ಬೆಂಗಳೂರು ಕೊಳಗೇರಿ ಪ್ರದೇಶದ 60 ಫಲಾನುಭವಿಗಳಿಗೆ 60 ಮನೆ ಹಸ್ತಾಂತರಿಸಿದ ಸಿಎಂ
ಬೆಂಗಳೂರು, ಏಪ್ರಿಲ್ 14: ಬೆಂಗಳೂರು ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯ ವಾರ್ಡ್ 45ರ ಪಟೇಲ್ ಭೈರಹನುಮಯ್ಯ ಕೊಳೆಗೇರಿಯ ಫಲಾನುಭವಿಗಳಿಗೆ ಬಹುಮಹಡಿಯಲ್ಲಿ ಕಟ್ಟಲಾಗಿರುವ 60 ಮನೆಗಳನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಚಾಲನೆ ನೀಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 131ನೇ ಜಯಂತೋತ್ಸವದ ಅಂಗವಾಗಿ ಬಿಬಿಎಂಪಿ ವತಿಯಿಂದ ಯಶವಂತಪುರದ ಸಂವಿಧಾನ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು 5.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 60 ಮನೆಗಳಿರುವ ಬಹುಮಹಡಿ ಕಟ್ಟಡವನ್ನು ಸಿಎಂ ಉದ್ಘಾಟಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಮನೆ ಬಾಗಿಲಿಗೆ ಸಂಚಾರ ಕಲಿಕಾ ಕೇಂದ್ರ
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಮಾತನಾಡಿ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಎಲ್ಲರಿಗೂ ಸಮಾನತೆ, ಬದುಕುವ ಅವಕಾಶಗಳು, ನಿಷ್ಪಕ್ಷಪಾತ ನ್ಯಾಯ ಸಿಗುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಪ್ರತಿಪಾದಿಸಿದ ಜ್ಞಾನಿಯಾಗಿದ್ದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಡೆದು ನಮ್ಮ ಸರ್ಕಾರ ದುರ್ಬಲ ವರ್ಗದವರನ್ನು ಸಬಲೀಕರಿಸಲು ಒತ್ತು ನೀಡುತ್ತದೆ ಎಂದರು.
ಮಲ್ಲೇಶ್ವರಂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು
ರಾಜ್ಯ ಸರ್ಕಾರವು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಮಲ್ಲೇಶ್ವರ ಕ್ಷೇತ್ರದಲ್ಲಿ ಇರುವ ಎಲ್ಲಾ 13 ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದರ ಜೊತೆಗೆ ಸಂಸದ ಡಿ.ವಿ ಸದಾನಂದ ಗೌಡರ ಒತ್ತಾಸೆಯಿಂದ ಜನೌಷಧಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಮತ್ತಿತರ ಕ್ರಮಗಳ ಮೂಲಕ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಉತ್ತಮಗೊಳಿಸಲಾಗಿದೆ. ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ಡಿಜಿಟಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಯೋಜಿಸಲಾಗುತ್ತದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.
ಒಟ್ಟು 60 ಮನೆಗಳಿರುವ ಕಟ್ಟಡ ನಿರ್ಮಾಣಕ್ಕೆ ಚಾಲನೆ
ಕರಿಮಂಡಿ ಕೊಳೆಗೇರಿಯಲ್ಲಿ 36 ಮನೆಗಳನ್ನು ಕಟ್ಟಲಾಗಿದೆ. ಯಶವಂತಪುರ ಮಾರುಕಟ್ಟೆ ಪಕ್ಕದ ಸರ್ದಾರ್ ವಲ್ಲಭಬಾಯಿ ಪಟೇಲ್ ಕೊಳೆಗೇರಿ ಪ್ರದೇಶದಲ್ಲಿ 35 ಮನೆಗಳನ್ನು ಕಟ್ಟಲಾಗಿದೆ. ಸಿದ್ಧಾರ್ಥ ಕೊಳೆಗೇರಿಯಲ್ಲಿ 100 ಒಂಟಿ ಮನೆಗಳನ್ನು ಕಟ್ಟಲಾಗಿದೆ. ಎನ್ಎಚ್ ಕಾಲೋನಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳಿವೆ. ಈಗ ಪಟೇಲ್ ಭೈರಹನುಮಯ್ಯ ಕೊಳೆಗೇರಿಯಲ್ಲಿ 60 ಮನೆಗಳನ್ನು ಕಟ್ಟಲಾಗಿದ್ದು, ಇನ್ನೂ 60 ಮನೆಗಳಿರುವ ಕಟ್ಟಡ ನಿರ್ಮಾಣಕ್ಕೆ ಇಂದು ಚಾಲನೆ ಕೊಡಲಾಗಿದೆ.
