ನರೇಂದ್ರ ಮೋದಿ ವಿರುದ್ಧ ಬೆಂಗ್ಳೂರಲ್ಲಿ ಗುಡುಗಿದ ಅರವಿಂದ
ಬೆಂಗಳೂರು, ಫೆಬ್ರವರಿ, 01: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರದ ನೀತಿ ಮತ್ತು ನರೇಂದ್ರ ಮೋದಿ ಅವರ ಮೇಲೆ ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಆಟೋ ಚಾಲಕರಿಗೆ ವಿದ್ಯಾಭ್ಯಾಸ ಕಡ್ಡಾಯ ನಿಯಮ ಹಿಂತೆಗೆಯುವಂತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಡ ಹೇರಲಾಗುವುದು. ಆಟೋ ಪರವಾನಗಿ ಪಡೆಯಲು 8ನೇ ತರಗತಿ ಕಡ್ಡಾಯ ಮಾಡುವ ಮೂಲಕ ಅವರಲ್ಲಿನ ಕೌಶಲ್ಯವನ್ನು ಕಿತ್ತುಕೊಂಡು ನಿರುದ್ಯೋಗಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.[ಮೋದಿ ತಪ್ಪು ಒಪ್ಪಿಕೊಂಡ್ರೆ ಕ್ಷಮೆ ಕೇಳುತ್ತೇನೆ ಎಂದ ಕೇಜ್ರಿವಾಲ್]
ಭಾನುವಾರ ಆಮ್ ಆದ್ಮಿ ಪಾರ್ಟಿ ನಗರದ ಸೆಂಟ್ ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್, ಕೇಂದ್ರ ಸರ್ಕಾರವು ಒಂದೆಡೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೌಶಲ್ಯ ತರಬೇತಿ ನೀಡುತ್ತೇನೆ ಎಂದು ಹೇಳುತ್ತಿದೆ. ಮತ್ತೊಂದೆಡೆ ಕೌಶಲ್ಯವುಳ್ಳ ಆಟೋ ಚಾಲಕರಿಗೆ 8ನೇ ತರಗತಿ ಕಡ್ಡಾಯ ಮಾಡಿ ಅವರ ಹಕ್ಕು ಕಸಿದುಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಆಮ್ ಆದ್ಮಿಯ ಪ್ರಮುಖರು ಭಾಗಿ
ಬೆಂಗಳೂರಿನ ಸುಮಾರು 3 ಸಾವಿರಕ್ಕೂ ಅಧಿಕ ಆಟೋ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪಕ್ಷದ ರಾಜ್ಯ ಸಂಚಾಲಕ ಪೃಥ್ವಿರೆಡ್ಡಿ, ಸಹ ಸಂಚಾಲಕರಾದ ರವಿಕೃಷ್ಣಾ ರೆಡ್ಡಿ, ಶಿವಕುಮಾರ್ ಸೇರಿದಂತೆ ವಿವಿಧ ಆಟೋ ಸಂಘಟನೆಗಳ ಮುಖಂಡರು, ಆಟೋ ಚಾಲಕರು ಭಾಗವಹಿಸಿದ್ದರು.

ನಕಲಿ ಪ್ರಮಾಣ ಪತ್ರಕ್ಕೆ ಪ್ರಚೋದನೆ
ವಿದ್ಯಾಭ್ಯಾಸ ಕಡ್ಡಾಯ ಮಾಡಿರುವುದು ನಕಲಿ ಪ್ರಮಾಣ ಪತ್ರ ಪಡೆಯಲು ಕಾರಣವಾಗುವುದಲ್ಲದೇ ಸರ್ಕಾರವೇ ನಿರುದ್ಯೋಗ ಸೃಷ್ಟಿಗೆ ಪರೋಕ್ಷ ಕಾರಣವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಗಂಭೀರ ಆರೋಪ ಮಾಡಿದರು.

ಗಡ್ಕರಿಯೊಂದಿಗೆ ಮಾತು
ನಿಯಮ ಅವೈಜ್ಞಾನಿಕವಾಗಿದ್ದು ಕೇಂದ್ರ ಸಾರಿಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಅಲ್ಲದೇ ನಿಯಮವನ್ನು ಹಿಂಪಡೆಯಲು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.

8ನೇ ತರಗತಿ ಪ್ರಮಾಣ ಪತ್ರ ಮಾನದಂಡವೇನು?
8ನೇ ತರಗತಿ ಪ್ರಮಾಣ ಪತ್ರವನ್ನು ಆಟೋ ಚಾಲಕರು ಎಲ್ಲಿಂದ ತರುತ್ತಾರೆ? ಎಂದು ಪ್ರಶ್ನಿಸಿದ ಕೇಜ್ರಿವಾಲ್, ನನ್ನ ಬಳಿಯೂ 8ನೇ ತರಗತಿ ಪ್ರಮಾಣ ಪತ್ರ ಇಲ್ಲ. ಪದವಿ ಪ್ರಮಾಣ ಪತ್ರವನ್ನು ಹೊಂದಿದ್ದೇನೆ. ದೇಶದ ಯಾವುದೇ ಪ್ರಜೆಯ ಬಳಿಯೂ 8ನೇ ತರಗತಿ ಪ್ರಮಾಣ ಪತ್ರ ಇರುವುದಿಲ್ಲ ಎಂಬ ಸಂಗತಿ ಸರ್ಕಾರಕ್ಕೆ ಗೊತ್ತಿಲ್ಲವೇ ಎಂದು ಕೇಳಿದರು.

ಕಾರ್ಮಿಕರ ಪರ ನೀತಿ ರೂಪಿಸಿ
ಸುಮ್ಮನೆ ಇಲ್ಲದ ಕಾರ್ಯಕ್ರಮ ಹಾಕಿಕೊಂಡು ಸಮಯ ವ್ಯರ್ಥ ಮಾಡುವ ಬದಲು ಕಾರ್ಮಿಕರ ಪರವಾದ ನೀತಿ ರೂಪಣೆಗೆ ಕೇಂದ್ರ ಸರ್ಕಾರ ಒತ್ತು ನೀಡಬೇಕು ಎಂದು ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದರು.












Click it and Unblock the Notifications