ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಬಹುದೊಡ್ಡ ಸಂಕಷ್ಟ..!
ಬೆಂಗಳೂರು, ಜನವರಿ 6: ಉಪ ಚುನಾವಣೆಯಲ್ಲಿ ಜಯಬೇರಿ ಬಾರಿಸಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಲು ತುದಿಗಾಲ ಮೇಲೆ ನಿಂತಿದ್ದವರಿಗೆ ಮತ್ತೊಂದು ಆಘಾತ ಎದುರಾಗಿದೆ.
ಹೌದು, ಉಪ ಚುನಾವಣೆ ಫಲಿತಾಂಶ ಬಂದು 1 ತಿಂಗಳಾದರು ಮಾಜಿ ಅನರ್ಹರಿಗೆ ಸಚಿವರಾಗುವ ಭಾಗ್ಯ ಮಾತ್ರ ಇನ್ನು ಕೂಡಿ ಬಂದಿಲ್ಲ. ಸೋಮವಾರ ಬೆಳಿಗ್ಗೆ, 'ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ' ಎಂದು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಕೆಲ ಮಾಜಿ ಅನರ್ಹ ಶಾಸಕರು ವಿಶ್ವಾಸವ್ಯಕ್ತಪಡಿಸಿದ್ದರು. ಆದರೆ ಸೋಮವಾರ ರಾಷ್ಟ್ರಮಟ್ಟದಲ್ಲಿ ನಡೆದ ಬೆಳವಣಿಗೆ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮೇಲೆ ಕರಿನೆರಳು ಬಿದ್ದಿದೆ.

ದೆಹಲಿ ಚುನಾವಣೆ
ಕೇಂದ್ರ ಚುನಾವಣಾ ಆಯೋಗ ದೆಹಲಿ ವಿಧಾನಸಭೆಗೆ ಇಂದು ಚುನಾವಣೆ ಘೋಷಣೆ ಮಾಡಿದೆ. ಆ ಪ್ರಕಾರ ಫೆಬ್ರುವರಿ 8 ರಂದು ಮತದಾನ ನಡೆಯಲಿದೆ. ಫೆಬ್ರುವರಿ 14 ರಂದು ಚುನಾವಣಾ ಫಲಿತಾಂಶ ಪ್ರಕಟಣೆಯಾಗಲಿದೆ. ಇದಕ್ಕೂ ಮುನ್ನ ಸೋಮವಾರ ಬಿ ಎಸ್ ಯಡಿಯೂರಪ್ಪ ಅವರು ಜ. 12 ರಂದು ಅಮಿತ್ ಷಾ ಅವರನ್ನು ಭೇಟಿಯಾಗಿ ಬಂದು ಸಂಪುಟ ವಿಸ್ತರಣೆ ಮಾಡಲಾಗುತ್ತೆ ಎಂದು ಹೇಳಿದ್ದರು. ಆದರೆ, ದೆಹಲಿ ಚುನಾವಣೆ ಘೋಷಣೆಯಾಗಿರುವುದರಿಂದ ಯಡಿಯೂರಪ್ಪ ಹಾಗೂ ಅಮಿತ್ ಷಾ ಭೇಟಿ ಅನುಮಾನ ಎಂದು ಹೇಳಲಾಗುತ್ತಿದೆ.

ಕಾಯ್ದು ಕುಳಿತ ಮಾಜಿ ಅನರ್ಹರು
ಪದೇ ಪದೇ ಸಚಿವ ಸಂಪುಟ ವಿಸ್ತರಣೆ ಮುಂದೆ ಹೋಗುತ್ತಿರುವುದಕ್ಕೆ ಮಾಜಿ ಅನರ್ಹ ಶಾಸಕರು ತೀವ್ರ ಅಸಮಾಧಾನಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಧನುರ್ಮಾಸ ಮುಗಿದ ಮೇಲೆ ಪಕ್ಕಾ ಎಂದು ಹೇಳುತ್ತಿದ್ದ ಬಿಜೆಪಿ ಮುಖಂಡರಿಗೆ ಈಗ ಮತ್ತೆ ಫಜೀತಿ ಎದುರಾಗಿದೆ. ಇತ್ತೀಚೆಗಿನ ಬೆಳವಣಿಗೆಗಳ ಪ್ರಕಾರ ದೆಹಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಸಚಿವ ಸಂಪುಟ ವಿಸ್ತರಣೆ ಖಾತ್ರಿಯಿಲ್ಲ ಎನ್ನಲಾಗಿದೆ.

ಸಂಕ್ರಾಂತಿಗೆ ಪಕ್ಕಾ ಎನ್ನುತ್ತಿದ್ದಾರೆ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಂಕ್ರಾಂತಿ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಬಹುದು ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ವಿಶ್ವಾಸವ್ಯಕ್ತಪಡಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಯಾವುದೇ ಊಹಾಪೋಹಗಳಿಗೆ ಇಲ್ಲಿ ಬೆಲೆ ಇಲ್ಲ. ಸಂಪುಟ ವಿಸ್ತರಣೆ ಯಾವಾಗ ಅಂತ ಸಿಎಂ ಅವ್ರೇ ಸ್ಪಷ್ಟಪಡಿಸುತ್ತಾರೆ. ಮೊಲಿನಿಂದಲೂ ಧನುರ್ಮಾಸ ಕಳೆದ ಮೇಲೆ ಮಾಡ್ತೀವಿ ಅಂದಿದ್ದಾರೆ. ಧನುರ್ಮಾಸ ಕಳೆದ್ಮೇಲೆ ಸಂಪು ವಿಸ್ತರಣೆ ಆಗಬಹುದು ಎಂದಿದ್ದಾರೆ.

ಮುಗಿಯದ ಗೋಳು
ಕಾಂಗ್ರೆಸ್ ಬಿಜೆಪಿ ಸಮ್ಮೀಶ್ರ ಸರ್ಕಾರದಲ್ಲಿ ಮುನಿಸಿಕೊಂಡು ೧೭ ಕಾಂಗ್ರೆಸ್ ಬಿಜೆಪಿ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡಿ ಅನರ್ಹತೆಗೊಳಗಾಗಿದ್ದರು. ಡಿಸೆಂಬರ್ 9 ರಂದು ನಡೆದ ಉಪ ಚುನಾವಣೆಯಲ್ಲಿ 12 ಜನ ಪುನಃ ಗೆದ್ದು ಬಿಜೆಪಿ ಸೇರಿದ್ದರು. ಈಗ ಈ ಎಲ್ಲ 12 ಶಾಸಕರಿಗೂ ಸಚಿವ ಸ್ಥಾನದ ಭರವಸೆ ನೀಡಲಾಗಿದೆ. ಆದರೆ, ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬರದಿರುವುದಕ್ಕೆ ಈ ಶಾಸಕರು ಯಡಿಯೂರಪ್ಪ ಮೇಲೆ ಮುನಿಸಿಕೊಂಡಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications