ಹಿಜಾಬ್ ವಿವಾದ: ಶಾಲೆಗಳಿಗೆ ಸಮವಸ್ತ್ರ, ಪುಸ್ತಕ ವಿತರಿಸಲು ಮುಂದಾದ ಬಿಬಿಎಂಪಿ
ಬೆಂಗಳೂರು, ಫೆಬ್ರವರಿ 8: ರಾಜ್ಯಾದ ಎಲ್ಲೆಡೆಯು ಇದೀಗ ಹಿಜಾಬ್ದೇ ಮಾತು. ಎಲ್ಲಾ ಶಾಲಾ ಕಾಲೇಜುಗಳನ್ನು ಸಮವಸ್ತ್ರ ಧರಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಲರ್ಟ್ ಆಗಿದೆ.
ಹಿಜಾಬ್ ವಿವಾದ ಬಿಬಿಎಂಪಿ ಶಾಲೆಗಳಲ್ಲಿ ತಲೆ ಎತ್ತದಂತೆ ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಹಿಂದೆ ಶಾಲೆಗಳಲ್ಲಿ ಸಮವಸ್ತ್ರ ವಿತರಿಸಲು ವಿಳಂಬವಾಗುತ್ತಿತ್ತು. ಆದರೆ ಈಗ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶೂ ವಿತರಿಸಲಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಎಲ್ಲಾ ಶಾಲಾ-ಕಾಲೇಜುಗಳಿಗೆ ವಿತರಣೆ ಮಾಡಲಾಗುತ್ತದೆ.
ಕಾಲೇಜು ಸಮವಸ್ತ್ರ ನಿಗದಿಪಡಿಸದಿದ್ದಲ್ಲಿ ಸಮರ್ಪಕ ಉಡುಪು ಧರಿಸಿ ವಿದ್ಯಾರ್ಥಿ-ವಿದ್ಯಾರ್ಥನಿಯರು ತರಗತಿಗಳಿಗೆ ಹೋಗಬೇಕು. ಯಾವುದೇ ಸಮುದಾಯದಿಂದ ಸಮಾನತೆ, ಐಕ್ಯತೆ ಜೊತೆ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವುದು ಬೇಡ ಎಂದು ಸರ್ಕಾರ ಹೇಳಿದೆ.

ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಏಕರೂಪದ ಸಮವಸ್ತ್ರ ಸಂಹಿತೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಪಿಯು ಕಾಲೇಜುಗಳಲ್ಲಿ ಅಲ್ಲಿನ ಆಡಳಿತ ಮಂಡಳಿ ಇಲ್ಲವೇ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಿರುವ ನಿಗದಿಪಡಿಸಿದ ಸಮವಸ್ತ್ರವೇ ಕಡ್ಡಾಯ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
ಉಡುಪಿಯಲ್ಲಿ ಶುರುವಾಗಿರುವ ಹಿಜಾಬ್ ಮತ್ತು ಕೇಸರಿ ಶಾಲುಗಳ ನಡುವಿನ ಕಿತ್ತಾಟದಿಂದಾಗಿ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.
ಪಾಲಿಕೆಯ ಶಾಲಾ ಕಾಲೇಜುಗಳಿಗೆ ಉಚಿತ ಯೂನಿಫಾರ್ಮ್, ಶೂ, ಸ್ವೆಟರ್ ಹಾಗೂ ಬುಕ್ಸ್ ನೀಡಲು ಮುಂದಾಗಿದೆ. ಬಹುತೇಕ ಬಾರಿ ಸಮವಸ್ತ್ರ ನೀಡಲು ಪಾಲಿಕೆ ವಿಳಂಬ ಮಾಡ್ತಿತ್ತು.
ಶೈಕ್ಷಣಿಕ ವರ್ಷ ಕೊನೆಯಲ್ಲಿಯೂ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗುತ್ತಿರಲಿಲ್ಲ. ಆದರೆ ಸರ್ಕಾರ ಸಮವಸ್ತ್ರ ಆದೇಶದ ಬೆನ್ನಲೆ ಎಚ್ಚರಗೊಂಡ ಬಿಬಿಎಂಪಿ ವಿದ್ಯಾರ್ಥಿಗಳ ಆಯ್ಕೆಯ ವಸ್ತ್ರಕ್ಕೆ ಅವಕಾಶ ನೀಡದೆ ಸಮವಸ್ತ್ರ ನೀಡಲು ಮುಂದಾಗಿದೆ.
ಸರ್ಕಾರದ ಆದೇಶ ಪ್ರಕಾರ, ರಾಜ್ಯದ ಎಲ್ಲ ಸರ್ಕಾರೀ ಶಾಲಾ ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸುವ ಮತ್ತು ಖಾಸಗಿ ಶಾಲೆಗಳಲ್ಲಿ ಅವುಗಳ ಆಡಳಿತ ಮಂಡಳಿಗಳು ಅಂತಿಮಗೊಳಿಸುವ ಸಮವಸ್ತ್ರಗಳೇ ಅಂತಿಮ.
ಬಿಬಿಎಂಪಿ ವ್ಯಾಪ್ತಿಯ 1-12 ನೇ ತರಗತಿವರೆಗಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ನೀಡಲಾಗುತ್ತಿದೆ. ಮುಂದಿನ ತಿಂಗಳ ಕೊನೆಯ ವೇಳೆಗೆ ಎಲ್ಲಾ ಶಾಲಾ ಕಾಲೇಜುಗಳಿಗೆ ಸಮವಸ್ತ್ರ ತಲುಪಿಸಲು ಪಾಲಿಕೆ ಗಮನ ಹರಿಸುತ್ತಿದೆ.
ಹಿಜಾಬ್-ಕೇಸರಿ ಶಾಲು ವಿವಾದ ಕೊನೆಗೊಳಿಸಲು ಏಕರೂಪದ ಸಮವಸ್ತ್ರ ಸಂಹಿತೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ ಹಿಜಾಬ್ ವಿವಾದಕ್ಕೆ ಕೊನೆಹಾಡುವ ಪ್ರಯತ್ನವಾಗಿ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕುರಿತಂತೆ ಒಂದು ಆದೇಶವನ್ನು ಹೊರಡಿಸಿದೆ.












Click it and Unblock the Notifications