ಕೇಂದ್ರ ಹಾಗೂ ರಾಜ್ಯದ ಸಂಪರ್ಕ ಕೊಂಡಿಯಂತಿದ್ದ 'ಅನಂತಕುಮಾರ್' ಪ್ರಥಮ ಪುಣ್ಯಸ್ಮರಣೆ
ಕೇಂದ್ರ ಸಚಿವರಾಗಿದ್ದ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದ ದಿವಂಗತ ಅನಂತಕುಮಾರ್ ರವರ ಪ್ರಥಮ ಪುಣ್ಯಸ್ಮರಣೆ ಇಂದು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ 2018 ನವೆಂಬರ್ 12ರಂದು ಕೊನೆಯುಸಿರೆಳೆದರು.
ಒಟ್ಟು ಆರು ಬಾರಿ ಸಂಸದರಾಗಿದ್ದ ಅನಂತಕುಮಾರ್ ರವರು ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಸಂಸದೀಯ ವ್ಯವಹಾರ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನಿಭಾಯಿಸಿದ್ದರು. ಈ ಹಿಂದೆ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರ ನೀಲಿ ಕಂಗಳ ಹುಡುಗನಂತಿದ್ದ ಅನಂತಕುಮಾರ್, ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿದ್ದರು.

ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪ ಜೊತೆಗೂಡಿ ಪಕ್ಷ ಕಟ್ಟಿ ಬೆಳೆಸಿದ್ದಲ್ಲದೇ,ರಾಷ್ಟ್ರಮಟ್ಟದಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಅನಂತಕುಮಾರ್ ರವರು ಎಲ್ಲ ಪಕ್ಷದ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿದ್ದವರಾಗಿದ್ದರು. ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ 'ಅದಮ್ಯ ಚೇತನ' ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಇದೀಗ ತೇಜಸ್ವಿಸೂರ್ಯ ಪ್ರತಿನಿಧಿಸುತ್ತಿದ್ದಾರೆ.












Click it and Unblock the Notifications