ಮೆಟ್ರೋ ವಿರುದ್ಧ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪ್ರತಿಭಟನೆ
ಆನೇಕಲ್, ನ.21: ಬೆಂಗಳೂರು-ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿಸಿರುವ 'ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ಸಗಟು ಮಳಿಗೆ ಎದುರು ಆನೇಕಲ್ ತಾಲೂಕು ವರ್ತಕರ ಸಂಘದವರು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಸ್ವದೇಶಿ ಜಾಗರಣ ಮಂಚ್ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್, 'ತಾಲೂಕಿನಲ್ಲಿ ಚಿಲ್ಲರೆ ವ್ಯಾಪಾರವನ್ನೇ ನಂಬಿರುವ ಅಂಗಡಿಗಳು ಸಾವಿರಾರು ಸಂಖ್ಯೆಯಲ್ಲಿದ್ದು, ಬಹು ಕಾಲದಿಂದ ಇದೇ ವ್ಯಾಪಾರ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೆಟ್ರೋ ಮಾರುಕಟ್ಟೆಯವರು ಅತಿ ಕಡಿಮೆ ಬೆಲೆಯಲ್ಲಿ ಸಾಮಗ್ರಿ ಮಾರುವ ನೆಪದಲ್ಲಿ ಸಾರ್ವಜನಿಕರಿಗೆ ಮೋಸ ಮಾಡಲು ಹೊರಟಿದ್ದಾರೆ'ಎಂದು ದೂರಿದರು.
ವರ್ತಕರ ಸಂಘದ ಪ್ರತಿನಿಧಿಗಳು, ರಾಷ್ಟ್ರೀಯ ಕಿಸಾನ್ ಸಂಘದ ಕಾರ್ಯಕರ್ತರು ಕೋನಪ್ಪನ ಅಗ್ರಹಾರ, ಚಂದಾಪುರ, ಅತ್ತಿಬೆಲೆ, ಹುಸ್ಕೂರು, ವೀರಸಂದ್ರ, ರಾಜಾಪುರ ಸೇರಿದಂತೆ ಸ್ಥಳೀಯರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೆಟ್ರೋಗೆ ಮತ್ತೆ ಪ್ರತಿಭಟನೆ ಭೀತಿ: ದಿನಕ್ಕೆ 20 ಕೋಟಿ ಸಂಪಾದಿಸುತ್ತಿದ್ದ ಬೆಂಗಳೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಸ್ಥೆ(APMC) ಮೇಲೆ ಮೆಟ್ರೋ ಎಂಬ ಜರ್ಮನಿಯ ದೈತ್ಯ ಹೋಲ್ ಸೇಲ್ ಸಂಸ್ಥೆ ಸವಾರಿ ಮಾಡತೊಡಗಿದ್ದನ್ನು ವರ್ತಕರ ಕಾರ್ಯ ಸಮಿತಿ ಖಂಡಿಸಿ ಭಾರಿ ಪ್ರತಿಭಟನೆ ನಡೆಸಿತ್ತು. ಈ ಘಟನೆ ನಡೆದು ದಶಕವಾದರೂ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಗೆ ತೊಂದರೆ ತಪ್ಪಿಲ್ಲ.
ಯಶವಂತಪುರ, ಕನಕಪುರ ರಸ್ತೆ ನಂತರ ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೆಟ್ರೋ ತನ್ನ ಮಳಿಗೆ ನಿರ್ಮಿಸುತ್ತಿದೆ. ಅಂದು 176 ಕೋಟಿ ಹೂಡಿಕೆ ಮಾಡುತ್ತಾ ಬೆಂಗಳೂರಿಗೆ ಕಾಲಿಟ್ಟದ್ದ ಮೆಟ್ರೋ ಭಾರತದಲ್ಲಿ ಒಟ್ಟಾರೆ 1,400 ಕೋಟಿ ರು ಹೂಡಿಕೆ ಮಾಡಿದೆ. ಭಾರತದಲ್ಲಿ 15ಕ್ಕೂ ಅಧಿಕ ಮಳಿಗೆ ಹೊಂದಿರುವ ಜರ್ಮನಿಯ ಹೋಲ್ ಸೇಲ್ ಕಂಪನಿ ಯ ಮೌಲ್ಯ ಸುಮಾರು 32 ಬಿಲಿಯನ್ ಯುರೋ ದಾಟುತ್ತದೆ.
ಎಲೆಕ್ಟ್ರಾನಿಕ್ ಸಿಟಿ ಸಮಸ್ಯೆ ಏನು? : 2 ರಿಂದ 3 ಲಕ್ಷ ಆದಾಯ ಹೊಂದಿರುವ ಸಣ್ಣ ವ್ಯಾಪಾರಿಗಳನ್ನು ಮೆಟ್ರೋ ಟಾರ್ಗೆಟ್ ಮಾಡಿಕೊಂಡಿದೆ. 50,000 ಚ.ಅ ವಿಸ್ತೀರ್ಣದ ಮಾರಾಟ ಮಳಿಗೆ, ಶೇಖರಣಾ ಘಟಕ(8 ರಿಂದ 10 ಸಾವಿರ) ಕೂಡಾ ಕಡಿಮೆ ವ್ಯಾಪ್ತಿ ಹೊಂದಿದೆ. ಸ್ಟಾರ್ ಹೋಟೆಲ್ ಗಳು, ಸಣ್ಣ ಉದ್ದಿಮೆದಾರರು ಹಾಗೂ ಸ್ಥಳೀಯ ಐಟಿ ಕಾರ್ಪೊರೇಟ್ ಕಚೇರಿಗಳನ್ನು ಮೆಟ್ರೋ ನಂಬಿಕೊಂಡಿದೆ. ಹೀಗಾಗಿ ಇದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ ಎಂದು ಪ್ರತಿಭಟನೆ ನಡೆಸಲಾಗಿದೆ.












Click it and Unblock the Notifications