ಅನಂತ್ ಕುಮಾರ್ ವಿರುದ್ಧ ಐಟಿ ದಿಗ್ಗಜರು ಕಣಕ್ಕೆ?
ಬೆಂಗಳೂರು, ಡಿ. 13 : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಪ್ರಬಲ ಪೈಪೋಟಿ ಎದುರಿಸಬೇಕಾಗುತ್ತದೆ. ಅನಂತ್ ಕುಮಾರ್ ವಿರುದ್ಧ ದಿಗ್ಗಜರನ್ನು ಕಣಕ್ಕಿಳಿಸಲು ಇತರೆ ಪಕ್ಷಗಳು ತೀರ್ಮಾನಿಸಿವೆ. ಎಲ್ಲವೂ ಅಂದುಕೊಂಡಂತೆ ಆದರೆ, ನಂದನ್ ನಿಲೇಕಣಿ ಮತ್ತು ಮೋಹನ್ ದಾಸ್ ಪೈ ಅನಂತ್ ಕುಮಾರ್ ಎದುರಾಳಿಯಾಗಲಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಂದನ್ ನಿಲೇಕಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯಲಿದೆ ಎಂಬುದು ರಾಜ್ಯ ರಾಜಕೀಯ ವಲಯದಲ್ಲಿ ಹಳೆಯ ಸುದ್ದಿ. ಸದ್ಯ ದೆಹಲಿಯಲ್ಲಿ ಜಯಭೇರಿ ಬಾರಿಸಿದ ಆಮ್ ಆದ್ಮಿ ಪಕ್ಷ ಮೋಹನ್ ದಾಸ್ ಪೈ ಅವರನ್ನು ಈ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲು ಸಜ್ಜಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ ಅನಂತ್ ಕುಮಾರ್ ಗೆಲುವಿಗಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. (ಚುನಾವಣೆಯತ್ತ ಮುಖ ಮಾಡಿದ ಆಧಾರ್ ನಿಲೇಕಣಿ)

ಹಾಲಿ ಸಂಸದರಿಗೆ ಟಿಕೆಟ್ ಎಂಬ ಮಾತನ್ನು ಬಿಜೆಪಿ ಆಡುತ್ತಿದೆ. ಆದ್ದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅನಂತ್ ಕುಮಾರ್ ಕಣಕ್ಕಿಳಿಯುವುದು ಖಚಿತವಾಗಿದೆ. ಅನಂತ್ ಕುಮಾರ್ ಅವರನ್ನು ಸೋಲಿಸಲು ಪಣ ತೊಟ್ಟಿರುವ ಕಾಂಗ್ರೆಸ್ ನಂದನ್ ನಿಲೇಕಣಿ ಅವರನ್ನು ಪ್ರತಿಸ್ಪರ್ಧಿಯಾಗಿಸಲು ತೀರ್ಮಾನಿಸಿದೆ. ಸದ್ಯ ಆಮ್ ಆದ್ಮಿ ಪಕ್ಷ ಸಹ ಅನಂತ್ ಕುಮಾರ್ ವಿರುದ್ಧ ಮೋಹನ್ ದಾಸ್ ಪೈ ಕಣಕ್ಕಿಳಿಸಲು ಚಿಂತನೆ ನಡೆಸಿದೆ. (ಪ್ರಧಾನಿ ಅಭ್ಯರ್ಥಿ: ತೇಲಿ ಬಂತೊಂದು ಅಚ್ಚರಿಯ ಹೆಸರು?)
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಹೆಚ್ಚಾಗಿದ್ದಾರೆ ಮತ್ತು ಐಟಿ ಕಂಪನಿಗಳಿವೆ. ಈ ಕ್ಷೇತ್ರದಲ್ಲಿ ಐಟಿ ದಿಗ್ಗಜರನ್ನು ಕಣಕ್ಕೆ ಇಳಿಸಿದರೆ ಗೆಲುವು ಸಾಧಿಸಬಹುದು ಎಂಬುದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ಲೆಕ್ಕಾಚಾರ. ಜೆಡಿಎಸ್ ಪಕ್ಷಮಾತ್ರ ಇನ್ನೂ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಜೆಡಿಎಸ್ ಅಭ್ಯರ್ಥಿಯೂ ಘೋಷಣೆಯಾದರೆ, ಅನಂತ್ ಕುಮಾರ ಪ್ರತಿಸ್ಪರ್ಧಿಗಳು ಯಾರು ಎಂದು ತಿಳಿಯಲಿದೆ.












Click it and Unblock the Notifications