ಆಟಿಸಂ ಎಂಬ ಮಕ್ಕಳ ಮೆದುಳೊಳಗಿನ ಸಮಸ್ಯೆಗೆ ವೈದ್ಯರು ಹೇಳೋದೇನು?
Recommended Video

ಬೆಂಗಳೂರು, ಮಾರ್ಚ್ 3: "ಆಟಿಸಂನ ಬಹಳ ಬೇಗ ಗುರುತಿಸಬೇಕು. ಅಂಥ ಮಕ್ಕಳ ಕುಟುಂಬದವರು ಮಗುವಿನ ಅಗತ್ಯಕ್ಕೆ ತುಂಬ ಬೇಗ ಸ್ಪಂದಿಸಬೇಕು. ಆ ನಂತರದ ಜವಾಬ್ದಾರಿ ಚಿಕಿತ್ಸೆ ನೀಡುವ ವೈದ್ಯರ ತಂಡ ಮತ್ತಿತರರದು ಬರುತ್ತದೆ" ಎಂದರು ನಿವೃತ್ತ ಪ್ರಾಧ್ಯಾಪಕಿ ಹಾಗೂ ವೈದ್ಯೆ ಶೋಭಾ ಶ್ರೀನಾಥ್.
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ತಾಜ್ ವಿವಾಂತದಲ್ಲಿ ಬಿಹೇವಿಯರ್ ಮುಮೆಂಟಮ್ ಇಂಡಿಯಾ ಫೌಂಡೇಷನ್ ಆಟಿಸಂ ಬಗ್ಗೆ ಎರಡು ದಿನಗಳ ಕಾಲ (ಶನಿವಾರ ಹಾಗೂ ಭಾನುವಾರ) ಅಂತರರಾಷ್ಟ್ರೀಯ ಸಮಾವೇಶ ನಡೆಯುತ್ತಿದ್ದು, ಅಲ್ಲಿ ಶೋಭಾ ಶ್ರೀನಾಥ್ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಆಟಿಸಂ ಅಂದರೆ ಮೆದುಳಿಗೆ ಸಂಬಂಧಪಟ್ಟಂತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಎದುರಿಗಿರುವ ವ್ಯಕ್ತಿ ಹೇಳುವ ವಿಚಾರ ಮಗುವಿಗೆ ಅರ್ಥವಾಗುತ್ತದೆ. ಆದರೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ತಂದೆ- ತಾಯಿ, ಅಜ್ಜ- ಅಜ್ಜಿ ಎಂಬ ಭಾವನಾತ್ಮಕ ನಂಟು ಆ ಮಕ್ಕಳಿಗೆ ಇರುವುದಿಲ್ಲ.
ನಡವಳಿಕೆಯಲ್ಲಿ (ಬಿಹೇವಿಯರ್ ಪ್ರಾಬ್ಲಂ) ಸಮಸ್ಯೆ ಇರುತ್ತದೆ. ಇಂಥ ಮಕ್ಕಳಿಗೆ ಶ್ರವಣ ದೋಷವಿದೆಯೇನೋ ಎಂದು ಕೆಲವು ಪೋಷಕರು ಗೊಂದಲಕ್ಕೆ ಕೂಡ ಈಡಾಗುವುದುಂಟು. ಆದರೆ ಈ ಮಕ್ಕಳಿಗೆ ಹೇಗೆ ಪ್ರತಿಕ್ರಿಯಿಸಬೇಕು, ಹೇಗೆ ನಡೆದುಕೊಳ್ಳಬೇಕು, ತಮಗೆ ಬೇಕಾದ್ದನ್ನು ಹೇಗೆ ಕೇಳಿ ಪಡೆದುಕೊಳ್ಳಬೇಕು ಎಂದು ಗೊತ್ತಾಗುವುದಿಲ್ಲ. ಇಂಥ ಸಮಸ್ಯೆ ಇರುವುದಕ್ಕೆ ಆಟಿಸಂ ಎನ್ನುತ್ತಾರೆ.

