ಸ್ವಸಹಾಯ ಸಂಘಗಳ ಉತ್ಪನ್ನಕ್ಕೆ ಜಾಗತಿಕ ಮಾರುಕಟ್ಟೆ: ಅಮೆಜಾನ್ ಭರವಸೆ
ಬೆಂಗಳೂರು, ಅ. 07: ರಾಜ್ಯದಲ್ಲಿ ಸ್ವಸಹಾಯ ಗುಂಪುಗಳು ಉತ್ಪಾದಿಸುತ್ತಿರುವ ಉತ್ಪನ್ನಗಳ ಇ-ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅಮೆಜಾನ್ ಕಂಪನಿ ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದೆ. ಅಮೆಜಾನ್ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಲ್ಲಿ ರಾಜ್ಯದ ಗ್ರಾಮೀಣ ಭಾಗದ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಲಭ್ಯವಾಗಲಿದೆ.
ಅಮೆಜಾನ್ ಕಂಪನಿಯ ಸಾರ್ವಜನಿಕ ಕಾರ್ಯನೀತಿ ವಿಭಾಗದ ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ ಅವರು ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರ ಮನವಿಗೆ ಸ್ಪಂಧಿಸಿದ ಚೇತನ್ ಕೃಷ್ಣಸ್ವಾಮಿ ಅವರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸ್ವಸಹಾಯ ಗುಂಪುಗಳಿಗೆ ಅಮೆಜಾನ್, ಇ- ಮಾರುಕಟ್ಟೆ ವೇದಿಕೆಯನ್ನು ಒದಗಿಸಲಿದೆ. ಈ ಕುರಿತು ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು ಎಂದರು.
ಸ್ವಸಹಾಯ ಗುಂಪುಗಳಿಗೆ ಸಹಾಯ
ರಾಜ್ಯದಲ್ಲಿ ಸುಮಾರು 1.5 ಲಕ್ಷ ಸ್ವಸಹಾಯ ಗುಂಪುಗಳು ಇವೆ. ಇವುಗಳು ವಿವಿಧ ಉತ್ಪನ್ನಗಳ ತಯಾರಿಕೆ, ಸಿದ್ಧಪಡಿಸುವಿಕೆ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಈ ಉತ್ಪನ್ನಗಳಿಗೆ ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಗಳ ಮೂಲಕ ಮಾರಾಟಕ್ಕೆ ಅನುವು ಮಾಡಿಕೊಡುವುದು ಸೂಕ್ತ ಎಂದು ಅಶ್ವಥ್ ನಾರಾಯಣ ಅವರು ವಿಚಾರ ಪ್ರಸ್ತಾಪ ಮಾಡಿದ್ದರು.
ಭಾರತದಲ್ಲಿ ವಹಿವಾಟು ವಿಸ್ತರಣೆ
ಅಮೆಜಾನ್ ಕಂಪನಿಯ ಚೇತನ್ ಕೃಷ್ಣಸ್ವಾಮಿ ಅವರು ಮಾತನಾಡಿ, ಅಮೆಜಾನ್ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ಹೊಂದಿರುವುದಾಗಿ ತಿಳಿಸಿದರು. ಪೂರೈಕೆ ಸರಪಳಿ, ದಾಸ್ತಾನು ಘಟಕ ಮತ್ತಿತರ ವಿಭಾಗಗಳಲ್ಲಿ ಗ್ರಾಮೀಣ ಹಾಗೂ ಸ್ಥಳೀಯ ಯುವ ಜನತೆಗೆ ಹೆಚ್ಚಿನ ಉದ್ಯೋಗ ನೀಡುವ ಉದ್ದೇಶ ಹೊಂದಿದೆ. ಜೊತೆಗೆ ಸಂಸ್ಥೆಯ ಸಿಬ್ಬಂದಿಗೆ ಕಾಲಕಾಲಕ್ಕೆ ಕೌಶಲಾಭಿವೃದ್ಧಿ ತರಬೇತಿ ನೀಡಲು ಒತ್ತು ಕೊಡಲಾಗುತ್ತದೆ ಎಂದರು.
ಜಾಗತಿಕ ಮಾರುಕಟ್ಟೆ
ನಾವೀನ್ಯತೆಯನ್ನು ಪೋಷಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಭಾರತದ ವ್ಯಾಪಾರಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವ ಗುರಿಯನ್ನು ಅಮೆಜಾನ್ ಕಂಪನಿ ಹೊಂದಿದೆ. 10 ಲಕ್ಷ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿಯನ್ನೂ ಹೊಂದಲಾಗಿದೆ. ಇದರಿಂದ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜೊತೆಗೆ, ಭಾರತದ ಇ-ವಾಣಿಜ್ಯ ರಫ್ತು ಮೊತ್ತವು 2025 ರ ವೇಳೆಗೆ ಸುಮಾರು 75,000 ಕೋಟಿ ರೂಪಾಯಿಗಳಾಗಲಿದೆ ಎಂದು ತಿಳಿಸಿದರು.
Recommended Video
ಡಿಸಿಎಂ ಜೊತೆ ಮತ್ತೆ ಶೀಘ್ರ ಸಭೆ
ಮುಂದಿನ ಹಂತದಲ್ಲಿ ಆನ್ ಲೈನ್ ಮೂಲಕ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರ ಜೊತೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಇರುವ ಅಮೆಜಾನ್ ಕಂಪನಿಯ ಪ್ರಮುಖ ಅಧಿಕಾರಿಗಳ ಸಭೆ ನಡೆಸುವ ಉದ್ದೇಶ ಹೊಂದಿರುವುದಾಗಿಯೂ ಚೇತನ್ ಕೃಷ್ಣಸ್ವಾಮಿ ತಿಳಿಸಿದರು.