ಭೂಮಿಯನ್ನು ದಾನವಾಗಿ ನೀಡಿದ ಬಾಬುರಿಗೆ ಸನ್ಮಾನ
ಪಟೇಲ್ ಭೈರಹನುಮಯ್ಯ ಕೊಳೆಗೇರಿ ಪ್ರದೇಶದಲ್ಲ್ಲಿ ಮನೆಗಳನ್ನು ನಿರ್ಮಿಸಲು ಬಿಬಿಎಂಪಿಗೆ 30 ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಜಾಗವನ್ನು ದಾನವಾಗಿ ಕೊಟ್ಟ ಬಾಬು ಮಹಾದೇವಪ್ರಸಾದ್ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಸಂಸದ ಡಿ.ವಿ.ಸದಾನಂದ ಗೌಡ ಸನ್ಮಾನಿಸಿದರು. ತದನಂತರ ಮಾತನಾಡಿದ ಅವರು, ಮಲ್ಲೇಶ್ವರಂ ಕ್ಷೇತ್ರದಲ್ಲಿ ಕೊಳೆಗೇರಿಗಳ ನಿರ್ಮೂಲನೆಗೆ ರಚನಾತ್ಮಕವಾಗಿ ನಡೆಯುತ್ತಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಎಲ್ಲಾ 224 ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಸಮಾಜದಲ್ಲಿ ನಿಜವಾದ ಪರಿವರ್ತನೆಯ ಕಾರ್ಯಗಳನ್ನು ಮಾಡಬೇಕು ಎಂದು ಆಶಿಸಿದರು.
ಇನ್ನೂ 60 ಮನೆಗಳ ಬಹುಮಹಡಿ ಕಟ್ಟಡಕ್ಕೆ ಮುಖ್ಯಮಂತ್ರಿ ಶಂಕುಸ್ಥಾಪನೆ
ಪಟೇಲ್ ಭೈರಹನುಮಯ್ಯ ಪ್ರದೇಶದಲ್ಲಿ ಇನ್ನೂ 60 ಮನೆಗಳ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಯಶವಂತಪುರ ಮೇಲ್ಸೇತುವೆ ಅಗಲೀಕರಣ, ಮೈಸೂರು ಲ್ಯಾಂಪ್ಸ್ ಹತ್ತಿರ ರೈಲ್ವೆ ಕೆಳಸೇತುವೆ, ಮಲ್ಲೇಶ್ವರ 18ನೇ ಕ್ರಾಸ್ ನಿರ್ಮಲಾ ರಾಣಿ ಶಾಲೆ ಹತ್ತಿರ ರೈಲ್ವೆ ಕೆಳಸೇತುವೆ ನಿರ್ಮಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ವೇಳೆ ಸಚಿವ ಮುನಿರತ್ನ, ಮುರುಗೇಶ ನಿರಾಣಿ, ಬಿಬಿಎಂಪಿ ಸದಸ್ಯ ಜೈಪಾಲ್, ಮಂಜುನಾಥ್, ಹೇಮಲತಾ ಸತೀಶ್, ಸುಮಂಗಲಾ ಕೇಶವ್, ಬಿಜೆಪಿ ಮಹಿಳಾ ಮಂಡಲದ ಕಾವೇರಿ ಕೇದಾರನಾಥ್, ನಾರಾಯಣಗೌಡ, ವೇಲು, ವೆಂಕಟೇಶ್, ಬಾಬು. ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್, ಎಂಜಿನಿಯರ್ ಗಳಾದ ಜಯಶಂಕರ್, ಸುಷ್ಮಾ ಮತ್ತಿತರರು ಹಾಜರಾಗಿದ್ದರು.