ಅನಂತ್ಕುಮಾರ್ ಅಗಲಿಗೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ: ಎಚ್ಡಿಕೆ
ಬೆಂಗಳೂರು, ನವೆಂಬರ್ 12: ಅನಾರೋಗ್ಯದ ಕಾರಣದಿಂದ ವಿಶ್ರಾಂತಿಯಲ್ಲಿದ್ದ ಕುಮಾರಸ್ವಾಮಿ ಅವರು ಸಂಜೆ ವೇಳೆಗೆ ಬಂದು ಅಗಲಿದ ರಾಜಕೀಯ ಮಿತ್ರ ಅನಂತ್ಕುಮಾರ್ ಅವರ ಅಂತಿಮ ದರ್ಶನ ಪಡೆದರು.
4 ಗಂಟೆಗೆ ವೇಳೆಗೆ ಅನಂತ್ಕುಮಾರ್ ಅವರ ನಿವಾಸಕ್ಕೆ ಬಂದು ಅಂತಿಮ ದರ್ಶನ ಪಡೆದ ಸಿಎಂ, ಅನಂತ್ಕುಮಾರ್ ಅವರ ಕುಟುಂಬದರೊಡನೆ ಮಾತನಾಡಿ ಧೈರ್ಯ ತುಂಬಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅನಂತ್ಕುಮಾರ್ ಅವರು ನನ್ನ ಆತ್ಮೀಯರಾಗಿದ್ದರು, ಇಷ್ಟು ಬೇಗ ನಿಧನರಾಗುತ್ತಾರೆಂದು ನಾನು ಎಣಿಸಿರಲಿಲ್ಲ ಎಂದು ಅವರು ಹೇಳಿದರು.
ಅನಂತ್ಕುಮಾರ್ ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದ ಅವರು, ಅನಂತ್ಕುಮಾರ್ ಪಕ್ಷಾತೀತವಾಗಿ ಉತ್ತಮ ಬಾಂದವ್ಯ ಹೊಂದಿದ್ದರು ಎಂದರು.
ಜವರಾಯ ಕರೆದಾಗ ಎಲ್ಲರೂ ಹೋಗಲೇಬೇಕು, ಕಾಲನ ಕರೆಗೆ ಹೊರತಾದವರು ಯಾರೂ ಇಲ್ಲ ಎಂದು ಹೇಳಿದ ಕುಮಾರಸ್ವಾಮಿ, ಅನಂತ್ಕುಮಾರ್ ಅವರ ಅಗಲಿಕೆಯ ನೋವನ್ನು ತುಂಬುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ ಎಂದರು.
ಕುಮಾರಸ್ವಾಮಿ ಅವರ ಜೊತೆ ಡಿ.ಕೆ.ಶಿವಕುಮಾರ್, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಇದ್ದರು.