ಮೂವರ ಸಾವಿಗೆ ಕಾರಣವಾದ ನಿರುದ್ಯೋಗಿಯ ಕುಡಿತದ ಚಟ
ಬೆಂಗಳೂರು, ಫೆಬ್ರವರಿ 28 : ವ್ಯಕ್ತಿಯೊಬ್ಬ ಆರ್ಥಿಕ ಸಂಕಷ್ಟ ಮತ್ತು ಕುಟುಂಬ ಕಲಹದಿಂದ ಎರಡು ವರ್ಷದ ಪುಟ್ಟ ಮಗಳಿಗೂ, ಪತ್ನಿಗೂ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಯಲಹಂಕ ನ್ಯೂಟೌನ್ ನ ಸೋಮೇಶ್ವರನಗರದಲ್ಲಿ ನಡೆದಿದೆ. ಬಿಹಾರ ಮೂಲದ ಎಂ.ಟೆಕ್ ಪದವಿಧರನಾದ್ದ ಅಮಿತ್ ಕುಮಾರ್ ಝಾ(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಪತ್ನಿ ಮೀನಾಕ್ಷಿ ಝಾ(30) ಹಾಗೂ ಮಗಳು ಮಾನ್ಯ ಜೊತೆ ಸೋಮೇಶ್ವರ ನಗರದಲ್ಲಿ ವಾಸವಿದ್ದ ಈತ ಖಾಸಗಿ ಕಂಪನಿಯೊಂದರಲ್ಲಿ ಒಂದೂವರೆ ವರ್ಷದ ಹಿಂದೆ ಕೆಲಸ ಬಿಟ್ಟು ನಿರುದ್ಯೋಗಿಯಾಗಿದ್ದ. ಈ ಮಧ್ಯೆ ಕುಡಿತದ ಚಟಕ್ಕೂ ದಾಸನಾಗಿದ್ದ. ತಾವೂ ಎಂಟೆಕ್ ಪದವಿಧರೆಯಾಗಿದ್ದ ಪತ್ನಿ ಮೀನಾಕ್ಷಿಯೇ ಯಲಹಂಕದ ಡೈರಿ ಸರ್ಕಲ್ ನ ಪ್ಲೇಹೋಂ ಒಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದರು.[ವಿಟ್ಲ : ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು]

ಮನೆಯಲ್ಲಿ ಸದಾ ಜಳಕ್ಕೆ ಕಾರಣವಾಗುತ್ತಿದ್ದುದು ಪತಿಯ ಕುಡಿತದ ಚಟ. ಇದೇ ಕಾರಣಕ್ಕಾಗಿಯೇ ಕುಟುಂಬವೂ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ದಂಪತಿಗಳ ಮಧ್ಯೆ ನಡೆಯುತ್ತಿದ್ದ ಜಗಳಕ್ಕೆ ಎರಡೂ ಕುಟುಂಬದ ಹಿರಿಯರೂ ಆಗಾಗ ರಾಜೀಸಂಧಾನ ಮಾಡುತ್ತಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಜಗಳ ಕೊನೆಗೆ ಮೂವರ ದುರಂತ ಮರಣದೊಂದಿಗೆ ಕೊನೆಯಾಗಿರುವುದು ಶೋಚನೀಯ.
ಅಲ್ಲಿ ನಡೆದಿದ್ದೇನು?
ಶಿಕ್ಷಕಿಯಾಗಿದ್ದ ಮೀನಾಕ್ಷಿ ಝಾ, ಸೋಮವಾರ ಶಾಲೆಗೆ ಬಾರದಿದ್ದ ಕಾರಣ ಪ್ಲೇಂ ಹೋಂನಿಂದ ಅವರಿಗೆ ಫೋನ್ ಮಾಡಲಾಗಿದೆ. ಆದರೆ ಅವರು ಫೋನ್ ತೆಗೆದಿಲ್ಲ. ಶಾಲೆಗೆ ರಜಾ ಹಾಕುತ್ತಿದ್ದೇನೆ ಎಂದೂ ತಿಳಿಸಿಲ್ಲ. ಸಂಜೆ ಅವರ ಮನೆಯ ಬಳಿ ಬಂದ ಸ್ಕೂಲಿನ ಆಯಾ ಮನೆಯ ಒಳಗಡೆಯಿಂದ ಬಾಗಿಲು ಹಾಕಿರುವುದನ್ನು ನೋಡಿ ಕರೆಗಂಟೆ ಒತ್ತಿದ್ದಾರೆ. ಎಷ್ಟೆ ಬಾರಿ ಕಾಲಿಂಗ್ ಬೆಲ್ ಮಾಡಿದರೂ ಅತ್ತೆಡೆಯಿಂದ ಪ್ರತಿಕ್ರಿಯೆ ಬಾರದಿರುವುದನ್ನು ನೋಡಿ ಅನುಮಾನ ಬಂದು ಮನೆಯ ಮಾಲೀಕರಿಗೆ ತಿಳಿಸಿದ್ದಾರೆ. ಮನೆಯ ಮಾಲೀಕರು ಬಂದು ಕಿಟಕಿ ಒಡೆದು ನೋಡಿದಾಗ ಅಮಿತ್ ಕುಮಾರ್ ನೇಣುಬಿಗಿದ ಸ್ಥಿತಿಯಲ್ಲಿದ್ದಿದ್ದು ಕಂಡುಬಂದಿದೆ.[ಕುಂದಾಪುರದ ವಂಡ್ಸೆ ಚಕ್ರ ನದಿಗೆ ಹಾರಿ ಯುವತಿ ಆತ್ಮಹತ್ಯೆ]
ಗಾಬರಿಗೊಂಡ ಮಾಲೀಕರು ಪೊಲೀಸರನ್ನು ಕರೆಸಿದಾಗ ಮೂವರೂ ಅಸುನೀಗಿದ್ದು ಗೊತ್ತಾಗಿದೆ. ಭಾನುವಾರ ರಾತ್ರಿ ಅವರ ಮನೆಯಿಂದ ಚೀರಾಟದ ಸದ್ದು ಕೇಳಿದ್ದಾಗಿ ನೆರೆಹೊರೆಯವರನ್ನು ತಿಳಿಸಿದ್ದಾರೆ. ಗಂಡ ಹೆಂಡತಿಯ ಮಧ್ಯೆ ಆಗಾಗ ಜಗಳವಾಗುತ್ತಿದ್ದ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಶವದೊಂದಿಗೆ ಯಾವುದೇ ಡೆತ್ ನೋಟ್ ದೊರಕಿದ ಬಗ್ಗೆ ಮಾಹಿತಿಯಿಲ್ಲ.
ಬಿಹಾರದಲ್ಲಿರುವ ಮೃತರ ಪಾಲಕರಿಗೆ ಮಾಹಿತಿ ನೀಡಲಾಗಿದೆ ಎಂದು ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ್ದ ಡಿಸಿಪಿ ಡಾ. ಹರ್ಷ ತಿಳಿಸಿದ್ದಾರೆ.












Click it and Unblock the Notifications