ರಾಜ್ಯ ಸಭೆ ಚುನಾವಣೆವರೆಗೆ ಗುಜರಾತ್ 'ಕೈ' ಶಾಸಕರು ಬೆಂಗ್ಳೂರಲ್ಲೇ?
ಗುಜರಾತ್ ನ ಕಾಂಗ್ರೆಸ್ ಶಾಸಕರು ಬಿಡದಿ ಬಳಿಯ ಈಗಲ್ ಟೌನ್ ರೆಸಾರ್ಟ್ ಗೆ ರವಾನೆ. ಗುಜರಾತ್ ನಲ್ಲಿ ಆಪರೇಷನ್ ಕಮಲ ಭೀತಿ ಆವರಿಸಿರುವುದರಿಂದ ಈ ಕ್ರಮ ಕೈಗೊಂಡ ಹೈಕಮಾಂಡ್.
ಬೆಂಗಳೂರು, ಜುಲೈ 29: ಗುಜರಾತ್ ನಲ್ಲಿ ಎದುರಾಗಿರುವ ಕುದುರೆ ವ್ಯಾಪಾರ ಭೀತಿಯಿಂದ ಪಾರಾಗಲು ಆ ರಾಜ್ಯದ ತನ್ನ 40 ಶಾಸಕರನ್ನು ಬೆಂಗಳೂರಿಗೆ ರವಾನಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯಸಭೆಯ ಚುನಾವಣೆ ಮುಗಿಯುವವರೆಗೂ ಅವರನ್ನು ಬೆಂಗಳೂರಿನಲ್ಲೇ ಇರುವಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಆಗಸ್ಟ್ 8ರಂದು ಗುಜರಾತ್ ನ ಮೂರು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಗುರುವಾರದಿಂದ ಶುಕ್ರವಾರದೊಳಗೆ 6 ಶಾಸಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿರುವುದರಿಂದ ಅಲ್ಲಿ ಭಾರೀ ಬಿಕ್ಕಟ್ಟು ಉಲ್ಬಣವಾದಂತಾಗಿದೆ. ಆರು ಜನರು ಕಾಂಗ್ರೆಸ್ ತೊರೆದಿರುವುದರಿಂದ ಅಲ್ಲಿ ಪಕ್ಷದ ಶಾಸಕರ ಸಂಖ್ಯೆ 51ಕ್ಕೆ ಇಳಿದಿದೆ.

ಅಲ್ಲದೆ, ಮತ್ತಷ್ಟು ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುವ ಭೀತಿ ಎದುರಾಗಿತ್ತಾದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಲ್ಪ ದಿನದ ಮಟ್ಟಿಗೆ ಎಲ್ಲಾ ತನ್ನ ಶಾಸಕರನ್ನು ಆ ಸನ್ನಿವೇಶದಿಂದ ದೂರವಿರಿಸಿ, ಬಿಜೆಪಿ ಸೇರುವ ಸಮೂಹ ಸನ್ನಿಯಿಂದ ಪಾರು ಮಾಡಲು ಕಾಂಗ್ರೆಸ್ ಉದ್ದೇಶಿಸಿದೆ.
ಹಾಗಾಗಿಯೇ, ಅವರೆಲ್ಲರನ್ನೂ ದೂರದ ಕರ್ನಾಟಕಕ್ಕೆ ರವಾನಿಸಲಾಗಿದೆ. ಗುಜರಾತ್ ಗೆ ಹತ್ತಿರುವಿರುವ ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಅಲ್ಲೇ ಇವರಿಗೆ ವ್ಯವಸ್ಥೆ ಮಾಡಬಹುದಾಗಿತ್ತು. ಆದರೆ, ಹತ್ತಿರದಲ್ಲಿ ಇರುವುದು ಬೇಡ ಎಂಬರ್ಥದಲ್ಲಿ ದೂರದ ಕರ್ನಾಟಕಕ್ಕೆ ಈ ಶಾಸಕರನ್ನು ಕಳುಹಿಸಲಾಗಿದೆ.












Click it and Unblock the Notifications