ಆತಂಕ, ಕತ್ತಲೆಂದರೆ ಭಯ, ಆಕ್ರಮಣಕಾರಿ ಧೋರಣೆ
ಈ ಬಗ್ಗೆ ಅರಿವು ಮೂಡಿಸುವ ಕಾರಣಕ್ಕೇ ಸಮ್ಮೇಳನ ಆಯೋಜಿಸಲಾಗಿತ್ತು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶೋಭಾ ಶ್ರೀನಾಥ್, ಆಟಿಸಂ ಇರುವ ಮಕ್ಕಳಿಗೆ ನಿದ್ರೆ-ಊಟದಲ್ಲಿ ಸಮಸ್ಯೆ ಆಗುತ್ತದೆ. ಆತಂಕ ಪಡುವುದು ಈ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮುಖ್ಯ ಸಮಸ್ಯೆ. ಕತ್ತಲು ಅಂದರೆ ಉಳಿದ ಮಕ್ಕಳಿಗಿಂತ ಹೆಚ್ಚು ಹೆದರುತ್ತಾರೆ. ಹಲವು ಮಕ್ಕಳಲ್ಲಿ ತುಂಬ ಆಕ್ರಮಣಕಾರಿ ಧೋರಣೆ ಕೂಡ ಕಾಣಬಹುದು ಎಂದರು.

ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು
ಈ ರೀತಿ ಆಟಿಸಂ ಇದೆ ಎಂದು ಗೊತ್ತಾದ ತಕ್ಷಣ ಆ ಮಕ್ಕಳ ಜತೆ ಹೆಚ್ಚು ಮಾತನಾಡಬೇಕು. ಅವರನ್ನು ತಮಾಷೆಯಾಗಿರುವಂತೆ ನೋಡಿಕೊಳ್ಳಬೇಕು. ಪ್ರಾಣಿಗಳು ಹಾಗೂ ಸಂಗೀತದ ಸಹಾಯದಿಂದ ಅವರು ಸದಾ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳಬೇಕು. ಓದಿನ ವಿಚಾರಕ್ಕೆ ಸಂಬಂಧಿಸಿದಂತೆ ಬಲವಂತ ಮಾಡಬಾರದು ಎಂದು ಅವರು ಹೇಳಿದರು.

ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಬೇಕು
ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪರವಾಗಿ ಬಂದಿದ್ದ ಡಾ.ರಜನಿ, ಆಟಿಸಂ ಸಮಸ್ಯೆ ಇರುವ ಮಕ್ಕಳನ್ನು ಗ್ರಾಮೀಣ ಭಾಗದಲ್ಲಿ ಮೊದಲಿಗೆ ಪ್ರಾಥಮಿಕ ಕೇಂದ್ರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲಿಂದ ತಾಲೂಕು, ಆ ನಂತರ ಜಿಲ್ಲಾಸ್ಪತ್ರೆಗೆ ಕರೆತರುತ್ತಾರೆ. ಸದಾ ಗಿಜಿಗುಡುವ ಜಿಲ್ಲಾಸ್ಪತ್ರೆಯಲ್ಲಿ ಇಂಥ ಮಕ್ಕಳಿಗೆ ಚಿಕಿತ್ಸೆ ಸಾಧ್ಯವಿಲ್ಲ. ಅದಕ್ಕೆಂತಲೇ ಪ್ರತ್ಯೇಕ ವ್ಯವಸ್ಥೆ ಮಾಡುವ ಆಲೋಚನೆ ಸರಕಾರಕ್ಕೆ ಇದೆ ಎಂದರು.

