬಲಿದಾನವನ್ನು ಮೆಲುಕು ಹಾಕುವ ಗೀತೆ ಗಾಯನ ಕ್ವಿಜ್, ಪ್ರಬಂಧ ಬರೆಯುವುದು, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ಬಿಡಿಸುವ ಸ್ಪರ್ಧೆ ಆಯೋಜನೆಯನ್ನು ಕೈಗೊಳ್ಳಲು ಸೂಕ್ತ ಕ್ರಮವನ್ನು ಕೈಗೊಳ್ಳುವ ಇಲಾಖೆ ಆಯಾ ವಲಯದ ಡಿಡಿಪಿಐ ಮತ್ತು ಬಿಇಓಗಳಿಗೆ ಸೂಚನೆಯನ್ನು ನೀಡಲಿದೆ.
ಕೇಂದ್ರ ಸರಕಾರದ ವೆಬ್ ಸೈಟ್ನಲ್ಲಿ ಮಾಹಿತಿ
ಭಾರತದ ಅಮೃತ ಮಹೋತ್ಸವದ ಭಾಗವಾಗಿ ಪ್ರತಿ ಮನೆಯಲ್ಲೂ ಧ್ವಜಾರೋಹಣ (ಹರ್ ಘರ್ ತಿರಂಗಾ) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಮನೆಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಪ್ರೇಮ, ಸ್ವಾತಂತ್ರ್ಯವನ್ನು ತಂದುಕೊಟ್ಟ ನಮ್ಮ ಹಿರಿಯರ ತ್ಯಾಗ , ಬಲಿದಾನವನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದರಿಂದಾಗಿ ಅಮೃತ ಮಹೋತ್ಸವ ಕಾರ್ಯಕ್ರಮದ ಹೆಚ್ಚಿನ ಮಾಹಿತಿಯನ್ನು ಕೇಂದ್ರ ಸರಕಾರದ ವೆಬ್ ಸೈಟ್ ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಮದರಸ ಮೇಲೆ ಧ್ವಜಾರೋಹಣಕ್ಕೆ ಅಭ್ಯಂತರವಿಲ್ಲ
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಥಪೂರ್ಣ ಆಚರಣೆಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಅನುಷ್ಠಾನಗೊಳಿಸಲು ಸುತ್ತೋಲೆ ಹೊರಡಿಸುವಂತೆ ಸಚಿವ ಬಿ. ಸಿ. ನಾಗೇಶ್ ಸೂಚನೆಯನ್ನು ನೀಡಿದ್ದಾರೆ. ''ಸ್ವಾತಂತ್ರ್ಯ ದಿನಾಚರಣೆ ಮತ್ತು ಧ್ವಜಾರೋಹಣ ವಿಚಾರವಾಗಿರುವುದರಿಂದ ಸರಕಾರ ಯಾವ ಆದೇಶವನ್ನು ನೀಡುತ್ತದೆಯೇ ಅದನ್ನು ನಾವು ಪಾಲಿಸುತ್ತೇವೆ'' ಎಂದು ಸಿಟಿ ಮಾರುಕಟ್ಟೆಯ ಮಸ್ಜೀದ್ನ ಮೌಲ್ವಿ ಮೌಲಾನ ಮಖ್ಸೂದ್ ಇಮ್ರಾನ್ ತಿಳಿಸಿದ್ದಾರೆ.
Recommended Video