ಸರಕಾರದ ನೆರವು ಬೇಕು
ವೈದ್ಯರಾದ ಜೀಸನ್ ಉನ್ನಿ, ಆಟಿಸಂ ಚಿಕಿತ್ಸೆಗಾಗಿ ಸರಕಾರದಿಂದ ಹೆಚ್ಚಿನ ನೆರವು ಬೇಕಿದೆ. ಇನ್ನು ಭಾರತದ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ಪ್ರತಿ ಮಗುವೂ ಭಿನ್ನ. ಆ ದೇವರ ಸೃಷ್ಟಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸ್ಟ್ಯಾಂಡರ್ಡ್ ಇದೆ. ಈ ಸಮಾಜ ಸೃಷ್ಟಿ ಮಾಡಿದ ಸ್ಟ್ಯಾಂಡರ್ಡ್ ಬೇರೆ, ಆ ದೇವರ ಸ್ಟ್ಯಾಂಡರ್ಡ್ ಬೇರೆ. ಆ ಮಕ್ಕಳಿಂದಲೂ ನಾವು ಕಲಿಯುವುದು ಸಾಕಷ್ಟಿದೆ ಎಂದು ಹೇಳಿದರು.

ಪೋಷಕರು ಹೆಮ್ಮೆ ಪಡಬೇಕು
ಸಣ್ಣ-ಸಣ್ಣ ಕುಟುಂಬಗಳು, ಮೊಬೈಲ್ ಫೋನ್, ಟಿ.ವಿ ಇವುಗಳಿಂದೆಲ್ಲ ಕಮ್ಯುನಿಕೇಷನ್ ಗ್ಯಾಪ್ ಬಂದಿದೆ. ಆಟಿಸಂಗೆ ನಾವು ಕಂಡುಕೊಳ್ಳುವ ಪರಿಹಾರಕ್ಕೆ ಇವೆಲ್ಲ ಅಡ್ಡಿಗಳಾಗಿವೆ. ಆಟಿಸಂ ಮಕ್ಕಳ ಪೋಷಕರು ತಮ್ಮ ಮಕ್ಕಳ ಬಗ್ಗೆ ಪ್ರೀತಿ- ಹೆಮ್ಮೆ ಇಟ್ಟುಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಸಂಪೂರ್ಣ ಗುಣವಾದ ಮಕ್ಕಳಿದ್ದಾರೆ
ಆಟಿಸಂನ ಚಿಕಿತ್ಸಾ ಕೇಂದ್ರದ ಉಸ್ತುವಾರಿ ವಹಿಸಿರುವ ಸುಷ್ಮಾ ಒನ್ಇಂಡಿಯಾ ಕನ್ನಡ ಜತೆ ಮಾತನಾಡಿ, ಆಟಿಸಂ ಇರುವ ಮಕ್ಕಳಿಗೆ ಪ್ರತಿಯೊಬ್ಬರಿಗೂ ಪ್ರತ್ಯೇಕ ತರಬೇತುದಾರರು ಬೇಕಾಗುತ್ತಾರೆ. ದಿನಕ್ಕೆ ಐದು ಗಂಟೆಯಂತೆ ವಾರದಲ್ಲಿ ಐದು ದಿನ ತರಬೇತಿ ಬೇಕಾಗುತ್ತದೆ. ನಮ್ಮ ಕೇಂದ್ರದಲ್ಲಿ ಹಲವರಿಗೆ ಈ ಸಮಸ್ಯೆ ಸಂಪೂರ್ಣ ನಿವಾರಣೆ ಆಗಿದೆ. ಆದರೆ ಗಂಭೀರವಾದ ಸಮಸ್ಯೆ ಇದ್ದರೆ ಅದನ್ನು ನಿಭಾಯಿಸಬೇಕಾಗುತ್ತದೆ. ಪ್ರಮಾಣ ಕಡಿಮೆ ಇದ್ದರೆ ಸಂಪೂರ್ಣ ಗುಣಮುಖರಾಗಿ ಮಾಡಬಹುದು. ನಮ್ಮ ಕೇಂದ್ರದಲ್ಲಿ ಈ ಸಮಸ್ಯೆ ಹಲವರಿಗೆ ನಿವಾರಣೆ ಆಗಿದೆ ಎಂದರು.












Click it and Unblock the Notifications